ಸುಡು ಬಿಸಿಲಲ್ಲೂ ಜನರ ಮನ ರಂಜಿಸುವ ಹಗಲು ವೇಷಗಾರರು
ಹೊಸಪೇಟೆ, ಏಪ್ರಿಲ್ 20; ಹೊಟ್ಟೆ ಪಾಡಿಗಾಗಿ ಸುಡು ಬಿಸಿಲನ್ನು ಲೆಕ್ಕಿಸದೇ ಈ ಅಲೆಮಾರಿಗಳು ಹಗಲುವೇಷಧಾರಿಗಳಾಗಿ ಊರೂರು ಅಲೆಯುತ್ತಿದ್ದಾರೆ. ತಾಲೂಕಿನದ್ಯಾಂತ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿ ಜನರಿಂದ ಹಣ, ಧವಸ-ಧಾನ್ಯ ಪಡೆಯುತ್ತಾರೆ.
ಇವರು ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸವಾಗಿರುವ ಬುಡ್ಗ ಜಂಗಮ ಸಮುದಾಯದವರು. ಇವರು ಕಲೆಯೇನ್ನೇ ಜೀವವಾಗಿಸಿಕೊಂಡಿದ್ದಾರೆ. ಈ ಹಗಲುವೇಷಗಾರರು ಪೌರಾಣಿಕ, ಜಾನಪದ ಕತೆ ಆಧಾರಿತ ವೇಷಧಾರಿಗಳಾಗಿ ಅಭಿನಯಿಸುತ್ತಾ, ಹಾಡುತ್ತಾ, ಕುಣಿಯುತ್ತಾ ಜನರ ಮನರಂಜಿಸಿ ಹಣ, ಧಾನ್ಯಗಳನ್ನು ತೆಗೆದುಕೊಳ್ಳುತ್ತಾರೆ.
ಈ ಹಗಲುವೇಷಗಾರರು ತಮ್ಮ ಕುಟುಂಬದ ತಂದೆ, ಮಕ್ಕಳು, ಅಣ್ಣ, ತಮ್ಮಂದಿರು, ಅಳಿಯ, ಮಾವ ಹೀಗೆ ಎಲ್ಲರೂ ಒಂದು ಗುಂಪಾಗಿ ಕೂಡಿಕೊಂಡು, ತಮಗೆ ಅನುಕೂಲವಾಗುವ ಹಾಗೆ ಗ್ರಾಮ, ನಗರ, ಪಟ್ಟಣಗಳನ್ನು ಹಂಚಿಕೊಳ್ಳುತ್ತಾರೆ. ಐದು ದಿನಗಳವರೆಗೂ ಆಯ್ದ ಗ್ರಾಮಗಳಲ್ಲಿ ಪ್ರತಿದಿನ ಒಂದೊಂದು ಕತೆಗೆ ಅನುಗುಣವಾಗಿ ವೇಷಗಳನ್ನು ತೊಟ್ಟು ಅಭಿನಯಿಸುತ್ತಾ ಜನರನ್ನು ರಂಜಿಸುತ್ತಾರೆ.
"ಕೊನೆಯ ದಿನ ಎಲ್ಲಾ ಮನೆಗಳಿಗೆ ಹೋಗಿ ಹಣ, ಧಾನ್ಯಗಳನ್ನು ಪಡೆಯುತ್ತಾರೆ. ಇದು ಇವರ ಸಮುದಾಯದ ಪೂರ್ವಿಕರಿಂದಲೂ ನಡೆದು ಕೊಂಡುಬಂದ ಕಲಾಪರಂಪರೆಯಾಗಿದೆ" ಎನ್ನುತ್ತಾರೆ ಈ ಸಮುದಾಯದ ಹಗಲುವೇಷಗಾರ ದುರುಗಪ್ಪ.
ರಾಮಾಯಣ, ಮಹಾಭಾರತ ಕತೆಗಳಿಗೆ ಅನುಗುಣವಾಗಿ ವಶಿಷ್ಠ, ವಿಶ್ವಾಮಿತ್ರ, ಮೇನಕೆ, ಭೀಮಾಂಜನೇಯ ಯುದ್ಧ, ರಾಮಲಕ್ಷ್ಮಣ, ಶೂರ್ಪನಖಿ ಸನ್ನಿವೇಷ, ಮೋಹಿನಿ ಭಸ್ಮಾಸುರ ಸನ್ನಿವೇಷಗಳನ್ನು ಅಭಿನಯಿಸುತ್ತಾರೆ.
ಹಾರ್ಮೋನಿಯಂ, ತಬಲಾ ಇತರೆ ವಾದ್ಯಗಳನ್ನು ನುಡಿಸುತ್ತಾ ಮಧ್ಯೆ ಮಧ್ಯೆ ಸಿನಿಮಾ ಶೈಲಿಯಲ್ಲಿ ಹಾಡುಗಳನ್ನು ಹಾಡುತ್ತಾ ಕೊನೆಯ ಐದನೇ ದಿನ ಹಾಸ್ಯವೇಷಗಳನ್ನು ಧರಿಸಿ ಜನರನ್ನು ರಂಜಿಸುತ್ತಾ ಹೋಗುತ್ತಾರೆ. ಸುಗ್ಗಿ ಕಾಲದಲ್ಲಿ ಸಂಚರಿಸುವ ಈ ಕಲಾವಿದರು ಹಳ್ಳಿಗಳಲ್ಲಿ ಧಾನ್ಯಗಳನ್ನು ಭಿಕ್ಷೆ ಪಡೆಯುತ್ತಾರೆ. ನಗರಗಳಲ್ಲಿ ಹಣ ಪಡೆಯುತ್ತಾರೆ.
"ನಾವು ಕಲಾವಿದರು ನಮ್ಮ ಕಲೆಯನ್ನು ತಮಿಳುನಾಡು, ಪಂಜಾಬ್, ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಲ್ಲಿಯೂ ಆಯಾ ರಾಜ್ಯದ ಭಾಷೆಯಲ್ಲಿಯೇ ಈ ಕಲೆಯನ್ನು ಪ್ರದರ್ಶನ ನೀಡುತ್ತೇವೆ" ಎನುತ್ತಾರೆ ಕಲಾವಿದ ಚಿನ್ನಪ್ಪ.
ಮತ್ತೆ ಮಳೆಗಾಲ ಬಂದರೆ ತಮ್ಮ ಊರುಗಳಿಗೆ ಹೋಗಿ ತಮ್ಮ ಕೃಷಿ ಇತರೆ ವ್ಯಾಪಾರಗಳಲ್ಲಿ ತೊಡಗಿಕೊಳ್ಳುತ್ತಾರೆ. ಈಗಿನ ಹೊಸತಲೆಮಾರಿನ ಯುವ ಕಲಾವಿದರೂ ವಿದ್ಯಾಭ್ಯಾಸದೊಂದಿಗೂ ಈ ಕಲೆಯಲ್ಲಿ ಕೆಲವರು ತೊಡಗಿಕೊಂಡಿದ್ದಾರೆ. ಈ ಕಲೆಯನ್ನು ಬಿಟ್ಟು ಮಹಾರಾಷ್ಟ್ರ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದಾರೆ.
ಹಗಲುವೇಷಧಾರಿಗಳಾಗಿ ಬಣ್ಣ-ಬಣ್ಣದ ವೇಷಗಳನ್ನು ಧರಿಸಿ ಜನರ ಮನಸ್ಸನ್ನು ರಂಜಿಸುವ ಈ ಕಲಾವಿದರಲ್ಲಿ ಬಡತನ ಇದೆ. ಶಿಕ್ಷಣದ ಕೊರತೆ ಇದೆ, ಸಾಮಾಜಿಕ ಶೋಷಣೆಯಲ್ಲಿ ನಲುಗಿ ಹೋಗುತ್ತಿರುವ ಈ ಅಲೆಮಾರಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಮುನ್ನಲೆಗೆ ಬರಬೇಕಾಗಿದೆ.
ಬೇಕಿದೆ ಸರಕಾರದ ಸೌಲಭ್ಯಗಳು: ಹಗಲುವೇಷ ಕಲಾ ಪರಂಪರೆಗೆ ಪ್ರಾಚೀನ ಇತಿಹಾಸವಿದ್ದು ಇದನ್ನು ಗುರುತಿಸಿ ಪ್ರೊತ್ಸಾಹಿಸಬೇಕಿದೆ. ಹೊಟ್ಟೆಪಾಡಿಗಾಗಿ ಕಲೆಯನ್ನೇ ಅವಲಂಬಿಸಿರುವ ಕುಟುಂಬಗಳು ಇವಾಗಿವೆ ಇವರಿಗೆ ಸೂಕ್ತವಾದ ನೆಲೆ ಬೇಕಿದೆ. ಈ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣ ಈ ಮರೀಚಿಕೆಯಾಗಿದೆ.