ಕುತೂಹಲ ಮೂಡಿಸಿದ ಪ್ರಕಾಶ್ ಹುಕ್ಕೇರಿ-ಸಿಎಂ ಭೇಟಿ
ಬೆಳಗಾವಿ, ನವೆಂಬರ್ 24: ಡಿಸೆಂಬರ್ 05 ರಂದು 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ಮತದಾನ ನಡೆಯಲಿದ್ದು, ಮೂರು ಪಕ್ಷಗಳ ನಾಯಕರಿಂದ ಭರ್ಜರಿ ಪ್ರಚಾರ ನಡೆದಿದೆ. ಈಗ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿರುವುದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ಭೇಟಿ.
ಹೌದು, ಬೆಳಗಾವಿ ಜಿಲ್ಲೆಯ ಪ್ರಭಾವಿ 'ಕೈ' ನಾಯಕ ಪ್ರಕಾಶ್ ಹುಕ್ಕೇರಿ ದಿಢೀರ್ ಆಗಿ ಸಿಎಂ ಭೇಟಿಯಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಆತಂಕ ತರುವ ಸುದ್ಧಿಯಾಗಿದೆ. ನಿನ್ನೆ ಸಂಜೆ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಬಿಜೆಪಿಗೆ ಬೆಂಬಲ ಕೊಡಲಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ.
15 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ: ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ
ಪ್ರಕಾಶ್ ಹುಕ್ಕೇರಿ ಈ ಉಪ ಚುನಾವಣೆಯಲ್ಲಿ ಕಾಗವಾಡ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಬಿಜೆಪಿಯಿಂದ ವಲಸೆ ಬಂದ ರಾಜು ಕಾಗೆಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದ್ದಂತೆಯೇ ಪ್ರಚಾರದಿಂದ ದೂರವುಳಿದಿದ್ದರು. ಇಲ್ಲಿಯವರೆಗೂ ಅವರು ಪಕ್ಷದ ಪರ ಬಹಿರಂಗವಾಗಿ ಪ್ರಚಾರ ಕಣಕ್ಕೆ ಇಳಿದಿಲ್ಲ. ಇದು ಅಭ್ಯರ್ಥಿ ರಾಜು ಕಾಗೆಯನ್ನು ಚಿಂತೆಗೀಡು ಮಾಡಿದೆ.
ಕಾಗವಾಡ; ಉಪಚುನಾವಣೆ ಹೊತ್ತಲ್ಲಿ ಬಂತು "ವಾಮಾಚಾರ"ದ ಗುಮ್ಮ
ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರನ್ನು ಈ ಚುನಾವಣಾ ಸಮಯದಲ್ಲಿ ಗೌಪ್ಯವಾಗಿ ಭೇಟಿಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರಾ? ಅಥವಾ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರಾ ಕಾದು ನೋಡಬೇಕು. ಕಾಗವಾಡ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀಮಂತ್ ಪಾಟೀಲ್, ಕಾಂಗ್ರೆಸ್ ನಿಂದ ರಾಜು ಕಾಗೆ ಸ್ಪರ್ಧಿಸುತ್ತಿದ್ದು, ಜೆಡಿಎಸ್ ಪಕ್ಷವು ಶ್ರೀಶೈಲ ತುಗಶೆಟ್ಟಿಗೆ ಟಿಕೆಟ್ ನೀಡಿದೆ.