ರೈತ ಮಹಿಳೆಯ ಜೋಡೆತ್ತು ಕನಸು ನನಸಾಗಿದ 'ಗೃಹಲಕ್ಷ್ಮಿ'
ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯು ಹಲವು ಯಶೋಗಾಥೆಗಳಿಗೆ ಸಾಕ್ಷಿಯಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಬರುತ್ತಿರುವ ಹಣವು ಮಹಿಳೆಯರ ಪಾಲಿಗೆ ವರದಾನವೂ ಆಗಿದೆ. ಮತ್ತೊಂದೆಡೆ ತಮ್ಮ ಕನಸುಗಳನ್ನೂ ಗೃಹಲಕ್ಷ್ಮಿ ನನಸು ಮಾಡುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲೂ ಇಂತದ್ದೇ ಮತ್ತೊಂದು ಯಶಸ್ಸಿನ ಕಥೆ ವರದಿಯಾಗಿದೆ. ಇಲ್ಲಿನ ಗೋಕಾಕ್ ತಾಲ್ಲೂಕಿನ ತವಗ ಗ್ರಾಮದ ರೈತ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣ ಕೂಡಿಟ್ಟು ಒಂದು ಎತ್ತು ಖರೀದಿಸಿದ್ದಾರೆ.

ಹೌದು ತವಗ ಗ್ರಾಮದ ಬಸವ್ವ ಎಂಬುವವರು ತಮ್ಮ ಕೃಷಿಗೆ ಅನುಕೂಲವಾಗಲು ಮೊದಲಿನಿಂದಲೂ ಜೋಡೆತ್ತು ಸಾಕಬೇಕು ಎಂದುಕೊಂಡಿದ್ದರು. ಆದರೆ, ಇವರ ಬಳಿ ಒಂದೇ ಎತ್ತು ಇತ್ತು. ಹಣಕಾಸಿನ ಕಾರಣದಿಂದ ಮತ್ತೊಂದು ಎತ್ತು ಖರೀದಿ ಸಾಧ್ಯವಾಗಿರಲಿಲ್ಲ.
ಈಗ ಗೃಹಲಕ್ಷ್ಮಿ ಹಣ ಕೂಡಿಟ್ಟಿರುವ ರೈತ ಮಹಿಳೆ ಬಸವ್ವ ಅವರು ಮತ್ತೊಂದು ಎತ್ತು ಖರೀದಿಸಿ ಮನೆಗೆ ಬರಮಾಡಿಕೊಂಡಿದ್ದಾರೆ. ತವಗ ಗ್ರಾಮದ ಬಸವ್ವ ಮತ್ತು ಶಿವಪ್ಪ ದಂಪತಿ ಬೇಸಾಯ ಮಾಡಿ ಬದುಕು ಸಾಗಿಸುತ್ತಿದ್ದರು. ಆದರೆ, ಬೇಸಾಯಕ್ಕೆ ಒಂದೇ ಎತ್ತು ಇದ್ದಿದ್ದರಿಂದ ಬೇಸಾಯಕ್ಕೂ ಅಡ್ಡಿಯಾಗಿತ್ತು. ಈಗ ಗೃಹಲಕ್ಷ್ಮಿ ಯೋಜನೆಯಿಂದ ಬಂದಿದ್ದ 22 ಸಾವಿರ ರೂಪಾಯಿ ಹಣ ಕೂಡಿಟ್ಟು ಅದರಲ್ಲಿ ಮತ್ತೊಂದು ಎತ್ತು ಖರೀದಿಸಿದ್ದಾರೆ.

ಪರೀಕ್ಷೆ ಶುಲ್ಕಕ್ಕೂ ನೆರವು: ಗೃಹಲಕ್ಷ್ಮಿ ಯೋಜನೆಯ ಹಣ ಮಕ್ಕಳ ಶಿಕ್ಷಣಕ್ಕೂ ನೆರವಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಗೃಹಲಕ್ಷ್ಮಿ ಹಣದಿಂದ ಬಿ.ಎಡ್ 4ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನ ಕಟ್ಟಿದೆ. ಕುಟುಂಬ ಸಾಲದ ಸುಳಿಯಲ್ಲಿದೆ, ತಂದೆ ಬಳಿ ಹಣ ಕೇಳೋಕೆ ಆಗದೆ ತಾಯಿ ಉಳಿಸಿಟ್ಟಿದ್ದ ಯೋಜನೆಯ ಹಣ ಸಹಾಯಕ್ಕೆ ಬಂದಿದೆ. ಸಂಕಷ್ಟದ ಸಮಯದಲ್ಲಿ ನನ್ನನ್ನ ಕಾಪಾಡಿದೆ. ಸಿದ್ದರಾಮಯ್ಯ ಅವ್ರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲಲ್ಲ ಎಂದು ಫಲಾನುಭವಿಯೊಬ್ಬರ ಪುತ್ರ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಬಡತನದ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗಿರುವ ಮಕ್ಕಳನ್ನು ನನ್ನ ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ. ಇಂದಿಗೂ ನಮ್ಮ ನಡುವೆ ಅಂತಹಾ ಉದಾಹರಣೆಗಳು ಸಾಕಷ್ಟು ಸಿಗಲಿವೆ. ಸ್ವತಃ ನಾನೇ ನನ್ನಿಷ್ಟದ ಕಾನೂನು ವ್ಯಾಸಂಗಕ್ಕಾಗಿ ನಡೆಸಿದ ಹೋರಾಟ ಈ ಕ್ಷಣ ನೆನಪಾಗುತ್ತಿದೆ ಎಂದು ಮೆಲುಕು ಹಾಕಿದ್ದಾರೆ.
ಅಂದು ಯಾವುದೋ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿ, ಕೃಷಿಯಲ್ಲಿ ತೊಡಗಿಕೊಂಡಿದ್ದರೆ ಇಂದು ಮುಖ್ಯಮಂತ್ರಿಯಾಗಿ ಕೋಟ್ಯಂತರ ಕನ್ನಡಿಗರ ಸೇವೆ ಮಾಡುವ ಭಾಗ್ಯ ನನ್ನದಾಗುತ್ತಿರಲಿಲ್ಲ. ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು. ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೆ ಎಂದು ಸಾರ್ಥಕತೆಯ ಮಾತುಗಳನ್ನಾಡಿದ್ದಾರೆ.
ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಕಡುಬಡತನದಲ್ಲೂ ಕೂಡಿಟ್ಟು ಮಗನ ಶಿಕ್ಷಣಕ್ಕಾಗಿ ಕೊಟ್ಟ ಆ ತಾಯಿಯ ಪ್ರೀತಿ- ಕಾಳಜಿಗೆ ಧನ್ಯವಾದ. ಬಿ.ಎಡ್ ಶಿಕ್ಷಣ ಮುಗಿಸಿ ಶಿಕ್ಷಕನಾಗಿ ನೂರಾರು ಮಕ್ಕಳ ಬದುಕು ರೂಪಿಸುವಂತಾಗು. ಇಂದು ನೀನು ಧನ್ಯವಾದ ತಿಳಿಸಿದ್ದಕ್ಕಿಂತ ಹೆಚ್ಚು ಖುಷಿ ಅಂದು ನನಗಾಗಲಿದೆ ಎಂದು ಸಿದ್ದರಾಮಯ್ಯ ಆಶೀರ್ವದಿಸಿದ್ದಾರೆ.












Click it and Unblock the Notifications