ಬಡವಿದ್ಯಾರ್ಥಿಗಳ ಆಶಾಕಿರಣ ಅದಮ್ಯ ಚೇತನ
ಕರ್ನಾಟಕ ಮತ್ತು ರಾಜಸ್ತಾನದ ಲಕ್ಷಾಂತರ ಬಡ ಮಕ್ಕಳಿಗೆ ಅನ್ನದಾಸೋಹ, ಅಗತ್ಯ ಕಲಿಕೆಯ ಸಾಮಗ್ರಿ ಒದಗಿಸುವುದರ ಜೊತೆಗೆ, ಸೃಜನಾತ್ಮಕ ಚಟುವಟಿಕೆ ನಡೆಸುತ್ತಿರುವ 'ಅದಮ್ಯ ಚೇತನ' ಸಂಸ್ಥೆಯ ಹಿಂದಿನ ಪ್ರೇರಕ ಶಕ್ತಿ ಮತ್ತು ಅನಂತ್ ಕುಮಾರ್ ಅವರ ಅಮ್ಮ ಗಿರಿಜಾ ಶಾಸ್ತ್ರಿಯವರು. ತವರಿನ ಆಸ್ತಿ ಮಾರಾಟ ಮಾಡಿದಾಗ ಬಂದ 11 ಲಕ್ಷ ರು.ಯನ್ನು ಗಿರಿಜಾ ಅವರು ತಮ್ಮ ಮಗನಿಗೆ ನೀಡಿದ್ದರು. ಆ ಹಣದಿಂದಲೇ ಆರಂಭವಾದದ್ದು ಅದಮ್ಯ ಚೇತನ. ಇಂದು ಇದೇ ಸಂಸ್ಥೆ ಲಕ್ಷಾಂತರ ಬಡಮಕ್ಕಳಿಗೆ ಚೈತನ್ಯವನ್ನು ತುಂಬುತ್ತಿದೆ.
ಇದರ ಹಿಂದಿರುವ ಮತ್ತೊಂದು ಶಕ್ತಿಯೆಂದರೆ ಅನಂತ್ ಕುಮಾರ್ ಅವರ ಧರ್ಮಪತ್ನಿ ತೇಜಸ್ವಿನಿ ಅವರು. ರಕ್ಷಣಾ ಸಂಸ್ಥೆಯಾದ ಎಡಿಎದಲ್ಲಿ ಉದ್ಯೋಗಿಯಾಗಿದ್ದ ತೇಜಸ್ವಿನಿಯವರು ಕೆಲಸಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಅದಮ್ಯ ಚೇತನ ಸಂಸ್ಥೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೊಲಿಗೆ ತರಬೇತಿ ಕೇಂದ್ರ ಸ್ಥಾಪನೆಯ ಮುಖಾಂತರ ಆರಂಭವಾದ ಅದಮ್ಯ ಚೇತನ, ಸುಲ್ತಾನ್ ಪೇಟೆಯಲ್ಲಿ ಬಡಮಕ್ಕಳಿಗಾಗಿ ತಯಾರಿಸಿದ್ದ ಬಿಸಿಯೂಟದಿಂದ ಪ್ರೇರಣೆ ಪಡೆದು ಬಿಸಿಯೂಟದ ವ್ಯವಸ್ಥೆ ಆರಂಭಿಸಲು ತೇಜಸ್ವಿನಿ ನಿರ್ಧರಿಸಿದರು.

ಅದಮ್ಯ ಚೇತನ ಸಂಸ್ಥೆ ಅತ್ಯಂತ ಸುಸಜ್ಜಿತ ಮತ್ತು ಸ್ವಚ್ಛ ಅಡುಗೆಮನೆ(ಅನ್ನಪೂರ್ಣ)ಯನ್ನು ಹೊಂದಿದ್ದು, ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೂಲಕ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಹಾಗೂ ಜೋಧ್ಪುರಗಳ ಸಾವಿರಾರು ಶಾಲೆಗಳ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಣಬಡಿಸುತ್ತಿದೆ. ಸರ್ಕಾರ ಹಾಗೂ ದಾನಿಗಳ ದೇಣಿಗೆಯ ಸಹಾಯದಿಂದ, ಸುಸಜ್ಜಿತ ಅಡುಗೆ ಕೋಣೆಗಳಲ್ಲಿ ಪೌಷ್ಟಿಕ ಹಗೂ ಸ್ವಾದಿಷ್ಟ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ಆ ಸಮಾಜಕಾರ್ಯವನ್ನು ಶತಾಯುಷಿ ಡಾ. ಜಿ. ವೆಂಕಟಸುಬ್ಬಯ್ಯ ಅವರೇ ಕೊಂಡಾಡಿದ್ದಾರೆ.
ಅದಮ್ಯ ಚೇತನವು ಇತ್ತೀಚೆಗೆ ತನ್ನ ಅಡುಗೆಮನೆಯನ್ನು ಶೂನ್ಯತ್ಯಾಜ್ಯ ಅಡುಗೆಮನೆಯನ್ನಾಗಿ ರೂಪಿಸಿ ಜನಮೆಚ್ಚುಗೆ ಗಳಿಸಿದೆ. ಪರ್ಯಾಯ ಇಂಧನವನ್ನು ಬಳಸುವ ನಾವು, ಅದಕ್ಕಾಗಿ ತ್ಯಾಜ್ಯಗಳಿಂದ ಉತ್ಪಾದಿಸಿದ ಜೈವಿಕ ಅನಿಲವನ್ನು ಪಳೆಯುಳಿಕೆ ಇಂಧನದ ಬದಲಿಗೆ ಬಳಸುತ್ತೇವೆ ಮತ್ತು ಪ್ರತಿದಿನ 60 ಎಲ್ಪಿಜಿ ಸಿಲಿಂಡರ್ಗಳು ಅಥವಾ 300 ಲೀಟರ್ ಡೀಸಲ್ನ ಅಗತ್ಯ ಬೀಳುತ್ತದೆ. ಆಹಾರವನ್ನು ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ತುಂಬಿ, ವಿತರಣೆಗಾಗಿಯೇ ವಿನ್ಯಾಸಗೊಳಿಸಲದ ವಿಶೇಷ ವಾಹನಗಳ ಮೂಲಕ ಸಾಗಾಣಿಕೆ ಮಾಡಲಾಗುತ್ತದೆ.
ಅನ್ನ ದಾಸೋಹದ ಜೊತೆಗೆ ಶಾಲಾ ಮಕ್ಕಳಿಗಾಗಿ 'ಆರೋಗ್ಯ ಚೇತನ', 'ಶಿಕ್ಷಣ ಚೇತನ', 'ಚಿಣ್ಣರ ಚೇತನ', ಮಹಿಳೆಯರಿಗಾಗಿ 'ಮಹಿಳಾ ಚೇತನ' ಮುಂತಾದ ಯೋಜನೆಗಳನ್ನು ಕೂಡ ಅದಮ್ಯ ಚೇತನ ಸಂಸ್ಥೆ ಹಮ್ಮಿಕೊಂಡಿದೆ. ಪ್ರತಿವರ್ಷ ಡಿಸೆಂಬರ್ 31ರಂದು ಅದಮ್ಯ ಚೇತನ ಉತ್ಪವವನ್ನು ಆಯೋಜಿಸಲಾಗುತ್ತದೆ. ಆರೋಗ್ಯ ಚೇತನ ಯೋಜನೆಯನ್ನು ಉದ್ಘಾಟಿಸಿದ್ದು ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು.












Click it and Unblock the Notifications