ಹುಬ್ಬಳ್ಳಿಯಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಬಂಧನ
ಬೆಳಗಾವಿ,ಆ.2: ಯಳ್ಳೂರಿಗೆ ತೆರಳುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸಲು ಯಾರ ಅಪ್ಪಣೆಯೂ ಬೇಕಿಲ್ಲ. ಬೆಳಗಾವಿಯಲ್ಲಿ ಭಯ ಹುಟ್ಟುಹಾಕುವಂತಹ ಎಂಇಎಸ್ ಪರವಾಗಿ ಕನ್ನಡ ಹೋರಾಟಗಾರರನ್ನು ಬಂಧಿಸುತ್ತಾರೆ.ನಮ್ಮ ಹೋರಾಟವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಇಎಸ್, ಶಿವಸೇನೆ ನಿಷೇಧಕ್ಕೆ ಒತ್ತಾಯಿಸಿ ಕರವೇ ಶನಿವಾರ ಹಮ್ಮಿಕೊಂಡ ಯಳ್ಳೂರು ಚಲೋ ಚಳುವಳಿಗೆ ಬೆಳಗಾವಿ ಪೊಲೀಸರು ತಡೆ ಒಡ್ಡಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಯಾವುದೇ ಸಭೆ ಅಥವಾ ಮೆರವಣಿಗೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾ ಎಸ್ಪಿ ಚಂದ್ರಗುಪ್ತ ತಿಳಿಸಿದ್ದಾರೆ.
ಈಗಾಗಲೇ 50 ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಎಲ್ಲಾ ರಸ್ತೆಗಳಲ್ಲಿ ನಾಕಾಬಂದಿ ಹಾಕಿದ್ದಾರೆ. ಧಾರವಾಡ, ಹಾವೇರಿ ಪೊಲೀಸರ ಜೊತೆಗೆ 20 ಕೆಎಸ್ಆರ್ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.[ಗಡಿಭಾಗದಲ್ಲಿ ಗಡಿಬಿಡಿ, ಬೆಳಗಾವಿಯಲ್ಲಿ ಏನಾಗುತ್ತಿದೆ?]
ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕನ್ನಡ ಹೋರಾಟಗಾರರಿಗೆ ಯಳ್ಳೂರಿಗೆ ಹೋಗಲು ಅವಕಾಶ ನಿರಾಕರಿಸಿ, ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿಗೆ ಬರಲು ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ ಕ್ರಮ ಖಂಡಿಸಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಯಳ್ಳೂರು ಚಲೋಗೆ ಕರೆ ನೀಡಿದೆ.
ಶಿವಸೇನೆ ಕಿತಾಪತಿ ಆರಂಭ: ಯಳ್ಳೂರು ಘಟನೆ ಹಿನ್ನೆಲೆಯ ಗಲಾಟೆ ಮಾಡಿ ಜನರ ಶಾಂತಿ ಕದಡುವ ಎಂಇಎಸ್ ಪ್ರಯತ್ನ ವಿಫಲವಾಗುತ್ತಿದ್ದಂತೆ ಇದೀಗ ಶಿವಸೇನೆ ಕಿತಾಪತಿ ಆರಂಭಿಸಿದೆ.
ಶುಕ್ರವಾರ ಬೆಳಗಾವಿಗೆ ಆಗಮಿಸಿದ್ದ ಶಿವಸೇನೆಯ ಶಾಸಕರು ಮತ್ತು ಪದಾಧಿಕಾರಿಗಳು ಬೆಳಗಾವಿ ಸಮೀಪದ ಮಹಾರಾಷ್ಟ್ರ ಭಾಗಕ್ಕೆ ಸೇರಿರುವ ಶಿನೋಳಿಯಲ್ಲಿ ಕನ್ನಡ ಬಾವುಟ ಸುಟ್ಟು ಪ್ರತಿಭಟನೆ ನಡೆಸಿದರು. ಕರ್ನಾಟಕ ಸರಕಾರದ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹನ ಮಾಡಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಯಳ್ಳೂರಿಗೆ ತೆರಳಲು ಆಗಮಿಸಿದ್ದ ಶಿವಸೇನೆಯ ಮುಂಬಯಿ ಪಶ್ಚಿಮ ಕ್ಷೇತ್ರದ ಶಾಸಕ ದಿವಾಕರ ರಾವುತೆ, ಹಾಥ್ಕಣಗಲಾ ಶಾಸಕ ಸುಜಿತ್ ಮಿಂಚೇಕರ್, ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ, ಚಂದಗಡ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಜಾಧವ ಮತ್ತು ಇತರೆ ಪ್ರಮುಖರು ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡದೇ ಹೋಟೆಲ್ನಲ್ಲಿ ರಹಸ್ಯ ಸಭೆ ನಡೆಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಭೆ ನಡೆಸದಂತೆ ಹೇಳಿದ್ದಾರೆ. ಸೂಚನೆ ನೀಡಿದರೂ ಸಭೆ ನಡೆಸಲು ಮುಂದಾದಾಗ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಆಗ ಅಲ್ಲಿಂದ ಶಾಸಕರು ಪರಾರಿಯಾದರು. ಇದೇ ವೇಳೆ, ಶಾಸಕರ ಕಾರನ್ನು ಬೆನ್ನಟ್ಟಿದ ಉದ್ಯಮಬಾಗ ಪೊಲೀಸರ ವಾಹನ ಟಿಳಕವಾಡಿ 1ನೇ ಗೇಟ್ ಬಳಿ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿತು. ವಾಹನದಲ್ಲಿದ್ದ ಸಿಪಿಐ ಯು.ಬಿ.ಯಲಿಗಾರ, ಇಬ್ಬರು ಪೊಲೀಸ್ ಪೇದೆ ಹಾಗೂ ವಾಹನ ಚಾಲಕ ಅಪಾಯದಿಂದ ಪಾರಾದರು.