'ಬೈಲಹೊಂಗಲದಲ್ಲಿ ಬಿಜೆಪಿ ಸೋಲಿಸುವುದೇ ನನ್ನ ಗುರಿ'
ಬೆಳಗಾವಿ, ಏಪ್ರಿಲ್ 16: 'ಬೈಲಹೊಂಗಲದಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸುವುದೇ ನನ್ನ ಗುರಿ' ಎಂದು ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಅವರು ಘೋಷಿಸಿದ್ದಾರೆ.
ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷರ ತವರು ಬೈಲಹೊಂಗಲ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಅವರು ಪಕ್ಷೇತರರಾಗಿ ಕಣಕ್ಕಿಳಿದು ಕಮಲ ಪಡೆಗೆ ಸೆಡ್ಡು ಹೊಡೆಯಲು ಜಗದೀಶ್ ಮುಂದಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದ ಜಗದೀಶ್ ಅವರಿಗೆ ಜೆಡಿಎಸ್ ಟಿಕೆಟ್ ಸಿಗುವ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಮೆಟಗುಡ್ಡ ನಡುವೆ ಕಿತ್ತಾಟವಾಗಿದ್ದು, ಸಂಧಾನ ಸಫಲವಾಗದ ಹಿನ್ನಲೆಯಲ್ಲಿ ಜೆಡಿಎಸ್ ಸೇರಿಲ್ಲ.
ಹೀಗಾಗಿ, ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕೆಜೆಪಿಯಿಂದ ಬಂದಿರುವ ಡಾ. ವಿಶ್ವನಾಥ್ ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಜಗದೀಶ್ ಮೆಟಗುಡ್ಡ ಅಸಮಾಧಾನಗೊಂಡು ಬಿಜೆಪಿಯಿಂದ ಹೊರಬಂದಿದ್ದರು.
ಈಗ ಬೆಂಬಲಿಗರ ಸಲಹೆ ಮೇರೆಗೆ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.
ಜಿ.ಪಂ. ಸದಸ್ಯರಾಗಿರುವ ಶಂಕರ ಮಾಡಲಗಿ ಅವರಿಗೆ ಬೈಲಹೊಂಗಲ ಅಭ್ಯರ್ಥಿಯನ್ನಾಗಿ ಈಗಾಗಲೇ ಜೆಡಿಎಸ್ ಘೊಷಿಸಿದ್ದು, ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಿಸಲಾಗಿದೆ. ಕಾಂಗ್ರೆಸ್ಸಿನಿಂದ ಮಹಂತೇಶ್ ಎಸ್ ಕೌಜಲಗಿ ಸ್ಪರ್ಧಿಸುತ್ತಿದ್ದಾರೆ.












Click it and Unblock the Notifications