ಲಂಚಕ್ಕೆ ಬೇಡಿಕೆ: ಕಂಪ್ಲಿ ಸರ್ವೇ ಕಚೇರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಬಳ್ಳಾರಿ ಜನವರಿ 10: ಜಮೀನಿನ ಸರ್ವೇ ಮಾಡಿ ನಕಾಶೆಯನ್ನು ತಯಾರಿಸಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಲಂಚದ ಹಣದ ಸಮೇತ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಕಂಪ್ಲಿ ಪಟ್ಟಣದ ವಿನಾಯಕ ನಗರದಲ್ಲಿ ಸೋಮವಾರ ಸಂಜೆ ನಡೆದಿದೆ.
ಬಳ್ಳಾರಿ ಸರ್ವೇ ಕಚೇರಿಯ ಸಿಬ್ಬಂದಿಯಾದ ಕರಿಬಸಪ್ಪ ಮತ್ತು ವೀರೇಶ್ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು ಎಂದು ತಿಳಿದು ಬಂದಿದೆ.
ಬಳ್ಳಾರಿ ಜಿಲ್ಲೆಯ ವ್ಯಕ್ತಿಯೊಬ್ಬರು ಪಟ್ಟಣದಲ್ಲಿನ ತನ್ನ 1-76 ಎಕರೆ ಹಾಗೂ 1 ಎಕರೆ ಸೇರಿ ಒಟ್ಟು 2-76 ಎಕರೆ ಜಮೀನಿನ ಹದ್ದುಬಸ್ತು ಅಳತೆ ಮತ್ತು ನಕಾಶೆಯನ್ನು ತಯಾರಿಸಿ ಕೊಡುವಂತೆ ಕೋರಿ ಕಂಪ್ಲಿಯ ಸರ್ವೇ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಎರಡು ಅರ್ಜಿಗಳಿಗೆ ಶುಲ್ಕ ಸೇರಿ 4200 ರೂಪಾಯಿ ಪಾವತಿಸಿದ್ದರು.
ಸರ್ವೇ ಕಚೇರಿಯಿಂದ ವ್ಯಕ್ತಿಯ ಜಮೀನುಗಳ ಸರ್ವೇಗೆ ಆಗಮಿಸಿದ್ದ ಅಧಿಕಾರಿಗಳಾದ ಕರಿಬಸಪ್ಪ ಮತ್ತು ವೀರೇಶ್ ಎನ್ನುವವರು, ಜಮೀನಿನ ಸರ್ವೇ ಮಾಡಿ ನಕಾಶೆಯನ್ನು ತಯಾರಿಸಿಕೊಡಲು 5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ವ್ಯಕ್ತಿ ಮತ್ತು ಅಧಿಕಾರಿಗಳ ನಡುವೆ ಮಾತುಕತೆ ನಡೆದಿದ್ದು, 3 ಸಾವಿರ ಲಂಚ ಕೊಡುವಂತೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಈ ಕುರಿತು ಅರ್ಜಿ ಸಲ್ಲಿಸಿದ ವ್ಯಕ್ತಿ ಲೋಕಾಯುಕ್ತ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕರಿಬಸಪ್ಪ ಮತ್ತು ವೀರೇಶ್ ವಿರುದ್ಧ ದೂರು ನೀಡಿದ್ದರು. ಸರ್ವೇ ಅಧಿಕಾರಿ ಕರಿಬಸಪ್ಪ ಅವರ ವಿನಾಯಕ ನಗರದಲ್ಲಿನ ನಿವಾಸದಲ್ಲಿ 3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚದ ಹಣದ ಸಮೇತ ಸರ್ವೇ ಅಧಿಕಾರಿ ಕರಿಬಸಪ್ಪ ಮತ್ತು ವೀರೇಶ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.