ಸೋದರನ ಪಕ್ಷೇತರ ಸ್ಪರ್ಧೆಗೆ ಜನಾರ್ದನ ರೆಡ್ಡಿ ಗ್ರೀನ್ ಸಿಗ್ನಲ್?
Recommended Video
ಬಿಜೆಪಿಗೆ ತಮ್ಮ ಅನಿವಾರ್ಯ ಹಾಗೂ ಶಕ್ತಿ ಏನು ಎಂಬುದನ್ನು ತೋರಿಸುವ ಸಲುವಾಗಿ ಗಾಲಿ ಜನಾರ್ದನ ರೆಡ್ಡಿ ನಿರ್ಧಾರವೊಂದಕ್ಕೆ ಬಂದಿದ್ದಾರೆ. ಒಂದು ವೇಳೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ದೊರೆಯದಿದ್ದಲ್ಲಿ ತಮ್ಮ ಸೋದರ ಸೋಮಶೇಖರ ರೆಡ್ಡಿ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮಶೇಖರ್ ರೆಡ್ಡಿಯೋ ಅಥವಾ ಅಥವಾ ಜನಾರ್ದನ ರೆಡ್ಡಿಯೋ ಪಕ್ಷೇತರರಾಗಿ ಕಣಕ್ಕೆ ಇಳಿಯುವುದು ಅಷ್ಟು ಸಲೀಸಾದ ವಿಚಾರವಲ್ಲ. ಆದರೂ ಬಿಜೆಪಿಗೆ ಸಡ್ಡು ಹೊಡೆಯಲು ಮುಂದಾದರೆ, ರೆಡ್ಡಿ ರಹಸ್ಯವನ್ನೆಲ್ಲ ತೆರೆದಿಟ್ಟು, ವರ್ಚಸ್ಸಿಗೆ ಇನ್ನಷ್ಟು ಹಾನಿ ಮಾಡಲು ಕೇಸರಿ ಪಕ್ಷ ಹಿಂದೆ-ಮುಂದೆ ನೋಡಲ್ಲ ಎಂಬ ಅಳುಕು ಸಹ ಇದೆ.
ಜನಾರ್ದನ ರೆಡ್ಡಿ ಜತೆ ಸೇರಿ ಬಿಜೆಪಿ ಹೆಣೆದಿರುವ ತ್ರಿಶೂಲ ವ್ಯೂಹ ಏನದು?
ಜತೆಗೆ ಪಕ್ಷೇತರ ಸ್ಪರ್ಧೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ. ಹಾಗೆ ಮಾಡಿದರೆ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಎರಡರಲ್ಲೂ ಪಕ್ಷಕ್ಕೆ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಬಿಜೆಪಿ ನಾಯಕರು ಬಳ್ಳಾರಿ ನಗರ ಕ್ಷೇತ್ರದಿಂದ ಸೋಮಶೇಖರ ರೆಡ್ಡಿಗೆ ಟಿಕೆಟ್ ನೀಡುವ ಇರಾದೆಯಲ್ಲೇ ಇದ್ದಾರೆ.
ಸೋಮಶೇಖರ ರೆಡ್ಡಿ ವಿರುದ್ಧ ಗುರುತರ ಆರೋಪಗಳು ಇಲ್ಲ. ಆದರೆ ಜನಾರ್ದನ ರೆಡ್ಡಿ ಜತೆಗೆ ನಿಕಟವಾಗಿದ್ದಾರೆ ಎಂಬ ಕಾರಣಕ್ಕೆ ಪಕ್ಷದ ಟಿಕೆಟ್ ನೀಡುವುದಕ್ಕೆ ಹಿಂದೆ-ಮುಂದೆ ನೋಡುತ್ತಿದೆ ಬಿಜೆಪಿ.
ಸೋಮಶೇಖರ್ ರೆಡ್ಡಿ, ಶ್ರೀರಾಮುಲು ವಿಚಾರವಾಗಿ ಸಮಸ್ಯೆ ಇಲ್ಲ
"ಸೋಮಶೇಖರ ರೆಡ್ಡಿ ಹಾಗೂ ಶ್ರೀರಾಮುಲು ವಿಚಾರವಾಗಿ ಯಾವುದೇ ಸಮಸ್ಯೆಯಿಲ್ಲ. ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಬಳ್ಳಾರಿಯಲ್ಲಿ ಎಲ್ಲ ಸ್ಥಾನಗಳನ್ನು ನಾವು ಗೆಲ್ತೀವಿ. ಆದರೆ ಜನಾರ್ದನ ರೆಡ್ಡಿ ವಿಚಾರವಾಗಿ ಯಾವುದೇ ಚರ್ಚೆ ಆಗಿಲ್ಲ" ಎಂದು ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸೋಮಶೇಖರ ರೆಡ್ಡಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬುದನ್ನೂ ತಿಳಿಸಿಲ್ಲ.
ಕರುಣಾಕರ ರೆಡ್ಡಿಗೆ ಹರಪನಹಳ್ಳಿಯಿಂದ ಟಿಕೆಟ್
ಇನ್ನು ಯಾವುದೇ ಹಗರಣದಲ್ಲಿ ಸಿಲುಕದ ಜನಾರ್ದನ ರೆಡ್ಡಿ ಅವರ ಮತ್ತೊಬ್ಬ ಸಹೋದರ ಕರುಣಾಕರ ರೆಡ್ಡಿಗೆ ಹರಪನಹಳ್ಳಿಯಿಂದ ಬಿಜೆಪಿ ಟಿಕೆಟ್ ನೀಡಬಹುದು. "ಇಪ್ಪತ್ತೆರಡು ವರ್ಷದಿಂದ ನಾನು ಪಕ್ಷದಲ್ಲಿದ್ದೇನೆ. ನನ್ನ ಶಕ್ತಿ ಹಾಗೂ ಸಾಮರ್ಥ್ಯ ಪಕ್ಷಕ್ಕೆ ಗೊತ್ತಿದೆ. ಬಿಜೆಪಿಯ ಹರಪನಹಳ್ಳಿ ಟಿಕೆಟ್ ನನಗೆ ಸಿಗುವ ವಿಶ್ವಾಸ ಇದೆ" ಎಂದಿದ್ದಾರೆ ಕರುಣಾಕರ ರೆಡ್ಡಿ.
ಜನಾರ್ದನ ರೆಡ್ಡಿ ನೇರವಾಗಿ ಪಕ್ಷದ ಜತೆ ಗುರುತಿಸಿಕೊಳ್ಳುವಂತಿಲ್ಲ
ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾತನಾಡಿ, ಜನಾರ್ದನ ರೆಡ್ಡಿಯಿಂದ ಅಂತರ ಕಾಯ್ದುಕೊಳ್ಳುವಂತೆ ಕೇಂದ್ರ ನಾಯಕರು ಕರುಣಾಕರ ರೆಡ್ಡಿಗೆ ಗಂಭೀರವಾಗಿ ಸೂಚಿಸಿದ್ದಾರೆ. ಇನ್ನು ಜನಾರ್ದನ ರೆಡ್ಡಿ ಕೂಡ ಯಾವುದೇ ಕಾರಣಕ್ಕೂ ಚುನಾವಣೆ ವೇಳೆ ಪಕ್ಷದೊಂದಿಗೆ ನೇರವಾಗಿ ಗುರುತಿಸಿಕೊಳ್ಳುವಂತಿಲ್ಲ ಎನ್ನುತ್ತಾರೆ.
ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ಹೀಗಿತ್ತು
ಜನಾರ್ದನ ರೆಡ್ಡಿ ಬಿಜೆಪಿ ಜತೆಗಿಲ್ಲ ಎಂದು ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ ನಂತರ ಪ್ರತಿಕ್ರಿಯೆ ನೀಡಿರುವ ಕರುಣಾಕರ ರೆಡ್ಡಿ, ಆ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಹರಪನಹಳ್ಳಿಯಲ್ಲಿ ಜನಾರ್ದನ ರೆಡ್ಡಿ ನನ್ನ ಪರವಾಗಿ ಚುನಾವಣೆ ಪ್ರಚಾರ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.