ಉತ್ತರೆಗೆ ತತ್ತರಿಸಿದ ಜನ; ಸಂತ್ರಸ್ತರ ಸಂತೈಸಿದ ಶಾಸಕ ಜಿ.ಸೋಮಶೇಖರ ರೆಡ್ಡಿ
ಬಳ್ಳಾರಿ, ಸೆಪ್ಟೆಂಬರ್ 19: ಮುಂಗಾರು ಕ್ಷೀಣಿಸಿದ್ದರಿಂದ ಮಳೆಯ ಬರುವಿಕೆಯನ್ನೇ ಮರೆತು ಹೋಗಿದ್ದ ಬಳ್ಳಾರಿ ಜನರು ನಿನ್ನೆಯಿಂದ ದಾಂಗುಡಿ ಇಟ್ಟ ಉತ್ತರೆಗೆ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ನಗರದ ಬಹುತೇಕ ಬಡಾವಣೆಗಳಿಗೆ ಸಂಚರಿಸಿ ಸಂತ್ರಸ್ತರನ್ನು ಸಂತೈಸಿದ್ದಾರೆ.
ನಿನ್ನೆ ರಾತ್ರಿಯಿಂದ ಸುರಿದ ಮಳೆಯಿಂದಾಗಿ ನಗರದ 35 ವಾರ್ಡುಗಳಲ್ಲಿಯೂ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಒಳಚರಂಡಿ, ತೆರೆದ ಚರಂಡಿಗಳ ನೀರು ಸೇರಿದಂತೆ ಮಳೆಯ ನೀರು ಹಲವೆಡೆ ಮನೆಗೆ ನುಗ್ಗಿದೆ. ದುರ್ಗಮ್ಮ ದೇವಸ್ಥಾನದ ಬಳಿಯ ಮುಖ್ಯ ರಸ್ತೆಯಲ್ಲಿ ಗುಳಿ ಬಿದ್ದರೆ, ರೇಲ್ವೆ ಮೇಲ್ಸೇತುವೆ ಕೆಳಗೆ ಅಪಾರ ಪ್ರಮಾಣದ ನೀರು ಶೇಖರಣೆಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಿಲ್ಲರ್ ಪೇಟೆ, ರೂಪನಗುಡಿ ರಸ್ತೆ, ರೇಣುಕಾ ನಗರ, ತಾಳೂರು ರಸ್ತೆ ಸೇರಿದಂತೆ ನಗರದ ಅನೇಕ ತಗ್ಗು ಪ್ರದೇಶಗಳಿಗೆ ಚರಂಡಿ ಮಿಶ್ರಿತ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಮನೆಯ ವಸ್ತುಗಳಿಗೆ ಹಾನಿಯಾಗಿದ್ದು, ವಿದ್ಯುತ್ ಮತ್ತು ಕುಡಿವ ನೀರಿಗೆ ತತ್ವಾರ ಎದುರಾಗಿದೆ.

ಈ ಮಧ್ಯೆ ನ್ಯಾಯಾಲಯದ ಕೆಲಸಕ್ಕೆಂದು ದೂರದ ಹೈದರಾಬಾದ್ ಗೆ ತೆರಳಿದ್ದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಬಳ್ಳಾರಿಗೆ ಸಂಜೆ ಬಂದಿದ್ದಾರೆ. ನಗರ ಜನತೆಯ ಸಮಸ್ಯೆ ಆಲಿಸಲು ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಮಹಾನಗರ ಪಾಲಿಕೆ, ಜೆಸ್ಕಾಂ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ.
ಪಾಲಿಕೆಯ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಎಸ್.ಮಲ್ಲನಗೌಡ, ಬಿಜೆಪಿ ಮುಖಂಡರಾದ ರಾಜು ಮುತ್ತಿಗಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.












Click it and Unblock the Notifications