ಉತ್ತಮ ಮಳೆ; ಬೀಜ, ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಂತ ರೈತರು
ವಿಜಯನಗರ, ಮೇ 25; ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಬಿತ್ತನೆಗೆ ರೈತರು ಬೀಜ, ಗೊಬ್ಬರ ಪಡೆಯಲು ಕೂಡ್ಲಿಗಿ ಪಟ್ಟಣದಲ್ಲಿ ಸಾಲುಗಟ್ಟಿ ನಿಂತಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರಲ್ಲಿ ಸಂತಸ ಮೂಡಿದೆ. ರೈತರು ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ. ಬಿತ್ತನೆ ಮಾಡುವುದಕ್ಕೆ ಬೀಜ, ರಸಗೊಬ್ಬರವನ್ನು ಖರೀದಿ ಮಾಡುವುದಕ್ಕೆ ಪಟ್ಟಣಗಳಿಗೆ ಬಂದಿದ್ದಾರೆ.
ಕೂಡ್ಲಿಗಿಯ ಖಾನಹೊಸಹಳ್ಳಿ, ಈಚಲಬೊಮ್ಮನಹಳ್ಳಿ, ಶಿವಪುರ, ಧನುಸ್ಸನಹಳ್ಳಿ, ಗೊಡೆಕೋಟೆ ವಿವಿಧ ಹಳ್ಳಿಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಆದ್ದರಿಂದ ರೈತರು ಬೀಜ ಖರೀದಿಗೆ ಪಟ್ಟಣಕ್ಕೆ ಆಗಮಿಸಿದ್ದಾರೆ. ತಾಸು ಗಟ್ಟಲೇ ಅಂಗಡಿಗಳ ಮುಂದೆ ನಿಲ್ಲುತ್ತಿದ್ದಾರೆ.

ಲಾಕ್ಡೌನ್ ಹಿನ್ನಲೆ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೂ ಅಗತ್ಯ ವಸ್ತುಗಳ ಜತೆಗೆ ಕೃಷಿಗೆ ಸಂಬಂಧಿಸಿದ ಬೀಜ, ರಸಗೊಬ್ಬರ, ಉಪಕರಣಗಳ ಅಂಗಡಿಗಳನ್ನು ತೆರೆಯುವುದಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಅಂಗಡಿಗಳನ್ನು 12 ಗಂಟೆಯ ನಂತರ ಮುಚ್ಚಲಾಯಿತು. ಕೆಲ ರೈತರಿಗೆ ಮಾತ್ರ ಬೀಜ, ಗೊಬ್ಬರಗಳು ಲಭಿಸಿದವು. ಇನ್ನು ಕೆಲವು ರೈತರಿಗೆ ಗೊಬ್ಬರ ಸಿಗದ ಕಾರಣ ಬೇಸರದಿಂದ ಊರುಗಳಿಗೆ ವಾಪಸ್ ಆದರು.
ಕೂಡ್ಲಿಗಿಯಲ್ಲಿ ಕೆಲವು ಮಾತ್ರ ರಸಗೊಬ್ಬರದ ಅಂಗಡಿಗಳಿವೆ. ಅಲ್ಲಿ ತಾಸು ಗಟ್ಟಲೆ ಕ್ಯೂನಲ್ಲಿ ನಿಂತು ತೆಗೆದುಕೊಳ್ಳುವುದಕ್ಕೆ ದಿನಗಟ್ಟಲೇ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರದಿಂದ ರೈತರಿಗೆ ಬೀಜ, ಗೊಬ್ಬರವನ್ನು ಪ್ರತೇಕವಾಗಿ ವಿತರಣೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
"ಬೀಜ ತೆಗೆದುಕೊಳ್ಳುವುದಕ್ಕೆ ನಾವು ದಿನಗಟ್ಟಲೇ ನಿಂತರೆ ಹೊಲದಲ್ಲಿ ಮಡಿಕೆ ಹೊಡೆದಿದ್ದು ಒಣಗಿ ಹೋಗುತ್ತದೆ. ಹಾಗಾಗಿ ನಮಗೆ ತೊಂದರೆಯಾಗುತ್ತದೆ. ಸರ್ಕಾರದಿಂದ ಬೀಜ ಮಾರಾಟಕ್ಕೆ ಪ್ರತ್ಯೇಕ ಮಳಿಗೆಯನ್ನು ತೆರೆಯಬೇಕು" ಎಂದು ಶಿವಪುರದ ರೈತ ಹುಲುಗಪ್ಪ ಒತ್ತಾಯಿಸಿದರು.












Click it and Unblock the Notifications