ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್: ಮನೆಬಿಟ್ಟು ಹೋಗಿದ್ದ ಪ್ರೇಮಿಗಳ ಮದುವೆ ಮಾಡಿಸಿದ ಪೊಲೀಸ್
ಬೆಳಗಾವಿ, ಫೆಬ್ರವರಿ 01: ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಸುದ್ದಿ ಮಾಡಿದ್ದ ಹೊಸ ವಂಟಮೂರಿಯ ಪ್ರೇಮಿಗಳ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಪ್ರೇಮಿಗಳ ಮದುವೆ ಮಾಡಿಸಲಾಗಿದೆ. ಸದ್ಯ ಮನೆ ಬಿಟ್ಟು ಹೋಗಿದ್ದ ಹೊಸ ವಂಟಮೂರಿಯ ಪ್ರೇಮಿಗಳ ಮದುವೆ ನೋಂದಣಿಯಾಗಿದೆ.
ಕಳೆದ ಎರಡು ತಿಂಗಳ ಹಿಂದೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ನಡೆದಿತ್ತು. ಪ್ರೇಮಿಗಳು ಮನೆ ಬಿಟ್ಟು ಹೋದರು ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಲ್ಲೆ ನಡೆದ ದಿನ (2023ರ ಡಿಸೆಂಬರ್ 11) ಪ್ರೇಮಿಗಳು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಜನವರಿ 30ರಂದು ಅವರ ಮದುವೆಯನ್ನು ಬೆಳಗಾವಿಯ ಉದ್ಯಮ ಭಾಗದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಸಂಬಂಧಿ ಮಹಿಳೆಯರು ಇದಕ್ಕೆ ಸಾಕ್ಷಿ ಸಹಿ ಕೂಡ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಹಿನ್ನಲೆ ಏನು..?
ವಂಟಮುರಿ ಗ್ರಾಮದ ದುಂಡಪ್ಪ ಅಶೋಕ ನಾಯಕ್ ಹಾಗೂ ಅದೇ ಗ್ರಾಮದ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಪೋಷಕರ ವಿರೋಧ ವ್ಯಕ್ತವಾಗಿತ್ತು. ಯುವತಿಯ ನಿಶ್ಚಿತಾರ್ಥ ನಿಗದಿಯಾಗಿತ್ತು ಅಲ್ಲದೇ ಅಂದೇ ದಿನಾಂಕ ಮದುವೆ ನಿಗದಿ ಮಾಡಲು ಯುವತಿಯ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.
ಮನೆಯಲ್ಲಿ ಮದುವೆ ಸಂಭ್ರಮಕ್ಕೆ ಸಿದ್ಧತೆಯಾಗುತ್ತಿದ್ದರೆ ಇತ್ತ ಯುವತಿ ಪ್ರೀತಿಸಿದ ಯುವಕ ದುಂಡಪ್ಪ ಜೊತೆ ರಾತ್ರೋರಾತ್ರಿ ಮನೆ ಬಿಟ್ಟು ಊರಿಂದ ಪರಾರಿಯಾಗಿದ್ದಳು. ಮಗಳು ಮನೆ ಬಿಟ್ಟು ಹೋಗಿರುವ ಕಾರಣ ರೊಚ್ಚಿಗೆದ್ದ ಯುವತಿಯ ಕುಟುಂಬಸ್ಥರು ಯುವಕನ ಮನೆಯವರನ್ನು ಟಾರ್ಗೆಟ್ ಮಾಡಿದ್ದಾರೆ.

ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯುವಕನ ಮನೆ ಮೇಲೆ ದಾಳಿ ನಡೆಸಿ ರಾತ್ರೋರಾತ್ರಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿದ್ದರು. ಅಲ್ಲದೇ ಯುವಕನ ಅಜ್ಜಿ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಿ, ತಾಯಿಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಬಳಿಕ ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದರು. ಈ ಘಟನೆ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ರಾಜಕೀಯ ನಾಯಕರು ಕೂಡ ಪ್ರವೇಶಿಸಿದ್ದರು. ಅಲ್ಲದೇ ಬೆಳಗಾವಿ ಅಧಿವೇಶನದಲ್ಲೂ ಈ ಪ್ರಕರಣದ ಚರ್ಚೆ ನಡೆದಿದ್ದು, ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿದ್ದರು.












Click it and Unblock the Notifications