ಬೆವರು ಸುರಿಸಿ ಇಂಥ ಐಷಾರಾಮಿ ಮನೆಗಳನ್ನು ಕಟ್ಟಿಸಿದ್ದಾರಾ?; ಸಚಿವರ ಬಗ್ಗೆ ಹಿರೇಮಠ ಪ್ರಶ್ನೆ
ಬಳ್ಳಾರಿ, ಡಿಸೆಂಬರ್ 06: ಅರಣ್ಯ ಸಚಿವ ಆನಂದ ಸಿಂಗ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಮುಖಂಡ ಎಸ್.ಆರ್.ಹಿರೇಮಠ ಗರಂ ಆಗಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹಿರೇಮಠ ಮಾತನಾಡಿ, ಅರಣ್ಯ ಸಚಿವ ಆನಂದ ಸಿಂಗ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಐಷಾರಾಮಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಬೆವರು ಸುರಿಸಿ ದುಡಿದು ಇಂಥ ಐಷಾರಾಮಿ ಮನೆಗಳನ್ನು ಕಟ್ಟಿದ್ದಾರೋ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಕಟ್ಟಿಕೊಂಡಿದ್ದಾರೋ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ತಾಕೀತು ಮಾಡಿದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಈ ಇಬ್ಬರು ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಕೂಡಲೇ ಇವರಿಬ್ಬರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಆನಂದ ಸಿಂಗ್ ಮಾಡಬಾರದ್ದನ್ನು ಮಾಡಿದ್ದಾರೆ. ಅಂಥವರಿಗೆ ಅರಣ್ಯ ಸಚಿವ ಸ್ಥಾನ ನೀಡಲಾಗಿದೆ. ಸಚಿವ ಶ್ರೀರಾಮುಲು ಕೋಟ್ಯಂತರ
ಬೆಲೆ ಬಾಳುವ ಬಂಗ್ಲೆ ಕಟ್ಟಿದ್ದಾರೆ. ಇವರೇನು ಬೆವರು ಸುರಿಸಿ ಐಷಾರಾಮಿ ಮನೆ ಕಟ್ಟಿದ್ದಾರಾ?. ಈ ಇಬ್ಬರು ಸಚಿವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿಯಲ್ಲಿ ಮತ್ತೆ ಎನ್ ಎಂಡಿಸಿ ಕಂಪೆನಿಯಿಂದ ಗಣಿಗಾರಿಕೆ ಆರಂಭವಾಗಿದೆ. ಹೊಸ ಒಪ್ಪಂದದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಲಿದೆ. ಶೇಕಡ 80ರಷ್ಟು ಪ್ರೀಮಿಯಂ ಹಣ ಖೋತಾ ಆಗಿದೆ. ನಷ್ಟ ಮಾಡಿಕೊಂಡು ಪರವಾನಗಿ ಕೊಡುವ ಅಗತ್ಯ ಏನಿತ್ತು ಎಂದು ಎಸ್.ಆರ್.ಹಿರೇಮಠ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಭಾರತ ಬಂದ್ ಗೆ ಸಂಪೂರ್ಣ ಬೆಂಬಲ: ಡಿ. 8ರಂದು ನಡೆಯಲಿರುವ ಭಾರತ ಬಂದ್ ಗೆ ಸಮಾಜ ಪರಿವರ್ತನಾ ಸಮುದಾಯದ ಸಂಪೂರ್ಣ ಬೆಂಬಲ ಇದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯಿದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕೇಂದ್ರ ಸರ್ಕಾರದ ನಡೆಯನ್ನು ಇಡೀ ದೇಶವೇ ನೋಡುತ್ತಿದೆ. ಭಾರತ ಬಂದ್ ಅನ್ನು ನಾವು ಬೆಂಬಲಿಸುತ್ತೇವೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಐತಿಹಾಸಿಕವಾಗಿದೆ ಎಂದರು.
ಈ ದೇಶದ ನಿಜವಾದ ಮಾಲೀಕರು ಈಗ ಎಚ್ಚೆತ್ತಿದ್ದಾರೆ. ದೇಶದ ಆತ್ಮ ಎಚ್ಚೆತ್ತುಕೊಂಡಿದೆ. ರೈತರು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಸಲಹೆ ನೀಡಿದರು.












Click it and Unblock the Notifications