ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ; ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಜಗಳ
ಬಳ್ಳಾರಿ, ನವೆಂಬರ್ 07: ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನೂಕಾಟ ನಡೆದಿದೆ.
ಹಗರಿಬೊಮ್ಮನಹಳ್ಳಿಯ ಹಾಲಿ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಅವರು ತಮ್ಮ ಬೆಂಬಲಿಗರೊಂದಿಗೆ ಪುರಸಭೆ ಕಾರ್ಯಾಲಯದೊಳಗೆ ಕಾರಿನಲ್ಲಿ ಬಂದಿಳಿದಿದ್ದರು. ಇದರಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ಶಾಸಕ ಭೀಮಾನಾಯ್ಕ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದರು.
ಕಂಪ್ಲಿ ಪುರಸಭೆ ಬಿಜೆಪಿ ತೆಕ್ಕೆಗೆ; ಕಾಂಗ್ರೆಸ್ ಶಾಸಕ ಗಣೇಶ್ ಗೆ ಮುಖಭಂಗ
ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಾಗ ಹೇಗೆ ಒಳ ಪ್ರವೇಶಿಸಿದಿರಿ ಎಂದು ಪ್ರಶ್ನಿಸಿದ್ದಾರೆ. ಆಗ ಶಾಸಕ ಭೀಮಾನಾಯ್ಕ ಅವರ ಬಳಿಯೇ ನಿಂತಿದ್ದ ಬಿಜೆಪಿ ಎಸ್ ಟಿ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಗರಗದ ಪ್ರಕಾಶ ಎಂಬುವವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಹೊಡೆದ ಪರಿಣಾಮ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಡಿವೈಎಸ್ಪಿ ರಘು ಅವರು ಘಟನಾ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಶಾಸಕ ಭೀಮಾ ನಾಯ್ಕ ಅವರಿಂದಲೇ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ಕೆಲಕಾಲ ಪುರಸಭೆ ಕಚೇರಿ ಎದುರು ಮಾಜಿ ಶಾಸಕ ನೇಮಿರಾಜನಾಯ್ಕ ಮತ್ತು ಕಾರ್ಯಕರ್ತರು ಚುನಾವಣೆ ಪ್ರಕ್ರಿಯೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.