ಸರ್ಕಾರವನ್ನೇ ನಡುಗಿಸಿದ್ದ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನಿಧನ
ಬೆಳಗಾವಿ, ಅಕ್ಟೋಬರ್ 29: ರಾಜ್ಯ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿದ್ದ ವಿವಾದಿತ ಬೆಳಗಾವಿಯ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷ ಚುನಾವಣೆ ವೇಳೆ ಉಭಯ ಬಣಗಳ ರಾಜಿ ಸಂಧಾನದ ಅಧ್ಯಕ್ಷ ರಾಗಿದ್ದ ಮಹದೇವ ಪಾಟೀಲ್ ಸೋಮವಾರ ನಿಧನರಾಗಿದ್ದಾರೆ.
82 ವರ್ಷದ ವಯಸ್ಸಿನ ಮಹದೇವ ಪಾಟೀಲ್ ತೀವ್ರ ಹೃದಯಾಘಾತಕ್ಕೊಳಗಾಗಿದ್ದರು. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಾಜ್ಯದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಇಡೀ ರಾಜ್ಯದ ಗಮನವನ್ನು ಸೆಳೆದಿತ್ತು.
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬಣಗಳ ನಡುವೆ ಆಯಾ ಬಣಗಳ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಕುರಿತುಂತೆ ಪೈಪೋಟಿ ಏರ್ಪಟ್ಟಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಲಕ್ಷ್ಮೀ ಪಟ್ಟು ಹಿಡಿದಿದ್ದರು.

ಆಗ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರನ್ನು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಲು ಪಣ ತೊಟ್ಟಿದ್ದರು. ಇದರಿಂದಾಗಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ.ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ ಏರ್ಪಟ್ಟಿತ್ತು.
ಇಷ್ಟೆಲ್ಲಾ ವಾದ ವಿವಾದಗಳ ನಂತರ ಸೆಪ್ಟೆಂಬರ್ 7 ರಂದು ನಡೆದ ಚುನಾವಣೆ ವೇಳೆ ಎರಡೂ ಬಣಗಳ ಒಮ್ಮತದ ಅಭ್ಯರ್ಥಿಯಾಗಿ ಮಹದೇವ ಪಾಟೀಲ್ ಆಯ್ಕೆಯಾಗಿದ್ದರು. ಹೀಗಾಗಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಿಂದ ಹಿಡಿದು ಬೆಳಗಾವಿ ವರೆಗೆ ಭಾರಿ ಸುದ್ದಿಮಾಡಿದ್ದ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷರಾಗಿ ಮಹದೇವ್ ಪಾಟೀಲ್ ಆಯ್ಕೆಯಾಗಿದ್ದರು.
ಮತ್ತೊಂದು ಬಾರಿ ಪಿಎಲ್ಡಿ ಬ್ಯಾಂಕ್ ಸುದ್ದಿಯಲ್ಲಿದೆ ಅಷ್ಟೇ ಅಲ್ಲ ಮಹದೇವ ಪಾಟೀಲ್ ನಿಧನದಿಂದ ತೆರವಾದ ಅಧ್ಯಕ್ಷ ಹುದ್ದೆಗೆ ಮತ್ತೊಂದು ಚುನಾವಣೆ ನಡೆಯಬೇಕಾಗಿದ್ದು,ಮುಂದಿನ ಬಾರಿಯ ಅಧ್ಯಕ್ಷ ಹುದ್ದೆ ಚುನಾವಣೆ ಯಾವ ರೀತಿಯ ರಾಜಕೀಯ ಸನ್ನಿವೇಶವನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications