ಪಾವಗಡದಲ್ಲಿ ಬೃಹತ್ ಸೌರ ಶಕ್ತಿ ಪಾರ್ಕ್ ಸ್ಥಾಪನೆಗೆ ಅಸ್ತು
ಬೆಂಗಳೂರು, ಆಗಸ್ಟ್ 28: ತುಮಕೂರು ಜಿಲ್ಲೆ ಪಾವಗಡದಲ್ಲಿ ಸುಮಾರು 2,000 ಮೆಗಾ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಅದರೆ, ಈ ಯೋಜನೆಗೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರವೇ ಹೊಂದಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ದೇಶದಲ್ಲಿ ಒಟ್ಟು 1.75 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಗುರಿ ಹೊಂದಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಿಯೂಷ್ ಗೋಯಲ್ ಸುದ್ದಿಗೋಷ್ಠಿ ವಿವರ:
* ಪಾವಗಡದ ಸೌರಶಕ್ತಿ ಪಾರ್ಕಿಗೆ ಸುಮಾರು 10,000 ಎಕರೆ ಭೂಮಿ ಹೊಂದಿಸಬೇಕಿದೆ.
* ಪ್ರತಿ ಮೆಗಾ ವ್ಯಾಟ್ ಗೆ 20 ಲಕ್ಷ ರು ನಂತೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದೆ.
* ಕರ್ನಾಟಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದೆ. 4 ಸಾವಿರ ಸೋಲಾರ್ ಪ್ಲಾಂಟ್ಗಳನ್ನು ಸ್ಥಾಪಿಸಿರುವುದು ಒಳ್ಳೆಯ ಬೆಳವಣಿಗೆ. ರೈತರನ್ನು ಬಳಸಿಕೊಂಡು ಸೋಲಾರ್ ಉತ್ಪಾದಿಸುವ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
* ಕರ್ನಾಟಕದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ನೀಗಿಸಲು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಲ ರಾಜ್ಯಗಳಿಂದ ನೆರವು ನೀಡಲಾಗುವುದು.
ಡಿಕೆ ಶಿವಕುಮಾರ್ ಮಾತನಾಡಿ
* ಸೋಲಾರ್ ಉತ್ಪಾದನೆಗೆ ಸಂಬಂಧಿಸಿದಂತೆ ಮೇಲ್ಛಾವಣಿ ರೈತರ ಜಮೀನು ಬಳಸುವ ಯೋಜನೆಗಳು ಯಶಸ್ವಿಯಾಗಿವೆ.
* ಮೈಸೂರು ನಗರ ಸೌರಶಕ್ತಿ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ.
* 8,00,000 ಮನೆಗಳು, 36 ಕುಗ್ರಾಮ ಹಾಗೂ ರಾಜ್ಯ ಹಿಂದುಳಿದ ಪ್ರದೇಶಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಸರಿಯಾಗಿ ಸಿಕ್ಕಿಲ್ಲ.
* ಕೇಂದ್ರ ಸರ್ಕಾರದಿಂದ ಸಮರ್ಪಕ ಫೀಡರ್ ಲೈನ್ ಹಾಗೂ ಅನಿಯಮಿತ ವಿದ್ಯುತ್ ಪೂರೈಕೆಗಾಗಿ 800 ಕೋಟಿ ರು ಅನುದಾನ ಸಿಗಲಿದೆ ಎಂದರು. ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆಗೆ ಪೂರಕವಾಗಿ ಕರ್ನಾಟಕ ಕಾರ್ಯ ನಿರ್ವಹಿಸಲಿದೆ ಎಂದರು.












Click it and Unblock the Notifications