ಪಕ್ಷದ ಇಬ್ಬರು ಹಿರಿಯ ಮುಖಂಡರ ಮೇಲೆ ಬಿಜೆಪಿ ಶಿಸ್ತುಕ್ರಮದ 'ಕೆಚ್ಚೆದೆ' ತೋರುವುದೇ?
ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಹನ್ನೊಂದು, ಜೆಡಿಎಸ್ ಎರಡು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಜಯಶೀಲರಾಗಿದ್ದಾರೆ.
ಆ ಮೂಲಕ, ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತವನ್ನು ಪಡೆಯಲು ಒಂದು ಸ್ಥಾನದ ಕೊರತೆ ಉಂಟಾಗಿದೆ. 2015ರ ಚುನಾವಣೆಗೆ ಹೋಲಿಸಿದರೆ, ಬಿಜೆಪಿಗೆ ಐದು ಸ್ಥಾನ ಲಾಭವಾದರೆ, ಕಾಂಗ್ರೆಸ್ಸಿಗೆ ಮೂರು ಮತ್ತು ಜೆಡಿಎಸ್ಸಿಗೆ ಎರಡು ಸ್ಥಾನದ ನಷ್ಟವುಂಟಾಗಿದೆ.
ಪ್ರತಿಷ್ಠೆಯ ಆಖಾಡದಲ್ಲಿ ಗೆದ್ದ ಡಿಕೆಶಿ, ಜಾರಕಿಹೊಳಿ: ಬಿಜಿಪಿ ಸೋಲಿನ ರಹಸ್ಯ ಬಿಚ್ಚಿಟ್ಟ ಲಖನ್
ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಕಣದಲ್ಲಿದ್ದರೂ, ಬೇರೆ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಹಿರಿಯ ಶಾಸಕರ ವಿಚಾರದಲ್ಲಿ ಬಿಜೆಪಿ ಏನು ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ವಿಚಾರ ಈಗ ಮುನ್ನಲೆಗೆ ಬಂದಿದೆ. ಒಬ್ಬರ ಮೇಲೆ ಈಗಾಗಲೇ ಬಿಜೆಪಿ ಕ್ರಮ ತೆಗೆದುಕೊಂಡಾಗಿದೆ.
ಈ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, "ಈ ಹಿಂದೆ ಕಾಂಗ್ರೆಸ್ ಶಿಸ್ತುಕ್ರಮ ಜರಗಿಸಿದ್ದಕ್ಕೆ ಬಿಜೆಪಿಯವರು ಮೂಗು ತೂರಿಸಿದ್ದರು. ಈಗ ಅವರ ಪಕ್ಷದ ನಾಯಕರ ವಿಚಾರದಲ್ಲಿ ಬಿಜೆಪಿ ಏನು ಕ್ರಮ ತೆಗೆದುಕೊಳ್ಳಲಿದೆ"ಎಂದು ಪ್ರಶ್ನಿಸಿದ್ದಾರೆ.
ಮಂಥರ್ ಗೌಡ ಬಿಜೆಪಿಯ ಹಿರಿಯ ಮುಖಂಡ ಎ.ಮಂಜು ಅವರ ಪುತ್ರ
ವಿಧಾನ ಪರಿಷತ್ ಚುನಾವಣೆಯಲ್ಲಿ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಥರ್ ಗೌಡ ಕಣದಲ್ಲಿದ್ದರು. ಇವರು ಬಿಜೆಪಿಯ ಹಿರಿಯ ಮುಖಂಡ ಎ.ಮಂಜು ಅವರ ಪುತ್ರ. ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಿರುವುದಕ್ಕೆ ರಾಜ್ಯ ಬಿಜೆಪಿಯ ಶಿಸ್ತು ಸಮಿತಿ ಕ್ರಮ ತೆಗೆದುಕೊಂಡಿತ್ತು. ಆದರೆ, ಇದ್ಯಾವುದಕ್ಕೂ ಕ್ಯಾರೇ ಅನ್ನದ ಮಂಜು, ಮಗನ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈಗಾಗಲೇ, ಮಂಡ್ಯ ಜಿಲ್ಲೆಯ ಜವಾಬ್ದಾರಿಗಳಿಂದ ಮತ್ತು ಪ್ರಭಾರಿ, ಪಕ್ಷದ ಜವಾಬ್ದಾರಿಗಳಿಂದ ಬಿಜೆಪಿ ಅವರನ್ನು ಮುಕ್ತಗೊಳಿಸಿತ್ತು. ಕೊಡಗಿನಲ್ಲಿ ಮಂಥರ್ ಗೌಡ ಸೋಲು ಅನುಭವಿಸಿದ್ದಾರೆ.
ಪಕ್ಷದ ವಿರುದ್ದ ಸಡ್ಡು ಹೊಡೆದ ಜಾರಕಿಹೊಳಿ ಕುಟುಂಬ ಅಭ್ಯರ್ಥಿ
ಬೆಳಗಾವಿಯಲ್ಲಿ ಪಕ್ಷದ ವಿರುದ್ದ ಸಡ್ಡು ಹೊಡೆದ ಜಾರಕಿಹೊಳಿ ಕುಟುಂಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವನ್ನೂ ಕಂಡರು. ಇವರಿಂದಾಗಿ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಸೋಲು ಕಾಣುವಂತಾಯಿತು. ತನ್ನ ಸಹೋದರನ ಪರವಾಗಿ ನಿಂತ, ಮಾಜಿ ಸಚಿವ, ಪ್ರಭಾವಿ ಮುಖಂಡ ರಮೇಶ್ ಜಾರಕಿಹೊಳಿ ವಿರುದ್ದ ಬಿಜೆಪಿ ಶಿಸ್ತು ಕ್ರಮ ತೆಗೆದುಕೊಳ್ಳುವುದೇ?
ಸಹೋದರನ ಬೆನ್ನಿಗೆ ನಿಂತವರು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಇದೇ ರೀತಿ ಪ್ರತ್ಯಕ್ಷವಾಗಿ ಇಲ್ಲದಿದ್ದರೂ, ಪರೋಕ್ಷವಾಗಿ ಸಹೋದರನ ಬೆನ್ನಿಗೆ ನಿಂತವರು ಅರಭಾವಿ ಶಾಸಕ ಮತ್ತು ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ. "ಕುಟುಂಬ ಅಂತ ಬಂದಾಗ ನಾವೆಲ್ಲಾ ಒಂದೇ, ರಾಜಕಾರಣದಲ್ಲಿ ಏನೇ ಇದ್ದರೂ ಕುಟುಂಬ ವಿಚಾರದಲ್ಲಿ ನಾವು ಯಾರನ್ನೂ ಬಿಟ್ಟು ಕೊಡುವುದಿಲ್ಲ"ಎಂದು ಬಾಲಚಂದ್ರ ಜಾರಕಿಹೊಳಿ ನೇರವಾಗಿ ಹೇಳಿದ್ದರು. ಈಗ ಇವರ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳಲು ಬಿಜೆಪಿ ಮುಂದಾಗಲಿದೆಯೇ ಎನ್ನುವುದಿಲ್ಲಿ ಪ್ರಶ್ನೆ.
ಬಿಜೆಪಿ ಸೋಲಿಸಿದ್ದು ಸಹೋದರರಿಬ್ಬರು ಎಂದ ಸಿದ್ದರಾಮಯ್ಯ
"ಬಿಜೆಪಿ ಸೋಲುವುದಕ್ಕೆ ಕಾರಣ ಮುಂದಿನ ದಿನದಲ್ಲಿ ಹೇಳುತ್ತೇನೆ. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ಹೇಳಿಕೆ ನೀಡುತ್ತೇನೆ. ಡಿಕೆಶಿ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ" ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
"ಬಿಜೆಪಿಯವರಿಗೆ ಧಮ್ ಇಲ್ಲ, ಪಕ್ಷೇತರ ಅಭ್ಯರ್ಥಿಯನ್ನು ಹಾಕಲು ಬಿಜೆಪಿಯವರೇ ಅನುಕೂಲ ಮಾಡಿಕೊಟ್ಟರು. ಬಿಜೆಪಿಯನ್ನು ಸೋಲಿಸಿದ್ದು ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ"ಎಂದು ಸಿದ್ದರಾಮಯ್ಯನವರು ಆರೋಪಿಸಿದ್ದಾರೆ.
"ನಾವು ಗೆಲ್ಲುವುದಕ್ಕಾಗಿ ಸ್ಪರ್ಧಿಸಿದ್ದೆವು, ಸೋಲಲು ಅಲ್ಲ"ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.