ಸುರೇಬಾನದ ಪರಿಹಾರ ಕೇಂದ್ರದಲ್ಲಿ ಐದು ವರ್ಷದ ಬಾಲಕ ಸಾವು
ಬೆಳಗಾವಿ, ಸೆಪ್ಟೆಂಬರ್ 10: ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನೊಬ್ಬ ಸುರೇಬಾನದ ಎಪಿಎಂಸಿಯ ಪರಿಹಾರ ಕೇಂದ್ರದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಂಪಿಹೋಳಿ ಗ್ರಾಮದ ನಿವಾಸಿಯಾದ ರಹೇಮಾನ್ ಸಾಬ ಮುಲ್ಲನ್ನವರ ಮತ್ತು ಫರಿದಾ ಬೇಗಂ ದಂಪತಿ ಮಗನಾದ ಅಬ್ದುಲ್ ಸಾಬ ಮುಲ್ಲನ್ನವರ ಎಂಬ ಐದು ವರ್ಷದ ಬಾಲಕ ಜ್ವರದಿಂದ ಬಳಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಬೆಳಗಾವಿಯಲ್ಲಿ ಭಾರೀ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದು ಪ್ರವಾಹ ಸಂಭವಿಸಿತ್ತು. ಪ್ರವಾಹದಿಂದಾಗಿ ಹಿರೆಹಂಪಿಹೊಳಿ ಗ್ರಾಮ ಜಲಾವೃತವಾಗಿದ್ದು, ಅಲ್ಲಿನ ಜನರು ಸುರೇಬಾನದ ಎಪಿಎಂಸಿ ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡಿದ್ದರು. ಒಂದೂವರೆ ತಿಂಗಳಿಂದಲೂ ದಂಪತಿ ಇಲ್ಲೇ ವಾಸಿಸುತ್ತಿದ್ದರು.

ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು, ಹಸಿವಿನಿಂದ ಪುಟ್ಟ ಬಾಲಕ ಪ್ರಾಣ ಬಿಟ್ಟಿದ್ದಾನೆ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಬಾಲಕ ಹಸಿವಿನಿಂದ ಸಾವನ್ನಪ್ಪಿಲ್ಲ. ಆತನಿಗೆ ಜ್ವರ ಬಂದಿತ್ತು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಜ್ವರ ನಿಯಂತ್ರಣಕ್ಕೆ ಬಾರದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications