ಲಿಫ್ಟ್ನಲ್ಲಿ ಉದ್ಯೋಗಿಗೆ ಮುತ್ತು ಕೊಟ್ಟ ಸಾಫ್ಟ್ವೇರ್ ಸಿಇಒ
ಬೆಂಗಳೂರು, ಆ.5: ಸಾಫ್ಟ್ವೇರ್ ಕಂಪೆನಿಯೊಂದರ ಸಿಇಒ ತನ್ನ ಕಂಪೆನಿಯ ಮಹಿಳೆ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಎಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ.
ಸಿಇಒ ಜನಾರ್ದನ ಗುಪ್ತಾ(40) ವಿರುದ್ಧ 26 ವರ್ಷದ ಯುವತಿ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಆ.4 ಸೋಮವಾರ ರಾತ್ರಿ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋರಮಂಗಲ ಬಳಿಯ ಜಕ್ಕಸಂದ್ರದಲ್ಲಿರುವ ಕ್ಲ್ಯಾಪ್ ಎಜ್ಯುಟೇನ್ಮೆಂಟ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಸಿಇಒ ಜನಾರ್ದನ ಗುಪ್ತಾ ಆ ಕಂಪೆನಿಯ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೇಘಾಲಯ ಮೂಲದ ಯುವತಿಗೆ ಜು.30ರಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಅಂದು ಜನಾರ್ದನ ಗುಪ್ತಾ ಎಚ್ಎಸ್ಆರ್ ಲೇಔಟ್ನ ಪರಾಗ್ ಹೋಟೆಲ್ಗೆ ಊಟಕ್ಕೆ ಆಕೆಯನ್ನು ಕರೆದಿದ್ದಾನೆ. ಊಟ ಮುಗಿಸಿದ ಬಳಿಕ ಲಿಫ್ಟ್ನಲ್ಲಿ ಬರುವಾಗ ಮುತ್ತು ಕೊಡುವಂತೆ ಕೇಳಿದ್ದಾನೆ. ಯುವತಿ ನಿರಾಕರಿಸಿದ್ದು, ಇದರಿಂದ ಸಿಟ್ಟಾದ ಗುಪ್ತಾ ಕೆಳಗಡೆ ಹೋದ ಲಿಫ್ಟ್ ಗುಂಡಿಯನ್ನು ಮೇಲಕ್ಕೆ ಒತ್ತಿ ಎರಡು ಬಾರಿ ಆಕೆಯನ್ನು ತಬ್ಬಿ ಮುತ್ತು ಕೊಟ್ಟಿದ್ದಾನೆ.
ಘಟನೆ ಬಳಿಕ ಯುವತಿ ಸಿಇಒ ವರ್ತನೆ ಬಗ್ಗೆ ಕಂಪೆನಿಯ ಎಚ್ಆರ್ ಮ್ಯಾನೇಜರ್ ಮತ್ತು ಮುಖ್ಯಸ್ಥರಿಗೆ ದೂರು ನೀಡಿದ್ದು, ಈ ಬಗ್ಗೆ ಸಿಇಒ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಜನಾರ್ದನ ಗುಪ್ತಾನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಯುವತಿ ಎರಡು ವರ್ಷದಿಂದ ಆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.