ವಿಧಾನ ಪರಿಷತ್ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣಕ್ಕೆ!?
ಬೆಳಗಾವಿ, ನವೆಂಬರ್ 17: ಡಿಸೆಂಬರ್ 10ರಂದು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದೇ ವೇಳೆ ಬೆಳಗಾವಿಯ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದು ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್, ಬಿಜೆಪಿ ಇನ್ನೂ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ ಕಾಂಗ್ರೆಸ್ನಿಂದ ಚನ್ನರಾಜ್ ಹಟ್ಟಿಹೊಳಿ ಹಾಗೂ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಇಬ್ಬರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣಕ್ಕೆ ಇಳಿಯುತ್ತಿರೋದು ದೊಡ್ಡ ತಲೆನೋವು ಆಗಿದೆ.

ಜಾರಕಿಹೊಳಿ ವರ್ಸಸ್ ಹೆಬ್ಬಾಳ್ಕರ್ ನಡುವಿನ ಹೋರಾಟ
ಜಾರಕಿಹೊಳಿ ಕುಟುಂಬದ ಸದಸ್ಯನ ಸ್ಪರ್ಧೆಯಿಂದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದು, ಇಬ್ಬರು ಆಕಾಂಕ್ಷಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಮೂರು ಜನ ಜಾರಕಿಹೊಳಿ ಸಹೋದರರು (ಸತೀಶ್, ರಮೇಶ್ ಮತ್ತು ಬಾಲಚಂದ್ರ) ಈಗಾಗಲೇ ವಿಧಾನಸಭೆ ಸದಸ್ಯರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಸಹೋದರ ಪರಿಷತ್ ಮೂಲಕ ರಾಜಕೀಯ ಪ್ರವೇಶಕ್ಕೆ ತಾಲೀಮು ಆರಂಭಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮತ್ತೊಂದು ಹೋರಾಟಕ್ಕೆ ಸಾಕ್ಷಿ ಆಗಲಿದ್ದು, ಪಿಎಲ್ಡಿ ಬ್ಯಾಂಕ್ ಚುನಾವಣೆ ಬಳಿಕ ಬೆಳಗಾವಿ ಪರಿಷತ್ ಎರಡು ಸ್ಥಾನಗಳ ಚುನಾವಣೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಆಗಿದೆ.

ಜಾರಕಿಹೊಳಿ ಸಹೋದರರಿಂದ ರಾಜಕೀಯ ರಣತಂತ್ರ
ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಫಿಕ್ಸ್ ಆಗಿದ್ದು, ನವೆಂಬರ್ 23ರಂದು ಸಂಕಷ್ಟ ಚತುರ್ಥಿಯಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈಗಾಗಲೇ ಒಂದು ಸುತ್ತು ಪ್ರಚಾರ ನಡೆಸಿರುವ ಲಖನ್ ಜಾರಕಿಹೊಳಿ ಬೆನ್ನಿಗೆ ರಮೇಶ್, ಬಾಲಚಂದ್ರ ಜಾರಕಿಹೊಳಿ ನಿಂತಿದ್ದಾರೆ. ಲಖನ್ ಗೆಲ್ಲಿಸಲು ಎಲ್ಲಾ ರೀತಿಯ ರಾಜಕೀಯ ರಣತಂತ್ರ ಹೆಣೆದ ಸಹೋದರರು. ಗೋಕಾಕ್, ಮೂಡಲಗಿ, ಯಮಕನಮರಡಿ, ಸವದತ್ತಿ, ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಹೆಚ್ಚಿನ ಮತ ಪಡೆಯಲು ಪ್ಲ್ಯಾನ್ ಮಾಡಿದ್ದಾರೆ.

ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳು ಯಾರು?
ಕಾಂಗ್ರೆಸ್ನಿಂದ ಚನ್ನರಾಜ್ ಹಟ್ಟಿಹೊಳಿ ಬಹುತೇಕ ಫಿಕ್ಸ್ ಆಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಹೆಬ್ಬಾಳ್ಕರ್ ಪ್ರಭಾವ ಬಳಿಸಿ ಸಹೋದರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಲೋಕಸಭಾ ಉಪ ಚುವಾವಣೆ, ಡಿಸಿಸಿ ಬ್ಯಾಂಕ್ ಸಂದರ್ಭದಲ್ಲಿ ಚನ್ನರಾಜ್ ಹೆಸರು ಪ್ರಸ್ತಾಪ ಆಗಿತ್ತು. ಕೊನೆಗೂ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಬಿಜೆಪಿಯಿಂದ ಮಹಾಂತೇಶ ಕವಟಗಿಮಠಗೆ ಟಿಕೆಟ್ ಬಹುತೇಕ ಖಚಿತವಾಗಿದ್ದು, ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಕಳೆದ ಎರಡು ಸಲ ವಿಧಾನ ಪರಿಷತ್ಗೆ ಆಯ್ಕೆ ಆಗಿರುವ ಕವಟಗಿಮಠಗೆ ಅನುಭವವಿದ್ದು, ಜಾರಕಿಹೊಳಿ ಕುಟುಂಬ, ಹೆಬ್ಬಾಳ್ಕರ್ ಫೈಟ್ ನಡುವೆ ಹೋರಾಟ ನಡೆಸಲು ಕವಟಗಿಮಠ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಮತದಾನ
ಕರ್ನಾಟಕದ ಮೇಲ್ಮನೆ ವಿಧಾನ ಪರಿಷತ್ಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, 2022ರ ಜನವರಿ 5ರಂದು 25 ಪರಿಷತ್ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.












Click it and Unblock the Notifications