ಹಂಪಿ ನಿರ್ವಹಣೆಯ ಹೊಣೆ ಹೊತ್ತುಕೊಂಡ ಯಾತ್ರಾ ಡಾಟ್ ಕಾಂ
ಬಳ್ಳಾರಿ, ಅಕ್ಟೋಬರ್ 26: ಸರಿಯಾದ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿರುವ ಹಂಪಿಯ ನಿರ್ವಹಣೆಗೆ ಆನ್ಲೈನ್ ಪ್ರವಾಸ ನಿರ್ವಹಣಾ ಸಂಸ್ಥೆ ಯಾತ್ರಾ ಡಾಟ್ ಕಾಂ ಮುಂದಾಗಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸೆಪ್ಟೆಂಬರ್ 27ರಂದು ಆರಂಭಿಸಿದ್ದ 'ಪಾರಂಪರಿಕ ತಾಣಗಳನ್ನು ದತ್ತು ಪಡೆಯಿರಿ' ಅಭಿಯಾನದ ಅಂಗವಾಗಿ ಪಾಳು ಬಿದ್ದಿರುವ ಹಂಪಿಯ ನಿರ್ವಹಣೆಯನ್ನು ಯಾತ್ರಾ ಡಾಟ್ ಕಾಂ ಕಂಪನಿ ದತ್ತು ಪಡೆದುಕೊಂಡಿದೆ.

ಮೊದಲ ಹಂತದಲ್ಲಿ ಪಾರಂಪರಿಕ ತಾಣಗಳ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಹೊಣೆಯನ್ನಷ್ಟೇ ಈ ಕಂಪನಿಗಳಿಗೆ ನೀಡಲಾಗುತ್ತದೆ.
ಬಳಿಕ, ತಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಿವೆ ಎಂಬುದನ್ನು ವಿಶ್ಲೇಷಿಸಿ, ಆನಂತರ ಆ ಪಾರಂಪರಿಕ ತಾಣದಲ್ಲಿ ಆಯಾ ಕಂಪನಿಗಳು ಬೇರೆ ಯಾವ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ರಶ್ಮಿ ವರ್ಮಾ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯ ಇಂದಿನ ಸ್ಥಿತಿಗಳು ನೋಡದಂತಾಗಿದೆ.
ಸರಿಯಾದ ನಿರ್ವಹಣೆ ಇಲ್ಲದೆ ಇಲ್ಲಿನ ಪ್ರಸಿದ್ಧ ಸಪ್ತಸ್ವರ ಕಂಬಗಳು ಕಳಚಿ ಬೀಳುವ ಹಂತಕ್ಕೆ ಬಂದು ನಿಂತಿವೆ. ಅಂದಿನ ವಿಜಯನಗರ ಸಾಮ್ರಜ್ಯದ ಕಾಲದಲ್ಲಿ ವೈಭವ ಮೆರೆದ ಹಂಪಿ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.
ಇದೀಗ ಇದರ ನಿರ್ವಹಣೆಯ ಹೊಣೆ ಹೊತ್ತಿರುವ ಯಾತ್ರಾ ಡಾಟ್ ಕಾಂ ಕಂಪನಿಯಿಂದಾದರೂ ಮತ್ತೆ ಕಾಲಿದ್ದರೆ ಹಂಪಿ ನೋಡು ಎಂಬ ನಾಣ್ನುಡಿ ಮರುಕಳಿಸಲಿದೆಯೇ ಎನ್ನುವುದು ಮುಂದಿರುವ ಪ್ರಶ್ನೆ.












Click it and Unblock the Notifications