ಹೊಸಪೇಟೆಯಲ್ಲಿ ಭೀಕರ ಅಪಘಾತ: ಏಳು ಮಂದಿ ಸ್ಥಳದಲ್ಲೇ ಸಾವು
ವಿಜಯನಗರ, ಅಕ್ಟೋಬರ್ 09: ಹೊಸಪೇಟೆಯ ಗುಂಡಾ ಫಾರೆಸ್ಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕ್ರೂಸರ್ನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೊಸಪೇಟೆ ನಗರದ ಹೊರವಲಯದ ಸುರಂಗದ ಬಳಿ ಎರಡು ಮೈನಿಂಗ್ ಟಿಪ್ಪರ್ ಲಾರಿಗಳು ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಟಿಪ್ಪರ್ ಡಿಕ್ಕಿಯ ರಭಸಕ್ಕೆ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ರೂಸರ್ನಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಕ್ರೂಸರ್ ವಾಹನದಲ್ಲಿ ಒಟ್ಟು 13 ಜನರಿದ್ದರು ಎಂಬ ಮಾಹಿತಿ ಇದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಢ ಸ್ಥಳದಲ್ಲಿ ವಿಜಯನಗರ ಎಸ್ಪಿ ಶ್ರೀಹರಿ ಬಾಬು ಮೃತದೇಹಗಳನ್ನು ಹೊರತೆಗೆಯಲು ಸಿಬ್ಬಂದಿಗೆ ಸಹಕಾರ ನೀಡಿದ್ದು, ಸ್ಥಳೀಯರು ಕೂಡ ಪೊಲೀಸರ ಕಾರ್ಯಾಚರಣೆಗೆ ಸಹಕರಿಸಿದರು. ಡಿಕ್ಕಿಯ ರಭಸಕ್ಕೆ ಕ್ರೂಸರ್ ನಜ್ಜುಗುಜ್ಜಾಗಿದ್ದರೆ, ಒಂದು ಮೈನಿಂಗ್ ಟಿಪ್ಪರ್ ಲಾರಿ ಹೆದ್ದಾರಿ ಪಕ್ಕದ ಗುಂಡಿಗೆ ಉರುಳಿಬಿದ್ದಿದೆ.
ಅಪಘಾತವಾದ ಕ್ರೂಸರ್ ಹೊಸಪೇಟೆಯದ್ದೇ ಆಗಿದ್ದು, ಮೃತಪಟ್ಟವರೆಲ್ಲಾ ಹೊಸಪೇಟೆ ನಗರದವರಾಗಿದ್ದಾರೆ. ಇನ್ನೊಂದಿಷ್ಟು ದೂರ ಕ್ರಮಿಸಿದ್ದರೆ ಎಲ್ಲರೂ ಅವರವರ ಮನೆಯನ್ನು ತಲುಪುತ್ತಿದ್ದರು. ಆದರೆ, ವಿಧಿ ಬರಹ ಬೇರೆಯದ್ದೇ ಆಗಿತ್ತು. ಮನೆಯಿಂದ ಕೆಲವೇ ಕೆಲವು ಅಂತರದಲ್ಲಿ ಅಪಘಾತ ಸಂಭವಿಸಿ, ಮನೆಗೆ ಹೋಗಬೇಕಿದ್ದವರು ಮಸಣ ಸೇರಿದ್ದಾರೆ.












Click it and Unblock the Notifications