Sandur By elections: ಸಂಡೂರು ಉಪ ಚುನಾವಣೆ, ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ
ಬಳ್ಳಾರಿ, ನವೆಂಬರ್ 02: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆ-2024ರ ಕಣ ಅಂತಿಮವಾಗಿದೆ. ಸ್ಪರ್ಧೆಯಲ್ಲಿರುವ 6 ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಗಳ ಅನ್ವಯ ಚಿಹ್ನೆ ಹಂಚಿಕೆ ಮಾಡಲಾಗಿದೆ.
ಸಂಡೂರು ವಿಧಾನಸಭೆ ಉಪಚುನಾವಣಾಧಿಕಾರಿ ರಾಜೇಶ್ ಹೆಚ್. ಡಿ. ಈ ಕುರಿತು ಮಾಹಿತಿ ನೀಡಿದ್ದಾರೆ. ಉಪಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರ ವಾಪಸ್ ಪಡೆಯಲು ಬುಧವಾರ ಕೊನೆಯ ದಿನವಾಗಿತ್ತು. ಓರ್ವ ಅಭ್ಯರ್ಥಿಯು ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದು, ಅಂತಿಮ ಕಣದಲ್ಲಿ 6 ಅಭ್ಯರ್ಥಿಗಳಿದ್ದಾರೆ.

ಚಿಹ್ನೆಗಳ ಹಂಚಿಕೆ: ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ ಅವರಿಗೆ 'ಕೈ' ಚಿಹ್ನೆ, ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ ಅವರಿಗೆ 'ಕಮಲ' ಚಿಹ್ನೆ ನೀಡಲಾಗಿದೆ.
ನೋಂದಾಯಿತ ರಾಜಕೀಯ ಪಕ್ಷಗಳಾದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಅಂಜಿನಪ್ಪ. ಎನ್ ಅವರಿಗೆ 'ವಜ್ರ' ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಟಿ. ಎಂ. ಮಾರುತಿ ಅವರಿಗೆ 'ಬ್ಯಾಟರಿ ಚಾರ್ಜ್', ಟಿ. ಎರ್ರಿಸ್ವಾಮಿ ಅವರಿಗೆ 'ಟ್ರಕ್', ಎನ್. ವೆಂಕಣ್ಣ ಅವರಿಗೆ 'ಉಂಗುರ' ಚಿಹ್ನೆ ನೀಡಲಾಗಿದೆ.
ಉಪ ಚುನಾವಣೆ ಏಕೆ?: ಸಂಡೂರು ಕ್ಷೇತ್ರದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಇ.ತುಕಾರಾಂ ಜಯಗಳಿಸಿದ್ದರು. ಆದರೆ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದು ಜಯಗಳಿಸಿದ್ದಾರೆ. ಸಂಸದರಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆದ್ದರಿಂದ ಈಗ ಶಿಗ್ಗಾವಿ, ಚನ್ನಪಟ್ಟಣದ ಜೊತೆಗೆ ಸಂಡೂರು ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. 2023ರಲ್ಲಿ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರವಿದು. ಕಾಂಗ್ರೆಸ್ ಪಕ್ಷ ಉಪ ಚುನಾವಣೆಯಲ್ಲಿ ಇ.ತುಕಾರಾಂ ಪತ್ನಿ ಈ. ಅನ್ನಪೂರ್ಣ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಬಿಜೆಪಿ ಬಂಗಾರ ಹನುಮಂತ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪಣತೊಟ್ಟಿದ್ದಾರೆ.
ಉಪ ಚುನಾವಣೆ ಸಂದರ್ಭದಲ್ಲಿಯೇ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಭೇಟಿ ನೀಡಲು ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆಗೆದುಹಾಕಿದೆ. ಆದ್ದರಿಂದ ಸಂಡೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅಬ್ಬರದ ಪ್ರಚಾರವನ್ನು ನಡೆಸುತ್ತಿದ್ದಾರೆ. ಜೆಡಿಎಸ್ನ ಬೆಂಬಲ ಸಹ ಬಿಜೆಪಿಗೆ ಇದ್ದು, ಉಪ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಪತ್ನಿ ಈ. ಅನ್ನಪೂರ್ಣ ಪರವಾಗಿ ಸಂಸದ ಇ. ತುಕಾರಾಂ ಪ್ರಚಾರವನ್ನು ನಡೆಸುತ್ತಿದ್ದಾರೆ. ದೀಪಾವಳಿ ಹಬ್ಬದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹ ಸಂಡೂರಿನಲ್ಲಿ ಉಪ ಚುನಾವಣೆ ಪ್ರಚಾರವನ್ನು ನಡೆಸಲಿದ್ದಾರೆ.
ಸಂಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಉಪಚುನಾವಣೆಯ ವೆಚ್ಚದ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಚುನಾವಣಾ ವೆಚ್ಚ ಉಸ್ತುವಾರಿ ಮಾಡಲು ಚುನಾವಣಾ ಆಯೋಗದಿಂದ ಮುರಳಿರಾವ್ ಆರ್. ಜೆ. ಅವರನ್ನು ಚುನಾವಣಾ ವೆಚ್ಚದ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ.












Click it and Unblock the Notifications