ಮರಣಶಯ್ಯೆಯಲ್ಲಿರುವ ಬಾಲಕನ ಕನಸಿಗೆ 'ರೆಕ್ಕೆ'!
ಬೆಂಗಳೂರು, ನ. 15: ಪೈಲಟ್ ಆಗುವ ಕನಸು ಕಾಣುತ್ತಿದ್ದ ಮಾರಕ ರೋಗದಿಂದ ಬಳಲುತ್ತಿರುವ 14 ವರ್ಷಗಳ ಬಾಲಕ ಚಂದನ್ ಕೊನೆಯ ಆಸೆಯನ್ನು ಈಡೇರಿಸಲು ಭಾರತೀಯ ವಾಯು ಸೇನೆ (ಐಎಎಫ್) ವು ಸಜ್ಜಾಗಿದೆ.
ಗುರುವಾರ ಬಾಲಕ ಹಾಗೂ ಆತನ ತಂದೆ ಗಿರೀಶ್ ಮಂಡಲ್ ಅವರನ್ನು ಅಂಬಾಲಾ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಐಎಎಫ್ ಚೀಫ್ ಅರುಪ್ ರಹಾ ಬಾಲಕನ ಕೊನೆಯ ಆಸೆ ಈಡೇರಿಸಲು ಸಹಕರಿಸುವುದಾಗಿ ಭರವಸೆ ನೀಡಿದರು. [10 ವರ್ಷದ ಬಾಲಕ ಹೈದರಾಬಾದ್ ಪೊಲೀಸ್ ಕಮಿಷನರ್]
ಬಾಲಕ ಚಂದನ್ ಪೈಲಟ್ ಆಗಲು ಬಯಸುತ್ತಿದ್ದ. ಆದರೆ, ಆತ ಮಾರಕ ರೋಗದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಆಸೆ ಈಡೇರುವುದು ಸಾಧ್ಯವಿಲ್ಲ. ಆದ್ದರಿಂದ ಆತನ ಆಸೆಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ಕಾಕ್ಪಿಟ್ ಲಗತ್ತಿಸಿ ಸರಳೀಕರಣಗೊಳಿಸಿದ ವಿಮಾನದಲ್ಲಿ ಬಾಲಕನಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಒನ್ಇಂಡಿಯಾಕ್ಕೆ ವಾಯು ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆ ಆರ್ಭಟಿಸಲಿದೆ ಸುಖೋಯಿ: ಕಳೆದ ತಿಂಗಳು ಸುಖೋಯಿ ಯುದ್ಧ ವಿಮಾನವನ್ನು ಸಂಪೂರ್ಣ ಪರೀಕ್ಷಿಸಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆ (ಐಎಎಫ್) ವು ವಿಮಾನದ ಹಾರಾಟಕ್ಕೆ ಅನುಮತಿ ನೀಡಿದೆ. ಐಎಎಫ್ ಹಾಗೂ ಹಿಂದೂಸ್ತಾನ್ ಏರೋನಾಟಿಕಲ್ ಲಿ. (ಹಾಲ್) ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗಿದ್ದು, ಈ ಯುದ್ಧ ವಿಮಾನಗಳು ಮುಂದಿನ ವಾರ ಕಾರ್ಯಾಚರಣೆ ಆರಂಭಿಸಲಿವೆ.
ಕಳೆದ ತಿಂಗಳು ಪುಣೆಯಲ್ಲಿ ಒಂದು ಸುಖೋಯಿ ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸುಮಾರು 200 ಸುಖೋಯಿಗಳನ್ನು ಇಳಿಸಿ ಉಪಯೋಗ ನಿಲ್ಲಿಸಲಾಗಿತ್ತು. ತಕ್ಷಣ ಕಾರ್ಯಾಚರಣೆ ಆರಂಭಿಸುವ ಕುರಿತು ಸ್ಪಷ್ಟ ಸೂಚನೆ ಸಿಕ್ಕಿರಲಿಲ್ಲ. ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರುಪ್ ರಹಾ, ತನಿಖೆಯು ಮುಗಿಯುತ್ತಿದೆ. ಶೀಘ್ರ ಈ ಯುದ್ಧವಿಮಾನ ಕಾರ್ಯಾಚರಣೆಗಿಳಿಯಲಿದೆ ಎಂದು ತಿಳಿಸಿದರು.
ಪರೀಕ್ಕರ್ಗೆ ಗಾರ್ಡ್ ಆಫ್ ಹಾನರ್: ಈಚೆಗಷ್ಟೇ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಮನೋಹರ ಪರೀಕರ್ ಶನಿವಾರ ಪ್ರಥಮ ಬಾರಿಗೆ ಸೇನೆಯಿಂದ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು. ವೈಸ್ ಅಡ್ಮಿರಲ್ ಅನಿಲ್ ಛೋಪ್ರಾ ಸ್ವಾಗತಿಸಿದರು.