ಮೊಳಕಾಲ್ಮೂರಿನಲ್ಲಿ ತಿಪ್ಪೇಸ್ವಾಮಿ ಶಕ್ತಿ ಪ್ರದರ್ಶಿಸಲಿ ಎಂದ ರಾಮುಲು
ಬಳ್ಳಾರಿ, ಏಪ್ರಿಲ್ 14: 'ಎಸ್. ತಿಪ್ಪೇಸ್ವಾಮಿಯನ್ನು ರಾಜಕೀಯಕ್ಕೆ ತಂದಿದ್ದೇ ನಾನು. ನನಗೀಗ ಆತನೇ ಮುಳುವಾಗಿದ್ದಾನೆ. ಬಿಎಸ್ ಆರ್ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ, ಗೆಲ್ಲಿಸಿದ್ದು ನಾನು, ನನ್ನ ವರ್ಚಸ್ಸು. ಆತನಿಗೆ ಶಕ್ತಿ ಇದ್ದಲ್ಲಿ ಸ್ವತಂತ್ರವಾಗಿ ಅಥವಾ ಯಾರಿಗಾದರೂ ಬೆಂಬಲಿಸಿ, ಗೆಲ್ಲಿಸಿ, ತನ್ನ ವರ್ಚಸ್ಸು ತೋರಿಸಲಿ'.
- ಹೀಗೆಂದವರು ಸಂಸದ, ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ. ಶ್ರೀರಾಮುಲು. ಬಳ್ಳಾರಿಯ ಗೃಹ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನಾಯಕನಹಟ್ಟಿಯಲ್ಲಿ ಶುಕ್ರವಾರ ನಡೆದ ಗಲಭೆ ಪರಿಶಿಷ್ಟ ಪಂಗಡಕ್ಕೆ ಮಾಡಿದ ಅವಮಾನ. ಗಲಾಟೆಯಿಂದ ನಾನು ಗಾಬರಿಯಾಗಿಲ್ಲ. ನನ್ನ ಬೆಂಬಲಿಗರು, ಆಪ್ತರ ಮೇಲೆ ಸಣ್ಣಪುಟ್ಟ ಹಲ್ಲೆಗಳು ನಡೆದಿವೆ. ಕಾಂಗ್ರೆಸ್ ನಮ್ಮ ಆತ್ಮಸ್ಥೈರ್ಯ ಕುಗ್ಗಿಸುವ ಕುತಂತ್ರದ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ನಾಯಕನಹಟ್ಟಿಯಲ್ಲಿ ನಡೆದ ಘಟನೆ ಮತ್ತು ಎಸ್. ತಿಪ್ಪೇಸ್ವಾಮಿ ಬೆಂಬಲಿಗರು ಬಳ್ಳಾರಿಗೆ ಬಂದು ಹೋದ ಪ್ರಸಂಗ ಎಲ್ಲದರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂಜರಿಯುವುದಿಲ್ಲ ಎಂದರು.
ನನ್ನನ್ನು ಈ ಕ್ಷೇತ್ರಕ್ಕೆ ಮೀಸಲು ಮಾಡಿ, ರಾಜ್ಯದಾದ್ಯಂತ ಬಿಜೆಪಿ ಪರವಾಗಿ ಪ್ರಚಾರ ಮಾಡದಂತೆ ಕಾಂಗ್ರೆಸ್ ನಡೆಸುತ್ತಿರುವ ಷಡ್ಯಂತ್ರಕ್ಕೆ ಎಸ್. ತಿಪ್ಪೇಸ್ವಾಮಿ ಮತ್ತು ಅವರ ಬೆಂಬಲಿಗರು ಬಲಿಯಾಗಿದ್ದಾರೆ. ನಾನು ಮೊಳಕಾಲ್ಮೂರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ, ಕೇವಲ 3 ದಿನಗಳು ಮಾತ್ರ ಪ್ರಚಾರ ಮಾಡುತ್ತೇನೆ. ಉಳಿದ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.












Click it and Unblock the Notifications