ಬೆಳಗಾವಿ ಲೋಕಸಭಾ ಚುನಾವಣೆ: ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕೆ
ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿ ಯಾರು ಎನ್ನುವುದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಪ್ರಮುಖ ವಿರೋಧಿಯಾಗಿರುವ ಕಾಂಗ್ರೆಸ್, ಅಭ್ಯರ್ಥಿ ಆಯ್ಕೆಯ ಸಂಬಂಧ ಈಗಾಗಲೇ ಮೊದಲ ಹಂತದ ಮಾತುಕತೆಯನ್ನು ಮುಗಿಸಿದೆ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿಯಲ್ಲಿ, ಮುಖಂಡರುಗಳ ನಡುವೆ, ಯಾವುದೇ ಮನಸ್ತಾಪವಾಗದಂತೆ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಿದೆ. ಜಿಲ್ಲೆಯ ಹಲವು ಶಾಸಕರು ಯಡಿಯೂರಪ್ಪ ಸಂಪುಟದಲ್ಲಿ ಇರುವುದರಿಂದ, ಗೆಲುವು ಸುಲಭ ತುತ್ತಾಗಬಹುದು ಎಂದು ಹೇಳಲಾಗುತ್ತಿದೆ.
ಸುರೇಶ್ ಅಂಗಡಿಯವರ ಕುಟುಂಬಸ್ಥರಿಗೆ ಬಿಜೆಪಿ ಟಿಕೆಟ್ ಸಿಗುತ್ತೋ ಅಥವಾ ಜಿಲ್ಲೆಯ ಪ್ರಬಾವಿ ನಾಯಕರಿಗೆ ವರಿಷ್ಠರು ಮಣೆಹಾಕಲಿದ್ದಾರೋ ಎನ್ನುವ ಕುತೂಹಲದ ನಡುವೆ, ಅಚ್ಚರಿಯ ಹೆಸರೊಂದು ಮಂಚೂಣಿಯಲ್ಲಿ ಕೇಳಿಬರುತ್ತಿದೆ.

ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ನಿಧನ
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರು ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ಸೆಪ್ಟೆಂಬರ್ 23,2020ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಸೋಲಿಲ್ಲದ ಸರದಾರ ಎನ್ನುವಂತೆ 2004ರಿಂದ ಅಂಗಡಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಬೃಹತ್ ಕೈಗಾರಿಕಾ ಸಚಿವರಾಗಿರುವ ಜಗದೀಶ್ ಶೆಟ್ಟರ್
ಮಾಜಿ ಮುಖ್ಯಮಂತ್ರಿ, ಹಾಲೀ ಯಡಿಯೂರಪ್ಪನವರ ಸರಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿರುವ ಜಗದೀಶ್ ಶೆಟ್ಟರ್ ಹೆಸರು ಬೆಳಗಾವಿ ಬಿಜೆಪಿ ಅಭ್ಯರ್ಥಿಯಾಗಿ ಕೇಳಿಬರುತ್ತಿದೆ. ಶೆಟ್ಟರ್ ಅವರಿಗೆ ಕೇಂದ್ರದ ರಾಜಕಾರಣದಲ್ಲಿ ಒಲವಿದೆಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಶೆಟ್ಟರ್ ಹೆಸರು ಸದ್ಯ ಮಂಚೂಣಿಯಲ್ಲಿ ಕೇಳಿಬರುತ್ತಿದೆ.

ಜಗದೀಶ್ ಶೆಟ್ಟರ್ ಮತ್ತು ಸುರೇಶ್ ಅಂಗಡಿ ಎರಡೂ ಕುಟುಂಬ ನೆಂಟಸ್ಥರು
ಜಗದೀಶ್ ಶೆಟ್ಟರ್ ಮತ್ತು ಸುರೇಶ್ ಅಂಗಡಿ ಎರಡೂ ಕುಟುಂಬ ನೆಂಟಸ್ಥರು. ಸುರೇಶ್ ಅಂಗಡಿಯವರ ಮಗಳು ಶೆಟ್ಟರ್ ಅವರ ಪುತ್ರನ ಪತ್ನಿ. ಅಂಗಡಿಯವರ ಮಗಳು ಶ್ರದ್ದಾ (ಶೆಟ್ಟರ್ ಸೊಸೆ) ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು, ಇಲ್ಲವೇ ಅಂಗಡಿಯವರ ಪತ್ನಿಗೆ ಟಿಕೆಟ್ ನೀಡಬೇಕೆಂದು ಶೆಟ್ಟರ್ ಮತ್ತು ರಮೇಶ್ ಜಾರಕಿಹೊಳಿ ಲಾಬಿ ನಡೆಸಿದ್ದರು. ಈಗ, ಜಗದೀಶ್ ಶೆಟ್ಟರ್ ಅವರಿಗೇ ಟಿಕೆಟ್ ನೀಡಿದರೆ, ಯಾವುದೇ ತೊಂದರೆ ಎದುರಾಗುವುದಿಲ್ಲ ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದೆ ಎಂದು ಹೇಳಲಾಗುತ್ತಿದೆ.

ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್
ಇದರ ಜೊತೆಗೆ, ಸಾಮಾಜಿಕ ತಾಣದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರಿಗೆ ಬೆಳಗಾವಿಯ ಬಿಜೆಪಿ ಟಿಕೆಟ್ ನೀಡಬೇಕೆಂದು ಅವರ ಹಿಂಬಾಲಕರು ಪ್ರಚಾರ ಆರಂಭಿಸಿದ್ದಾರೆ. 45ವರ್ಷಗಳಿಂದ ಹಿಂದುತ್ವಕ್ಕಾಗಿ ಜೀವನವನ್ನೇ ಸಮರ್ಪಣೆ ಮಾಡಿರುವ ಮುತಾಲಿಕ್ ಅವರಿಗೆ ಟಿಕೆಟ್ ಸಿಗಲಿ ಎನ್ನುವ ಒತ್ತಾಯ ಕೇಳಿಬರುತ್ತಿದೆ.












Click it and Unblock the Notifications