ಮೋನಿಕಾ ಪಾತಕಿ ರಾಜ್ ಬೆಂಗಳೂರನ್ನು ಆಯ್ದುಕೊಂಡಿದ್ದೇಕೆ?
ಬೆಂಗಳೂರು, ಅಕ್ಟೋಬರ್ 10 : ಪಂಜಾಬ್ ಮೂಲದ ರಾಜ್ ಕುಮಾರ್ ಗೋವಾದ ಪಣಜಿಯಲ್ಲಿ ಸುಗಂಧದ್ರವ್ಯ ತಜ್ಞೆ ಮೋನಿಕಾ ಖುರ್ಡೆಯನ್ನು ಭೀಕರವಾಗಿ ಹತ್ಯೆಗೈದು ನಾಲ್ಕು ದಿನಗಳ ನಂತರ ಬೆಂಗಳೂರಿನಲ್ಲಿ ಬಂಧಿತನಾಗಿದ್ದಾನೆ. ಆತನ ವಿಚಾರಣೆಯ ಸಂದರ್ಭದಲ್ಲಿ ಕೆಲ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ.
39 ವರ್ಷದ ಫ್ಯಾಷನ್ ಮಾಡೆಲ್ ಮೋನಿಕಾಳನ್ನು ಬೆತ್ತಲೆ ಮಾಡಿ ಕೊಲೆಗೈದ ನಂತರ, ಹೊಸಜೀವನ ಕಂಡುಕೊಳ್ಳಲು ರಾಜ್ ಕುಮಾರ್ ಸಿಂಗ್ ಆರಿಸಿಕೊಂಡಿದ್ದು ಬೆಂಗಳೂರು! ಇಲ್ಲಿ ಮೋನಿಕಾಳ ಡೆಬಿಟ್ ಕಾರ್ಡ್ ಉಪಯೋಗಿಸಿದ ನಂತರ, ಗೋವಾ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. [ಮೋನಿಕಾ ಗುರ್ಡೆ ಹತ್ಯೆ : ಬೆಂಗಳೂರಿನಲ್ಲಿ ಹಂತಕನ ಬಂಧನ]

ಆತ ಬೆಂಗಳೂರಿಗೆ ಬಂದಿದ್ದು ಯಾಕೆ? ಏಕೆಂದರೆ, ಬೆಂಗಳೂರು ಆತನ ಪಾಲಿಗೆ ಅತ್ಯಂತ ಸುರಕ್ಷಿತ ತಾಣ! ಬೆಂಗಳೂರಿಗೆ ದೇಶದ ಎಲ್ಲೆಡೆಯಿಂದ ಜನರು ಜೀವನ ಅರಸುತ್ತ ಬರುತ್ತಾರೆ. ಇಲ್ಲಿ ಅವಿತುಕೊಂಡು ಕೆಲಸವನ್ನು ಹುಡುಕಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ರಾಜ್ ಕುಮಾರ್ ಲೆಕ್ಕಾಚಾರ ಹಾಕಿದ್ದ.
ಆದರೆ, ಆತ ಮಾಡಿದ ತಪ್ಪೇನೆಂದರೆ, ಮೋನಿಕಾಳಿಂದ ಕಸಿದುಕೊಂಡಿದ್ದ ಡೆಬಿಟ್ ಕಾರ್ಡನ್ನು ಯಥೇಚ್ಛವಾಗಿ ಬಳಸಿದ್ದು. ಮೋನಿಕಾಳನ್ನು ಬೆದರಿಸಿ ಪಾಸ್ವರ್ಡ್ ಕೂಡ ಪಡೆದಿದ್ದ ರಾಜು ಕುಮಾರ್, ಬೆಂಗಳೂರಿನಲ್ಲಿ ತನಗೆ ಬೇಕಾದ ವಸ್ತುಗಳನ್ನೆಲ್ಲ ಕೊಂಡಿದ್ದಾನೆ. ಆದರೆ, ಡೆಬಿಟ್ ಕಾರ್ಡ್ ಟ್ರಾಕ್ ಮಾಡಿದಾಗ ಆತ ಬೆಂಗಳೂರಿನಲ್ಲಿರುವುದು ಗೋವಾ ಪೊಲೀಸರಿಗೆ ತಿಳಿದುಬಂದಿದೆ. [ಮಂಡ್ಯ : ಮೋನಿಕಾಳದ್ದು ಮರ್ಯಾದಾ ಹತ್ಯೆ]
ಮೋನಿಕಾಳನ್ನು ಮೋಹಿಸಿದ್ದ ರಾಜ್ ಕುಮಾರ್ : ಗೋವಾದ ಸಂಗೊಲ್ಡಾ ಗ್ರಾಮದಲ್ಲಿ ಮೋನಿಕಾ ವಾಸವಿದ್ದ ಅಪಾರ್ಟ್ಮೆಂಟಿನಲ್ಲಿ ರಾಜ್ ಕುಮಾರ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದ ರಾಜ್ ಕುಮಾರ್ ಆಕೆಯನ್ನು ಮೋಹಿಸುತ್ತಿದ್ದ. ಛತ್ರಿ ಕದ್ದ ಆರೋಪದ ಮೇಲೆ ಕೆಲಸ ಕಳೆದುಕೊಂಡಿದ್ದ ರಾಜ್, ಆಕೆಯ ಮೇಲೆ ಹಗೆ ಸಾಧಿಸುತ್ತಿದ್ದ.
ನಾಲ್ಕು ದಿನಗಳ ಹಿಂದೆ ಆಕೆಯ ಮನೆಗೆ ನುಗ್ಗಿ ಆಕೆಯನ್ನು ಬೆದರಿಸಿ ಎರಡು ಡೆಬಿಟ್ ಕಾರ್ಡ್ ಮತ್ತು ಮೊಬೈಲ್ ಕಿತ್ತುಕೊಂಡಿದ್ದ. ಮೋನಿಕಾ ಆತನ ಮೇಲೆ ದಾಳಿ ನಡೆಸಲು ಬಂದಾಗ, ತಿರುಗಿಬಿದ್ದ ರಾಜ್ ಮೋನಿಕಾಳನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಎಸಗಿದ್ದ ಮತ್ತು ಕುತ್ತಿಗೆ ಬಿಗಿದು ಹಾಸಿಗೆಯ ಮೇಲೆ ಹತ್ಯೆಗೈದಿದ್ದ.
ಮೋನಿಕಾಳನ್ನು ತ್ಯಜಿಸಿದ್ದ ಗಂಡ ಭರತ್ ರಾಮಾಮೃತಂ ಅವರು ಪೊಲೀಸರಿಗೆ ದೂರು ನೀಡಿದ್ದರು. ರಾಜ್ ಕುಮಾರ್ ಸಿಂಗ್ ಹಿನ್ನೆಲೆಯನ್ನು ಕಂಡುಕೊಂಡ ಗೋವಾ ಪೊಲೀಸರು, ನೆರೆಯ ರಾಜ್ಯಗಳಿಗೆ ಸಂದೇಶ ರವಾನಿಸಿದ್ದರು. ಮೋನಿಕಾಳ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಯಿತು.












Click it and Unblock the Notifications