ಕೋಡಿಶ್ರೀಗಳೇ ನೀವು ನುಡಿದ ಭವಿಷ್ಯ ಉಲ್ಟಾ ಹೊಡೀತಲ್ವೇ?
ಬೆಂಗಳೂರು, ಆಗಸ್ಟ್ 25: ಹಾಸನದಲ್ಲಿ ಕೆಲವು ದಿನಗಳ ಹಿಂದೆ ಕೋಡಿಮಠ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಬಿಬಿಎಂಪಿ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದರು.
ಆದರೆ ಶ್ರೀಗಳು ನುಡಿದ ಭವಿಷ್ಯ ಕರಾರುವಕ್ಕಾಗದೇ ಹೇಗೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿತೋ, ಹಾಗೇ ಶ್ರೀಗಳು ಮುಜುಗರಕ್ಕೀಡು ಮಾಡುವ ಫಲಿತಾಂಶವನ್ನು ಬೆಂಗಳೂರಿನ ಮತದಾರ ನೀಡಿದ್ದಾನೆ.
ತಾಳೇಗರಿ ಮೂಲಕ ಭವಿಷ್ಯ ನುಡಿಯುವ ಶ್ರೀಗಳು, ಈ ಬಾರಿ ರಾಜಕೀಯ ಪಕ್ಷಗಳಿಗೆ ಮಿಶ್ರಫಲ ತೋರಿಬರುವ ಸಾಧ್ಯತೆಯಿದೆ ಎಂದಿದ್ದರು. (ಬಿಬಿಎಂಪಿ ಚುನಾವಣೆ: ಕೋಡಿಶ್ರೀಗಳ ಭವಿಷ್ಯವಾಣಿ)
ಮೂರು ಪಕ್ಷಗಳಿಗೂ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದರೂ, ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆಯಿಲ್ಲ. ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳು ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೋಡಿಶ್ರೀಗಳು ನುಡಿದಿದ್ದರು.
ಅಲ್ಲದೇ, ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಶ್ರೀಗಳು, ಹಾಸನದಲ್ಲಿ ಗುರುವಾರ (ಆ 20) ಭವಿಷ್ಯ ನುಡಿದಿದ್ದರು. (ಬಿಬಿಎಂಪಿ ಫಲಿತಾಂಶ)
ಮಾಧ್ಯಮಗಳು ನಡೆಸಿದ್ದ ಮತದಾನಪೂರ್ವ ಮತ್ತು ಎಕ್ಸಿಟ್ ಪೋಲುಗಳು ಹೇಗೆ ಹುಸಿಯಾಯಿತೋ, ಹಾಗೇ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ ಕೂಡಾ ನಿಜವಾಗಲಿಲ್ಲ.
197 ವಾರ್ಡ್ ಸಾಮರ್ಥ್ಯದ ಬಿಬಿಎಂಪಿಯಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಚುನಾವಣೆಯನ್ನು ಗೆದ್ದಿದೆ. ಹಾಗಾಗಿ, ಕೋಡಿ ಶ್ರೀಗಳು ನುಡಿದಂತೆ ಬಿಬಿಎಂಪಿ ಚುನಾವಣೆಯ ಫಲಿತಾಂಶ ಅತಂತ್ರವಾಗಲಿಲ್ಲ. ಬಿಜೆಪಿ ಏಕಾಂಗಿಯಾಗಿ ಗದ್ದುಗೇರಲು ಸಜ್ಜಾಗಿದೆ.
ಹಾಗಂತ, ಕೋಡಿಶ್ರೀಗಳು ನುಡಿದ ಭವಿಷ್ಯವೆಲ್ಲಾ ಸುಳ್ಳಾಗಿದೆಯಂತಲ್ಲ, ಅವರು ಈ ಹಿಂದೆ ನುಡಿದಿದ್ದ ಭವಿಷ್ಯ ಸರಿಯಾದ ಉದಾಹರಣೆಗಳೂ ಇವೆ. ಸ್ಲೈಡ್ ಕ್ಲಿಕ್ಕಿಸಿ
ಸಿದ್ದು ಸರಕಾರಕ್ಕೆ ಅಸ್ಥಿರತೆ
ಸಿದ್ದು ಸರಕಾರಕ್ಕೆ ಅಸ್ಥಿರತೆ ಕಾಡಲಿದೆ. ಭಿನ್ನಮತ, ಸಂಕಟ ಎದುರಿಸಬೇಕಾಗುತ್ತದೆ, ಬಹುಮತವಿದ್ದರೂ ಸಿದ್ದು ಜಾಗರೂಕತೆಯಿಂದ ಇರಬೇಕು ಎಂದು ಭವಿಷ್ಯ ನುಡಿದಿದ್ದರು. ಸಿದ್ದು ಸರಕಾರಕ್ಕೆ ಅಸ್ಥಿರತೆ ಇದ್ದರೂ, ರಾಜ್ಯಭಾರ ನಡೆಸಿಕೊಂಡು ಹೋಗುತ್ತಾರೆಂದು ಶ್ರೀಗಳು ಭವಿಷ್ಯ ನುಡಿದಿದ್ದರು. ಇದುವರೆಗೂ ಸಿದ್ದರಾಮಯ್ಯ ಸರಕಾರ ಹಲವು ಅಡೆತಡೆಗಳ ನಡುವೆಯೂ ರಾಜ್ಯಭಾರ ನಡೆಸಿಕೊಂಡು ಹೋಗುತ್ತಿದ್ದಾರೆ.
ಇಂಡೋ ಪಾಕ್ ಗಡಿ ಸಮಸ್ಯೆ
ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಶ್ರೀಗಳು ಈ ಹಿಂದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಸಮಸ್ಯೆ ವಿಪರೀತವಾಗಲಿದೆ. ಎರಡು ರಾಷ್ಟ್ರಗಳವೈಮನಸ್ಸು ಹೆಚ್ಚಾಗಲಿದೆ ಎಂದು ನುಡಿದಿದ್ದರು. ಅದರಂತೇ, ಎರಡು ದೇಶಗಳ ನಡುವಿನ ಗಣಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.
ಕಾಂಗ್ರೆಸ್ ಭವಿಷ್ಯ
ನಡೆಯುವ ಹಾದಿ ಮೂರು ಕವಲಾಯಿತು, ಮುತ್ತಿನಗಿಣಿ ಮುಪ್ಪಾಯಿತು, ನಡೆಯುವ ಹಾದಿ ಮೂರು ಕವಲಾಯಿತು, ಮುದುಕನ ಕೋಲ ಮೇಲೆ ಕಾಗಿ ಕುಳಿತಿತೋ' ಎಂದು ನುಡಿದಿದ್ದ ಶ್ರೀಗಳು, ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಲಿದೆ ಎಂದಿದ್ದರು. ಅದರಂತೇ, ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂರಂಕಿ ದಾಟುವಲ್ಲೂ ವಿಫಲವಾಗಿತ್ತು.
ಮೋದಿ ಬಗ್ಗೆ
ಮುತ್ತಿನ ಗಿಣಿ ಮುಪ್ಪಾಗಿ ಮುತ್ತಾಯಿತೋ. ಇದರರ್ಥ ಸರಳ ಸುಂದರವಾಗಿದೆ. ಕೇಂದ್ರದಲ್ಲಿ ಯಾವುದೇ ಅಧಿಕಾರ ಹೊಂದಿರದ ಮೋದಿ ಎಂಬ ಮುತ್ತಿನ ಗಿಣಿ ನೇರವಾಗಿ ದೇಶದಲ್ಲಿ ಹೊಳೆಯುವ ಮುತ್ತಾಯಿತೋ ತಮ್ಮಾ ಎಂದು ಕೋಡಿಮಠ ಶ್ರೀಗಳು ಮೋದಿ ಪ್ರಧಾನಿಯಾದ ನಂತರ ನಾನು ಹೇಳಿದ್ದ ಭವಿಷ್ಯ ನಿಜವಾಯಿತೆಂದು ಹೇಳಿದ್ದರು.
|
ಕೋಡಿಶ್ರೀಗಳ ಭವಿಷ್ಯವಾಣಿಯ ಬಗ್ಗೆ ಟ್ವೀಟ್
ಕೋಡಿಶ್ರೀಗಳ ಭವಿಷ್ಯವಾಣಿಯ ಬಗ್ಗೆ ಟ್ವೀಟ್