ಜಿಂದಾಲ್ ವಿವಾದ : ಬಳ್ಳಾರಿ ಕಾಂಗ್ರೆಸ್ ನಾಯಕರು ಹೇಳುವುದೇನು?
ಬಳ್ಳಾರಿ, ಜೂನ್ 18 : ಜಿಂದಾಲ್ಗೆ 3,667 ಎಕರೆ ಭೂಮಿ ನೀಡುವ ವಿಚಾರ ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಒಂದು ಕಡೆ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ಶಾಸಕರು ಸರ್ಕಾರದ ತೀರ್ಮಾನದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಸರ್ಕಾರದ ತೀರ್ಮಾನದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಭೂಮಿ ಮಾರಾಟದ ಕುರಿತು ಶಿಫಾರು ಮಾಡುವ ಮುನ್ನ ಸಂಪುಟ ಉಪ ಸಮಿತಿ ಬಳ್ಳಾರಿಗೆ ಬಂದು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
'ನಾವು ಯಾವುದೇ ಕಾರ್ಖಾನೆಯ ವಿರುದ್ಧ ಇಲ್ಲ. ಆದರೆ, ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಲೀಸ್ ಕಮ್ ಸೇಲ್ ಡೀಡ್ ಮೂಲಕ ಕಾರ್ಖನೆಗಳಿಗೆ ಭೂಮಿ ಕೊಡಬಾರದು. ಹಿಂದೆ ಅಂಥ ನಿರ್ಧಾರವಾಗಿದ್ದರೂ ಅದನ್ನು ರದ್ದು ಮಾಡಬೇಕು' ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
'ಕಾರ್ಖನೆಗಳಿಂದ ಸಂಡೂರು ತಾಲೂಕಿನಲ್ಲಿ ಹೆಚ್ಚು ನಷ್ಟವಾಗುತ್ತಿದೆ. ಅಲ್ಲಿನ ಕುರೇಕುಪ್ಪದಲ್ಲಿ ಜನಪರ ದನಿ ಎತ್ತಬೇಕಾಗಿದ್ದವರು ಶಾಸಕ ಈ.ತುಕಾರಾಂ. ಹಾಗೆ ಮಾಡದೇ ಇರುವುದಕ್ಕೆ ಅವರಿಗೆ ಏನಾದರೂ ಸಹಾಯ ಸಿಕ್ಕಿರಬಹುದು' ಎಂದು ಆನಂದ್ ಸಿಂಗ್, ಅನಿಲ್ ಲಾಡ್ ಟೀಕಿಸಿದರು.

ಆನಂದ್ ಸಿಂಗ್ ಹೇಳಿದ್ದೇನು?
'ನಾನು ಜಿಂದಾಲ್ ಸಂಸ್ಥೆಯ ಎದುರು ನಿಲ್ಲಲು ಶಕ್ತಿ ಇರುವ ಶಾಸಕನಲ್ಲ. ಸ್ಥಳೀಯರಿಗೆ ಮಾತನಾಡಲು ಅವಕಾಶವೇ ಇಲ್ಲ. ಪೊಲೀಸರೇ ಜನರನ್ನು ಹೆದರಿಸುತ್ತಿದ್ದಾರೆ' ಎಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.

ಷರತ್ತನ್ನು ವಿಧಿಸಬೇಕು
ಬಳ್ಳಾರಿ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಅವರು, '3667 ಎಕರೆ ಭೂಮಿಯನ್ನು ಎಕರೆಗೆ 1.20 ಲಕ್ಷದಂತೆ 43.99 ಕೋಟಿಗೆ ಸರ್ಕಾರ ಮಾರಾಟ ಮಾಡಲು ನಿರ್ಧರಿಸಿದೆ. ಅದನ್ನು ಎಕರೆಗೆ ಕನಿಷ್ಠ 50 ಲಕ್ಷದ ದರದಲ್ಲಿ ಜಿಂದಾಲ್ಗೆ ಅಡವಿಟ್ಟರೆ 1866 ಕೋಟಿ ಸಾಲ ಸಿಗುತ್ತದೆ. ಹೀಗಾಗಿ ಜಿಂದಾಲ್ಗೆ ಭೂಮಿ ಮಾರುವುದೇ ಆದರೆ ಅದನ್ನು ಬ್ಯಾಂಕ್ನಲ್ಲಿ ಅಡ ಇಡಬಾರದು ಎಂಬ ಷರತ್ತನ್ನು ವಿಧಿಸಬೇಕು' ಎಂದು ಹೇಳಿದರು.

ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ
ಮುಜರಾಯಿ ಮತ್ತು ಕೌಶಲಾಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಅವರು ಸಹ ಜಿಂದಾಲ್ ವಿವಾದದ ಬಗ್ಗೆ ಹೇಳಿಕೆ ನೀಡಿದ್ದು, 'ಜಿಂದಾಲ್ ಕಂಪನಿಯಲ್ಲಿ ಉದ್ಯೋಗ ನೀಡುವಲ್ಲಿ ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ. ಜಿಲ್ಲೆಯ ಜನರಿಗೆ ಹೆಚ್ಚು ಉದ್ಯೋಗ ಸಿಗಬೇಕು. ಅದರಲ್ಲೂ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಬೇಕು. ಆದರೆ, ಅದು ಆಗುತ್ತಿಲ್ಲ' ಎಂದು ಆರೋಪಿಸಿದ್ದಾರೆ.

ಕಾನೂನು ಪ್ರಕಾರವಾಗಿದೆ
ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರು, 'ಸರ್ಕಾರ ಕಾನೂನು ಪ್ರಕಾರವಾಗಿಯೇ ಜಿಂದಾಲ್ ಕಂಪನಿಗೆ ಭೂಮಿ ನೀಡಲು ನಿರ್ಧರಿಸಿದೆ. ಕೆಡಿಬಿ ವತಿಯಿಂದ ಭೂಮಿ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರದ ನಿರ್ಧಾರ ಸಮಂಜಸವಾಗಿದೆ' ಎಂದು ಹೇಳಿದ್ದಾರೆ.

ಜಿಂದಾಲ್ ವಿವಾದವೇನು?
ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಮತ್ತು ಕರೆಕುಪ್ಪ ಗ್ರಾಮದಲ್ಲಿ 2001 ಎಕರೆ ಹಾಗೂ ಸಂಡೂರು ತಾಲೂಕಿನ ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿ 1,666 ಎಕರೆ ಭೂಮಿ ಸೇರಿ 3667 ಎಕರೆ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕ್ರಯ ಪತ್ರ ಮಾಡಿಕೊಡಲು ತೀರ್ಮಾನ ತೆಗೆದುಕೊಂಡಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.












Click it and Unblock the Notifications