ಕಥೆ 1 : ಕಸ ಹಾಕುವವರ ಮನೆಗೆ ನಾನು ತಪ್ಪದೆ ಬರುತ್ತೇನೆ!
ಹನುಮಂತನಗರದಲ್ಲಿ ಒಬ್ಬ ನಿವಾಸಿ ಸೂಪರ್ ಐಡಿಯಾ ಮಾಡಿದ್ದಾರೆ. ಆ ಐಡಿಯಾ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆಯೆಂದರೆ, ಒಂದೇ ಒಂದು ಕಡ್ಡಿಯೂ ಅವರ ಮನೆಯ ಕಾರ್ನರನ್ನು ಅಲಂಕರಿಸಿಲ್ಲ. ಆ ಐಡಿಯಾ ಯಾವುದಪ್ಪಾ ಅಂದ್ರೆ...
ಬೆಂಗಳೂರಿನಲ್ಲಿ ಬೆಳಗಿನ ಜಾವ ವಾಕಿಂಗ್ ಹೋಗುವುದು ಆರೋಗ್ಯದ ದೃಷ್ಟಿಯಿಂದ ಹಲವಾರು ಜನರು ಕಡ್ಡಾಯ ಮಾಡಿಕೊಂಡಿದ್ದಾರೆ, ಕೆಲವರು ಫ್ಯಾಷನ್ ಮಾಡಿಕೊಂಡಿದ್ದಾರೆ, ಒಂದಿಷ್ಟು ಜನರಿಗೆ ಅದು ಬಲವಂತದ ಕ್ರಿಯೆಯಾದರೆ, 'ಮತ್ತೊಂದಿಷ್ಟು' ಜನರಿಗೆ ರಸ್ತೆ ಬದಿಯಲ್ಲಿ ಕಸ ಬಿಸಾಕಿ ಬರುವ ದೈನಂದಿನ ರೂಟೀನು.
'ಯಾಕ್ರೀ ರಸ್ತೆ ಬದಿಯಲ್ಲಿ ಕಸ ಬಿಸಾಕ್ತೀರಾ? ಅದು ನಾಯಿಗಳ ವಾಸಸ್ಥಾನ ಆಗಲ್ವಾ, ರೋಗರುಜಿನ ಹರಡಲ್ವಾ?' ಅಂತ ದಬಾಯಿಸಿ ಕೇಳುವ ಧೈರ್ಯ ಯಾರಿಗೂ ಇಲ್ಲ. ಥೂ ಅಯೋಗ್ಯರು, ಅನಾಗರಿಕರು, ಮ್ಯಾನರ್ಸ್ ಒಂದಿಷ್ಟೂ ಇಲ್ಲದವರು... ಅಂತ ಒಂದಿಷ್ಟು ಜನ ಮುಖ ಸಿಂಡರಿಸಿಕೊಂಡು, ಮೂಗು ಮುಚ್ಚಿಕೊಂಡು ವಾಕಿಂಗ್ ಮುಂದುವರಿಸುತ್ತಾರೆ.[ಜೂನ್ ನಲ್ಲಿ ಮತ್ತೆ ವೃಶ್ಚಿಕಕ್ಕೆ ಶನಿ ಪ್ರವೇಶ, ಹನ್ನೆರಡು ರಾಶಿಗಳ ಫಲಾಫಲ ಏನು?]
ಅದೇನು ಚಟವೋ, ಕಾರ್ಪೋರೇಷನ್ ಮಾಡಿರುವ ಕಸ ವಿಂಗಡನೆಯ ನಿಯಮದ ಬಗ್ಗೆ ತಿರಸ್ಕಾರವೋ, ಇಲ್ಲ ನಾನು ಹೀಗೇ ಮಾಡುತ್ತೇನೆ ಎಂಬ ದುರಹಂಕಾರವೋ, ಕಸ ಹೊತ್ತೊಯ್ಯಲು ಮನೆಮನೆಗೆ ಯಾರೂ ಬರುವುದಿಲ್ಲ ಎಂಬ ಸಿಟ್ಟೋ... ಒಟ್ಟಿನಲ್ಲಿ ಒಣ ಕಸ, ಹಸಿ ಕಸ, ಘನ ತ್ಯಾಜ್ಯ, ಸ್ಯಾನಿಟರಿ ವೇಸ್ಟ್ ಎಲ್ಲ ಮಿಶ್ರಣ ಮಾಡಿರುವ ಪ್ಲಾಸ್ಟಿಕ್ ಕವರ್ ದಿನಬೆಳಿಗ್ಗೆ ರಸ್ತೆಬದಿಯನ್ನು ಅಲಂಕರಿಸಿರುತ್ತದೆ.
ಬೆಂಗಳೂರಿನ ಕಸದ ಸಮಸ್ಯೆಯನ್ನು ಬಗೆಹರಿಸುವುದು ಬಿಬಿಎಂಪಿಗಿರಲಿ, ಬಹುಶಃ ಆ ಪರಮಾತ್ಮನಿಗೂ ಸಾಧ್ಯವಿಲ್ಲ. ಇನ್ನು ಮೇಲೆ ಜೂನ್ 1ರಿಂದ 20ಕ್ಕೂ ಹೆಚ್ಚು ಮನೆಗಳಿರುವ ವಸತಿ ಸಮುಚ್ಚಯದಿಂದ ಹಸಿಕಸವನ್ನು ಎತ್ತೊಯ್ಯುವುದಿಲ್ಲ, ನೀವೇ ಹೇಗಾದರೂ ವಿಲೇವಾರಿ ಮಾಡಿಕೊಳ್ಳಿ ಎಂದು ಬೇರೆ ಬಿಬಿಎಂಪಿ ಬೆದರಿಕೆಯೊಡ್ಡಿದೆ. ಜನರಿಗೆ ಇನ್ನೇನು ರಸ್ತೆಬದಿಗೆ ತಂದು ಬಿಸಾಕುತ್ತಾರೆ. ಬೆಳಿಗ್ಗೆ ಅಲ್ಲದಿದ್ದರೂ, ರಾತ್ರಿ ಎಲ್ಲರೂ ಮಲಗಿದಾಗ ಬಂದು ಬಿಸಾಕುತ್ತಾರೆ. ಏನು ಮಾಡ್ತೀರಿ?
ರಸ್ತೆ ಬದಿ ಮಾತ್ರವಲ್ಲ, ಕೆಲ ಬಡಾವಣೆಗಳಲ್ಲಿ ಕಾರ್ನರ್ ಸೈಟಿನಲ್ಲಿ ಮನೆ ಕಟ್ಟಿಸಿದವ ಇಡೀ ದಿನ ಮೂಗು ಮುಚ್ಚಿ ಕೂಡಬೇಕು ಅನ್ನುವ ರೀತಿಯಲ್ಲಿ, ಯಾರಿಗೂ ಗೊತ್ತಾಗದಂತೆ, ತೀರ ಅಮಾಯಕರಂತೆ, ಕಣ್ಣು ಮುಚ್ಚಿಕೊಂಡ ಕಳ್ಳ ಬೆಕ್ಕಿನಂತೆ ಕಸದ ಕವರ್ ಬಿಸಾಕಿ ಹೋಗುತ್ತಾರೆ ಬೆಂಗಳೂರಿನ 'ಕಸಾಕಾರರು'. ಎಷ್ಟೇ ಕೂಗಾಡಿದರೂ ಅಷ್ಟೇ, ಯಾರಿಗೇ ದೂರು ನೀಡಿದರೂ ಅಷ್ಟೇ.
ಇದನ್ನು ತಪ್ಪಿಸಬೇಕೆಂದು ಹನುಮಂತನಗರದಲ್ಲಿ ಒಬ್ಬ ನಿವಾಸಿ ಸೂಪರ್ ಡೂಪರ್ ಐಡಿಯಾ ಮಾಡಿದ್ದಾರೆ. ಆ ಐಡಿಯಾ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆಯೆಂದರೆ, ಒಂದೇ ಒಂದು ಕಡ್ಡಿಯೂ ಅವರ ಮನೆಯ ಕಾರ್ನರನ್ನು ಅಲಂಕರಿಸಿಲ್ಲ. ಅಸಲಿಗೆ, ಅಲ್ಲಿ ಕಸ ಬಿಸಾಕುವ ಧೈರ್ಯವನ್ನೇ ಯಾರೂ ಮಾಡಿಲ್ಲ. ಅಂಥಾದ್ದೇನಪ್ಪಾ ಅಂದ್ರೆ...
'ಈ ಸ್ಥಳದಲ್ಲಿ ಗಲೀಜು ಕಸ ಹಾಕುವವರ ಮನೆಗೆ ನಾನು ತಪ್ಪದೆ ಬರುತ್ತೇನೆ' ಎಂದು ಶನಿದೇವರಿರುವ ಬ್ಯಾನರನ್ನು ಹಾಕಿದರು ನೋಡಿ. ಆವಾಗಿನಿಂದ ಅಲ್ಲಿ ಒಂದೇಒಂದು ಕಸಕಡ್ಡಿಯೂ ಬಿದ್ದಿಲ್ಲ. ನೋಡಿ ಹೇಗಿದೆ ಪ್ಲಾನು! ಈ ಬ್ಯಾನರನ್ನು ಅವರಿಗೆ ಹಾಕಲು ಯಾರು ಐಡಿಯಾ ಕೊಟ್ಟರೋ ಏನು ಕಥೆಯೋ, ಅಂತೂ ವರ್ಕೌಟ್ ಆಗಿದೆ.
ಶನಿದೇವರೆಂದರೆ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಬುದ್ಧಿಜೀವಿಗಳನೇಕರು ಶನಿ ಹೆಗಲಮೇರುವುದು, ಸಾಡೇಸಾತಿ ಶುರುವಾಗುವುದು, ಪಂಚಮ ಶನಿ, ಅಷ್ಟಮ ಶನಿ ಇತ್ಯಾದಿಗಳನ್ನು ನಂಬುವುದಿಲ್ಲವಾದರೂ ಅವರಿಗೂ ಒಂದು ರೀತಿಯ ಅವ್ಯಕ್ತ ಭಯ ಇದ್ದೇ ಇರುತ್ತದೆ. ಸುಮ್ನೆ ಏಕೆ ಪರೀಕ್ಷೆ ಮಾಡುವುದು ಎಂದು ಕೆಲವರು ನಂಬದಿರುವವರೂ ಸುಮ್ಮನಿರುತ್ತಾರೆ.
ಇನ್ನು ಜನರು ಕಸ ಬಿಸಾಕುವಲ್ಲೆಲ್ಲ ಇಂಥ ಬ್ಯಾನರುಗಳನ್ನು ರಚಿಸಿ ಬಿಬಿಎಂಪಿ ಹಾಕದರೆ ಸ್ವಲ್ಪ ಮಟ್ಟಿಗೆ ಕಾರ್ಯಗತವಾದರೂ ಆಗಬಹುದು. ಆಗಬಹುದು ಎಂದು ಏಕೆ ಹೇಳಿದ್ದೆಂದರೆ, ಬಿಬಿಎಂಪಿ ಚಾಪೆಯ ಕೆಳಗೆ ನುಸುಳಲು ಯತ್ನಿಸಿದರೆ, ನಮ್ಮ ಬುದ್ಧಿವಂತ ಕಸಾಕಾರರು ರಂಗೋಲಿಯ ಕೆಳಗೆ ನುಗ್ಗುತ್ತಾರೆ!