ವಾಲ್ಮೀಕಿ ಯಾರು? ಪುಸ್ತಕದ ವಿರುದ್ಧ ಭುಗಿಲೆದ್ದ ಆಕ್ರೋಶ
ಬಳ್ಳಾರಿ, ಮೇ 7 : ಸರ್ಕಾರ "ವಾಲ್ಮೀಕಿ ಯಾರು?" ಎಂಬ ಪುಸ್ತಕವನ್ನು ಮುಟ್ಟುಗೋಲು ಹಾಕಬೇಕು ಮತ್ತು ಪುಸ್ತಕ ಬರೆದ ಕೆ.ಎಸ್.ನಾರಾಯಣಾಚಾರ್ಯ ಅವರನ್ನು ಬಂಧಿಸಬೇಕು ಎಂದು ವಾಲ್ಮೀಕಿ ಜನಾಂಗದ ನಾಯಕರು ಒತ್ತಾಯಿಸಿದ್ದಾರೆ. ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿ ನಡೆಸಿದ ಹೊಸಪೇಟ್ ಬಂದ್ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಬುಧವಾರ ಹೊಸಪೇಟೆಯಲ್ಲಿ ಕೆ.ಎಸ್.ನಾರಾಯಣಾಚಾರ್ಯ ಅವರ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ "ತಳ ಸಮುದಾಯದ ಸಾಂಸ್ಕೃತಿಕ ನಾಯಕರನ್ನು ಹೈಜಾಕ್ ಮಾಡುವ ಕೆ.ಎಸ್.ನಾರಾಯಣಾಚಾರ್ಯ ಅವರ "ವಾಲ್ಮೀಕಿ ಯಾರು?" ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು.
ವಿರೋಧ ಏಕೆ : ಕೆ.ಎಸ್.ನಾರಾಯಣಾಚಾರ್ಯ ಅವರು ವಾಲ್ಮೀಕಿ ಯಾರು? ಎಂಬ ಪುಸ್ತಕದಲ್ಲಿ ವಾಲ್ಮೀಕಿ ಬೇಡನಲ್ಲ ಬ್ರಾಹ್ಮಣ. ಬೇಡನಾಗಿದ್ದರೆ ರಾಮಾಯಣದಂತಹ ಕೃತಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಅವರು ಬ್ರಾಹ್ಮಣರಾಗಿದ್ದರಿಂದಲೇ ರಾಮಾಯಣ ರಚಿಸಿದರು ಎಂದು ಉಲ್ಲೇಖಿಸಿದ್ದಾರೆ. ಇದು ವಾಲ್ಮೀಕಿ ಜನಾಂಗದ ಕೆಂಗಣ್ಣಿಗೆ ಗುರಿಯಾಗಿದ್ದು, ಪುಸ್ತಕ ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಚಿತ್ರಗಳಲ್ಲಿ ನೋಡಿ ಪ್ರತಿಭಟನೆ
ನಾರಾಯಣಾಚಾರ್ಯ ವಿರುದ್ಧ ಪ್ರತಿಭಟನೆ
ಕೆ.ಎಸ್.ನಾರಾಯಣಾಚಾರ್ಯ ಅವರು ಬರೆದಿರುವ ವಾಲ್ಮೀಕಿ ಯಾರು? ಎಂಬ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡು, ಲೇಖಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬುಧವಾರ ಹೊಸಪೇಟೆ ಬಂದ್ ನಡೆಸಲಾಯಿತು.
ನಾಯಕನನ್ನು ಹೈಜಾಕ್ ಮಾಡುತ್ತಿದ್ದಾರೆ
ಹೊಸಪೇಟೆಯಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ, ಕೆ.ಎಸ್.ನಾರಾಯಣಾಚಾರ್ಯ ಅವರು ತಮ್ಮ ಪುಸ್ತಕದಲ್ಲಿ ತಳ ಸಮುದಾಯದ ಸಾಂಸ್ಕೃತಿಕ ನಾಯಕ ವಾಲ್ಮೀಕಿಯನ್ನು ಹೈಜಾಕ್ ಮಾಡಲು ಯತ್ನಿಸಿದ್ದಾರೆ. ತಳ ಸಮುದಾಯದಲ್ಲಿ ಪ್ರತಿಭೆ ಇರುವುದನ್ನು ನಿರಾಕರಿಸುವ ಈ ಮನೋಭಾವವನ್ನು ನಾವು ಖಂಡಿಸುತ್ತೇವೆ ಎಂದರು. ಈ ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಲೇಖಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸಮಾಜ ಒಡೆಯುವ ಕೃತ್ಯ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು, ವಾಲ್ಮೀಕಿ ಸಮಾಜವನ್ನು ಒಡೆಯುವ ಕೃತ್ಯದ ವಿರುದ್ಧ ಎಲ್ಲರೂ ಸಂಘಟಿತವಾಗಿ ಹೋರಾಟ ನಡೆಸಬೇಕಿದೆ. ಪುಸ್ತಕ ಬರೆದ ನಾರಾಯಣಾಚಾರ್ಯರನ್ನು ಸರ್ಕಾರ ಕೂಡಲೇ ಬಂಧಿಸಿ, ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಇಲ್ಲವಾದರೆ ರಾಜ್ಯಾದ್ಯಾಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುಸ್ತಕ ಸುಟ್ಟು ಪ್ರತಿಭಟನೆ
ನಾರಾಯಣಚಾರ್ಯರ ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರು, ವಾಲ್ಮೀಕಿ ಯಾರು? ಕೃತಿಯನ್ನು ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು.
ಬಂದ್ ಶಾಂತಿಯುತ
ವಾಲ್ಮೀಕಿ ನಾಯಕ ಸಮಾಜ ಇಂದು ಕರೆ ನೀಡಿದ್ದ ಹೊಸಪೇಟೆ ಬಂದ್ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆಟೋ ರೀಕ್ಷಾ ಸಹ ಸಂಚರಿಸಲಿಲ್ಲ. ತರಕಾರಿ ಮಾರುಕಟ್ಟೆ ವ್ಯಾಪಾರಿಗಳು ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದರು.
ಅಂಗಡಿ ಮುಂಗಟ್ಟುಗಳು ಬಂದ್
ಹೊಸಪೇಟೆಯಲ್ಲಿ ಬುಧವಾರ ವಾಲ್ಮೀಕಿ ನಾಯಕ ಸಮಾಜ ಕರೆ ನೀಡಿದ್ದ ಬಂದ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು
ವಾಲ್ಮೀಕಿ ಸಮಾಜದ ಮುಖಂಡರಾದ ಜಿ.ಕೆ.ಹನುಮಂತಪ್ಪ, ಗುಜ್ಜಲ ರಘು, ಟಿ.ವೆಂಕಟೇಶ್, ಎಲ್.ಮಂಜುನಾಥ, ಸ್ಲಂ ಜನ ಜಾಗೃತಿ ಸಮಿತಿಯ ಶೇಷು, ಅಖಿಲ ಭಾರತ ಹಜರತ್ ಟಿಪ್ಪುಸುಲ್ತಾನ್ ಫೆಡರೇಷನ್ ತಾಲೂಕು ಅಧ್ಯಕ್ಷಎಚ್.ಕೆ. ಬುಡೇನ್ ಸಾಬ್, ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಯ್ಯಾಳಿಮೂರ್ತಿ, ಬಿಕಾಂ ಮಾಬುಸಾಬ್, ಹಿರಿಯ ರಂಗ ಕಲಾವಿದೆ ಕೆ.ನಾಗರತ್ನಮ್ಮ, ಸಿಐಟಿಯು ಮುಖಂಡ ಎ.ಕರುಣಾನಿಧಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.