ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದ ಆರ್.ಬಿ.ತಿಮ್ಮಾಪೂರ
ಬೆಳಗಾವಿ, ಜೂನ್ 30: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಕ್ಷೀಣ ಧ್ವನಿ ಮತ್ತೆ ಮತ್ತೆ ಚಿಗುರೊಡೆದಿದೆ. ಇಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಪ್ರತ್ಯೇಕ ರಾಜ್ಯದ ವಿಷಯವನ್ನು ತೆಗೆದಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ಮಾತನಾಡಿದ ಆರ್.ಬಿ.ತಿಮ್ಮಾಪುರ ಅವರು, ಎಲ್ಲ ಪಕ್ಷಗಳು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡದಿದ್ದರೆ ಪ್ರತ್ಯೇಕ ಧ್ವನಿ ಜನರದ್ದು ಆಗುತ್ತೆ. ಜನರ ಧ್ವನಿ ಪ್ರತ್ಯೇಕ ರಾಜ್ಯದ್ದಾದರೆ ನನ್ನ ಧ್ವನಿಯು ಅದೇ ಇರುತ್ತೆ ಎಂದು ತಿಮ್ಮಾಪುರ ಗುಡುಗಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷಿಸಿರುವ ಪಕ್ಷಗಳಿಗೆ ಬುದ್ಧಿ ಕಲಿಸಲು ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಮನಸ್ಸಾಗುತ್ತದೆ ಆದರೆ ಅಖಂಡ ಕರ್ನಾಟಕವೇ ಇರಲಿ ಎಂಬ ಬಯಕೆ ನನ್ನದು ಎಂದು ಅವರು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ಬೀಳುತ್ತೆ ಎಂದು ಮಾಧ್ಯಮವರು ಹೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತೆ. ಮಾಧ್ಯಮದವರು ಸಮ್ಮಿಶ್ರ ಸರ್ಕಾರ ಈಗ ಹೋಗುತ್ತೆ... ಆಗ ಹೋಗುತ್ತೆ ಅಂತಾ ನರಿ ಬಂತೂ ಹುಲಿ ಬಂತೂ ಅಂತಾ ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಆಂತರಿಕವಾಗಿ ಅನೇಕ ಚರ್ಚೆಗಳು ಆಗುತ್ತವೆ. ಅವು ಸರ್ಕಾರದ, ಪಕ್ಷದ ನಿರ್ಧಾರ ಆಗುವುದಿಲ್ಲ. ಮಾಧ್ಯಮದವರಿಗೆ ಸಮ್ಮಿಶ್ರ ಸರ್ಕಾರ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ಆರೋಪ ಮಾಡಿದರು.
ನನಗೂ ಮಂತ್ರಿ ಆಗುವ ಆಸೆಯಿದೆ ಆದರೆ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುವುದಿಲ್ಲ. ಒಳ್ಳೆಯ ಕೆಲಸ ಮಾಡುತ್ತೇನೆ ಸಚಿವ ಮಾಡುವಂತೆ ಹೇಳಿದ್ದೇನೆ. ನಾನು ಯಾವತ್ತು ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದೇನೆ ಹೊರತು ಅತೃಪ್ತರ ಪಟ್ಟಿಯಲ್ಲಿ ಅಲ್ಲಾ ಎಂದು ಬೆಳಗಾವಿಯಲ್ಲಿ ಆರ.ಬಿ.ತಿಮ್ಮಾಪುರ ಹೇಳಿದರು.











Click it and Unblock the Notifications