'ಕತ್ತಿ' ಹೆಸರನ್ನು ಕೈ ಮೇಲೆ ಬ್ಲೇಡಿನಿಂದ ಕುಯ್ದುಕೊಂಡ ಉಗ್ರಾಭಿಮಾನಿ
ಹುಕ್ಕೇರಿ (ಬೆಳಗಾವಿ ಜಿಲ್ಲೆ), ಏಪ್ರಿಲ್ 1: ಅಭಿಮಾನದ ಪರಿ ಹಲವು ರೀತಿಯಲ್ಲಿರುತ್ತದೆ. ನೆಚ್ಚಿನ ಸಿನಿಮಾ ನಟ-ನಟಿಯರ ಹೆಸರನ್ನು ಕೈ- ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಅಭಿಮಾನಿಗಳನ್ನು ನೋಡಿರುವ ಸಾಧ್ಯತೆ ಇರುತ್ತದೆ. ಆದರೆ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಅಭಿಮಾನಿಗಳಿಗೆ ಅದೆಲ್ಲಿಂದ ಪ್ರೀತಿ ಬರುತ್ತದೋ?
'ಸತೀಶ ಜಾರಕಿಹೊಳಿ ಬಣದ ಮೊಹಿತೆ- ಸುಕುಮಾರಗೆ ಕಾಂಗ್ರೆಸ್ ಟಿಕೆಟ್ ನೀಡಿ'
ಇಲ್ಲೊಬ್ಬ ಅಭಿಮಾನಿ ಮಹಾಶಯ ತನ್ನ ನೆಚ್ಚಿನ ನಾಯಕನ ಹೆಸರನ್ನು ಕೈ ಮೇಲೆ ಬ್ಲೇಡಿನಿಂದ ಕುಯ್ದುಕೊಂಡು, ಅಭಿಮಾನ ತೋರಿಸಿಕೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಿಜೆಪಿ ಯುವ ಮುಖಂಡ ಪವನ್ ಪಾಟೀಲ್ ಎಂಬಾತ ಹುಕ್ಕೇರಿ ಮತ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಹೆಸರನ್ನ 'ಕತ್ತಿ ಸಾಹುಕಾರ್' ಎಂದು ಬರೆದುಕೊಳ್ಳುವ ಮೂಲಕ ತನ್ನ ಅಭಿಮಾನವನ್ನು ತೋರಿಸಿಕೊಂಡಿದ್ದಾನೆ.
ತನ್ನ ಮನೆ ದೇವರಾದ ಮಂಗಸೂಳಿ ಮಲ್ಲಯ್ಯ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಹರಕೆ ಹೊತ್ತು, ತನ್ನ ಎಡಗೈ ಮೇಲೆ ಕತ್ತಿ ಸಾಹುಕಾರ್ ಅಂತ ಬರೆದುಕೊಂಡ ಪವನ್ ಪಾಟೀಲ್ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜತೆಗೆ ಈ ರೀತಿ ಅಭಿಮಾನ ತೋರಿಸುವುದು ಎಷ್ಟು ಸರಿ ಎಂಬುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.