ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿಯವರೆಗೆ ಓಡಲಿದೆ ನಮ್ಮ ಮೆಟ್ರೋ
ನಿನ್ನೆ, ಮೆಟ್ರೋ ರೈಲು ಭದ್ರತಾ ಆಯುಕ್ತ ಕೆ.ಎ.ಮನೋಹರನ್ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ 12 ಕಿ.ಮೀ. ಉದ್ದ ಮೆಟ್ರೋ ಗ್ರೀನ್ ಲೈನ್ ಅಂತಿಮ ಕಾಮಗಾರಿಯನ್ನು ಪರುಶೀಲಿಸಿದರು.
ಬೆಂಗಳೂರು, ಮೇ 25: ಸುದೀರ್ಘ ಆರು ವರ್ಷಗಳ ವಿಳಂಬದ ನಂತರ ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣ ಮುಕ್ತಾಯಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತೆರೆದುಕೊಳ್ಳಲಿದೆ.
ಮೆಟ್ರೊ ರೈಲು ಭದ್ರತಾ ಆಯುಕ್ತರ ಮೇಲ್ವಿಚಾರಣೆಯಷ್ಟೇ ಬಾಕಿಯಿದ್ದು, ಮೇಲ್ವಿಚಾರಣೆ ಮುಗಿಯುತ್ತಿದ್ದಂತೆಯೇ ಮೆಟ್ರೊ ರೈಲು ಟ್ರ್ಯಾಕಿಗೆ ಇಳಿಯುತ್ತದೆ ಎಂದು ಇತ್ತೀಚೆಗಷ್ಟೇ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಹೇಳಿತ್ತು. ಅದರಂತೆ ನಿನ್ನೆ (ಮೇ 24) ಮೆಟ್ರೋ ರೈಲು ಭದ್ರತಾ ಆಯುಕ್ತ ಕೆ.ಎ.ಮನೋಹರನ್ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ 12 ಕಿ.ಮೀ. ಉದ್ದ ಮೆಟ್ರೋ ಗ್ರೀನ್ ಲೈನ್ ಅಂತಿಮ ಕಾಮಗಾರಿಯನ್ನು ಪರುಶೀಲಿಸಿದರು.['ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ]
ಮೇಲ್ವಿಚಾರಣೆ ಮೂರ್ನಾಲ್ಕು ದಿನ ನಡೆಯಲಿದ್ದು, ತಿಂಗಳಾಂತ್ಯದ ಹೊತ್ತಿಗೆ ಮೆಟ್ರೋ ಅಧಿಕೃತ ಸಂಚಾರ ಆರಂಭವಾಗಲಿದೆ. ನಾಗಸಂದ್ರ-ಯಲಚೇನಹಳ್ಳಿ ಮಾರ್ಗದ 24.2 ಕಿ.ಮೀ. ಮಾರ್ಗದಲ್ಲಿ ಕಳೆದ ಐದು ತಿಂಗಳಿನಿಂದ ಪರೀಕ್ಷಾರ್ಥ ಸಂಚಾರ ಆರಂಭಗೊಂಡಿದ್ದು, ಈ ತಿಂಗಳಾಂತ್ಯಕ್ಕೆ ಅಧಿಕೃತ ಸಂಚಾರ ಆರಂಭವಾಗಲಿದೆ.[ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್: ಇನ್ನೂ ವಿಳಂಬ ಯಾಕೆ?]
ಮೆಟ್ರೋ ಅಂತಿಮ ಹಂತವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದು, ದಿನಾಂಕವಿನ್ನೂ ನಿಗದಿಯಾಗಿಲ್ಲ ಎಂದು ಬಿಎಂಆರ್ ಸಿಎಲ್ ಮೂಲಗಳು ಈ ಮೊದಲೇ ಹೇಳಿದ್ದವು.
ದುಪ್ಪಟ್ಟು ವೆಚ್ಚ!
2006 ರಲ್ಲಿ ನಮ್ಮ ಮೆಟ್ರೋ ಯೋಜನೆಯ ಪ್ರಸ್ತಾಪ ಮಾಡಿದಾಗ, ಈ ಯೋಜನೆಗೆ ಸುಮಾರು 6,395 ಕೋಟಿ ರೂ. ಕರ್ಚಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಈ ಯೋಜನೆಗಾಗಿ ಇದುವರೆಗೂ ಖರ್ಚಾದ ಒಟ್ಟು ಹಣ 14,200 ಕೋಟಿ ರೂ. ಅಂದರೆ ಎರಡು ಪಟ್ಟಿಗಿಂತ ಹೆಚ್ಚು![ನಮ್ಮ ಮೆಟ್ರೋ ಮೊದಲ ಹಂತ ಮೇ ಅಂತ್ಯಕ್ಕೆ ಸಂಪೂರ್ಣ]
ಎಷ್ಟು ಜನರಿಗೆ ಉಪಯೋಗ?
ಒಟ್ಟು 43 ಕಿ.ಮೀ. ನ ನಮ್ಮ ಮೆಟ್ರೋ ಮೊದಲ ಹಂತ ಈ ಮೂಲಕ ಪೂರ್ಣಗೊಳ್ಳಲಿದ್ದು, ದಿನಕ್ಕೆ ಅಂದಾಜು 3-5 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ![6 ಗ್ರೀನ್ ಲೈನ್ ಮೆಟ್ರೋ ಸ್ಟೇಶನ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ]
ಪರ್ಪಲ್ ಲೈನ್ ಯಾರಿಗೆ?
ಈಗಾಗಲೇ ಮೈಸೂರು ರಸ್ತೆಯಿಂದ -ಬೈಯಪ್ಪನಹಳ್ಳಿ ವರೆಗಿನ ಪರ್ಪಲ್ ಲೈನ್ ಮೆಟ್ರೋ ಉಪಯೋಗ ಪಡೆಯುತ್ತಿರುವ ಪ್ರಯಾಣಿಕರಿಗಿಂತ ಮೂರುಪಟ್ಟು ಹೆಚ್ಚು ಜನ ಗ್ರೀನ್ ಲೈನ್ ಮೆಟ್ರೋ ಉಪಯೋಗ ಪಡೆಯಬಹುದೆಂದು ಅಂದಾಜಿಸಲಾಗಿದೆ.
ವಿಳಂಬವಾಗಿದ್ದೇಕೆ?
ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಆರು ವರ್ಷದ ಮೊದಲೇ, ಅಂದರೆ 2011 ರಲ್ಲೇ ಮೆಟ್ರೋ ಮೊದಲ ಹಂತ ಪೂರ್ಣಗೊಳ್ಳಬೇಕಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಾದ ವಿಳಂಬ, ಕಾಮಗಾರಿಯಲ್ಲಿ ವಿಳಂಬ ನೀತಿ ಇತ್ಯಾದಿಗಳಿಂದಾಗಿ ನಮ್ಮ ಮೆಟ್ರೋ, ಸಾರ್ವಜನಿಕರಿಗೆ ತಲುಪಲು ವಿಳಂಬವಾಗಿದೆ.
ಬೆಂಗಳೂರಿಗರು ನಿರಾಳ
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು, ನಾಲ್ಕು ಕಿ.ಮೀ.ಹಾದಿ ಕ್ರಮಿಸುವುದಕ್ಕೂ ಅರ್ಧ ಗಂಟೆ ರಸ್ತೆಯಲ್ಲಿ ಪರದಾಡಬೇಕಾದ ಪರಿಸ್ಥಿತಿಯನ್ನು ನಮ್ಮ ಮೆಟ್ರೋ ಇಲ್ಲವಾಗಿಸಿದೆ. ಹತ್ತಾರು ಕಿ.ಮೀ.ದೂರವನ್ನೂ 5-10 ನಿಮಿಷದಲ್ಲಿ ತಲುಪಿಸಬಲ್ಲ ನಮ್ಮ ಮೆಟ್ರೋ ಬೆಂಗಳೂರಿಗರಿಗೆ ನಿಜಕ್ಕೂ ವರದಾನವಾಗಲಿದೆ.