ರಾಜ್ಯದಲ್ಲಿ ಮೋದಿ ಪರ ಅಲೆ ಎಂಬುದು ಸುಳ್ಳು: ಪ್ರಕಾಶ್ ರೈ
Recommended Video

ಬಳ್ಳಾರಿ ಮೇ 3 : ಕರ್ನಾಟಕದಲ್ಲಿ ಬಿಜೆಪಿ ಗೆದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು 'ಜಸ್ಟ್ ಆಸ್ಕಿಂಗ್' ಚಳವಳಿಯ ಸಂಚಾಲಕ, ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ಮೂರು ಜನ ಸಿಎಂಗಳನ್ನು ನೋಡಿದ್ದೇವೆ. ಅಪಾರ ಪ್ರಮಾಣದ ಭ್ರಷ್ಟಚಾರ ನಡೆಸಿರುವುದನ್ನೂ ನೋಡಿದ್ದೇವೆ, ಕೇಳಿದ್ದೇವೆ. 20-20 ಎಂದು ಮ್ಯೂಜಿಕಲ್ ಚೇರ್ ಆಡಳಿತವನ್ನೂ ಅನುಭವಿಸಿದ್ದೇವೆ. ಬಿಜೆಪಿ ಒಳ್ಳೆಯ ಪಕ್ಷ ಅಲ್ಲ ಎಂಬ ಕಾರಣಕ್ಕಾಗಿ ಜನರು ಪ್ರಶ್ನೆ ಕೇಳಲಿ ಎಂಬ ಉದ್ದೇಶದಿಂದ ಜಸ್ಟ್ ಆಸ್ಕಿಂಗ್' ಚಳವಳಿಯನ್ನು ನಾನು ಆರಂಭಿಸಿದ್ದೇನೆ ಎಂದರು.

ಬಿಜೆಪಿಯವರನ್ನು ಆಯ್ಕೆ ಮಾಡಬೇಕೆ?
ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯಕ್ಕೆ ಪ್ರಧಾನಿ ಮೋದಿಯವರು ಬಂದು ಹೋಗಿದ್ದಾರೆ. ಬರುತ್ತಲೇ ಇದ್ದಾರೆ. ರಾಜ್ಯದಲ್ಲಿ ಮೋದಿ ಅವರ ಪರ ಅಲೆ ಎಂಬುದು ಸುಳ್ಳು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಶ್ನೆ ಮಾಡುವವರ ಮೇಲೆ ದಾಳಿಗಳು ನಡೆಯುತ್ತಿವೆ.
ಚಿತ್ರ ತಯಾರಿಸಿದವರ ತಲೆ ಕತ್ತರಿಸುವ ಮಾತುಗಳನ್ನು ಬಿಜೆಪಿಯವರು ಆಡುತ್ತಿದ್ದಾರೆ. ಮೋದಿ ಅವರು ನನ್ನ ಸರ್ಕಾರದ ಬಗ್ಗೆ ಮಾತನಾಡಿದರೆ ಬೆರಳು ಕತ್ತರಿಸುವೆ ಎಂದು ಹೇಳಿಕೆ ನೀಡಿದ್ದಾರೆ ಇಂಥಹ ಬಿಜೆಪಿಯವರನ್ನು ನಾವು, ಆಯ್ಕೆ ಮಾಡಬೇಕೆ? ಎಂದು ಪ್ರಕಾಶ್ ರೈ ಪ್ರಶ್ನಿಸಿದರು.

ರಾಹುಲ್ ರಾಷ್ಟೀಯ ಅಧ್ಯಕ್ಷ ಅಷ್ಟೇ...
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಬಂದ ಸರ್ಕಾರಗಳು ಸರಿಯಾಗಿ ಕೆಲಸ ಮಾಡಿಲ್ಲ. ಕಾರಣ ಜನರ ಪ್ರಶ್ನೆಗಳನ್ನು ನಾನು ಕೇಳಲು ಮುಂದಾಗಿದ್ದೇನೆ. ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಅದೇ ಸವಕಲು ನಾಣ್ಯಗಳ ಆಡಳಿತ ನಡೆಸುತ್ತಿದ್ದಾರೆ.
ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಿರಿ. ರಾಹುಲ್ ಒಂದು ಪಕ್ಷದ ರಾಷ್ಟೀಯ ಅಧ್ಯಕ್ಷ ಅಷ್ಟೇ. ನೀವು ದೇಶದ ಪ್ರಧಾನಿ. ನೀವು ಏನು ಕೆಲಸ ಮಾಡಲಿದ್ದೀರಿ, ಈವರೆಗೆ ಏನು ಸಾಧನೆ ಮಾಡಿದ್ದೀರಿ ಹೇಳಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮುಖ್ಯಮಂತ್ರಿ ಎರಡು ಸ್ಥಾನಗಳಲ್ಲಿ ನಿಂತರೆ ಕೇಳುತ್ತೀರಿ, ನೀವು ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ? ರಾಜ್ಯದಲ್ಲಿ ಬಿಜೆಪಿ ಬಿರುಗಾಳಿ ಇದೆ ಎಂದಿದ್ದೀರಿ. ಸರಿಯಾದ ಪದಗಳನ್ನು ಬಳಸಿ ಸುಮ್ಮನೆ ಎಂದು ಭಾಷಣ ಮಾಡಿ ಮೂಗಿಗೆ ತುಪ್ಪ ಸವರಬೇಡಿ. ಅಭಿವೃದ್ಧಿ ಕುರಿತು ಮಾತನಾಡಿ ಎಂದು ಪ್ರಕಾಶ್ ರೈ ಆಗ್ರಹಿಸಿದರು.

ರೆಡ್ಡಿಗಳು ಕೊಳ್ಳೆ ಹೊಡೆದದ್ದು ಜನತೆಯ ಸ್ವತ್ತನ್ನು
ದೇವೆಗೌಡರು ಕಾವೇರಿ ಬಗ್ಗೆ ಮಾತನಾಡಬೇಕು ಎಂದಾಗ ಗೌರವ ತೋರಲಿಲ್ಲ, ಆಗಿರಲಿಲ್ಲ ಹಿರಿತನ . ಎದುರಾಳಿ ದೇಶ ಪಾಕ್ ಗೆ ಹೋಗಿ ಪಾಕ್ ನ ಪ್ರಧಾನಿಯ ಹೆಂಡತಿಗೆ ಸೀರೆ ಒಯ್ದು ಗೌರವ ತೋರುತ್ತೀರಿ. ಅದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪತ್ನಿಯನ್ನು ಇಟಾಲಿಯನ್ ಎಂದು ಜರೆಯುತ್ತಿರಿ. ಭಷ್ಟಾಚಾರದ ಬಗ್ಗೆ ಮಾತನಾಡುತ್ತಿರಿ, ರೆಡ್ಡಿಗಳ ಭಷ್ಟಾಚಾರದ ಬಗ್ಗೆ ಮಾತನಾಡಲ್ಲ ನೀವು ಎಂದರು.
ಭ್ರಷ್ಟಾಚಾರ ಮಾಡಿದ ಗಣಿ ರೆಡ್ಡಿಗಳನ್ನು ಕ್ಷಮಿಸಿದ್ದೇನೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಇವರು ಯಾರು ಗಣಿ ರೆಡ್ಡಿಗಳನ್ನು ಕ್ಷಮಿಸಲು. ಕರ್ನಾಟಕದ ಜನತೆ ಕ್ಷಮಿಸಬೇಕು. ರೆಡ್ಡಿಗಳು ಜನತೆಯ ಸ್ವತ್ತನ್ನು ಕೊಳ್ಳೆ ಹೊಡೆದದ್ದು, ನಿಮ್ಮ ಸ್ವತ್ತನ್ನಲ್ಲ.
15 ಸೀಟುಗಳು ಬರುತ್ತವೆ ಎಂದು ಇವರು ರೆಡ್ಡಿಯನ್ನು ಕ್ಷಮಿಸಿದರಂತೆ ಎಂದು ವ್ಯಂಗ್ಯವಾಡಿದ ಅವರು, ಚೀನಾದವರನ್ನು ಕರೆಸಿ ಇಲ್ಲಿ ಉದ್ಯೋಗ ಕೊಡುತ್ತಾರಂತೆ. ನಾವು ಕೂಲಿ ಕೊಡಲು ಇಲ್ಲಿದ್ದಿವಾ? ಕರ್ನಾಟಕದ ಜನತೆ ನೋಡುತ್ತಿದ್ದಾರೆ. ಉಡುಪಿಗೆ ಹೋಗಿ ಅದೇ ಹಿಂದುತ್ವದ ಹತ್ಯೆ ಎನ್ನುತ್ತೀರಿ, ವಿನಾಯಕ ಬಾಳಿಗಾ ಕೊಲೆ ಬಗ್ಗೆ ಮಾತನಾಡಲ್ಲ ಏಕೆ? ಎಂದು ಪ್ರಧಾನಿ ಅವರನ್ನು ಪ್ರಕಾಶ್ ರೈ ಪ್ರಶ್ನಿಸಿದರು.

ಪ್ರಧಾನಿಯವರು ಉತ್ತರ ಕೊಡಲಿ
ಅಂಬೇಡ್ಕರ್ ಕುರಿತು ಮಾತನಾಡುವ ನೀವು, ನಿಮ್ಮದೆ ಸರ್ಕಾರ ಅಸ್ತಿತ್ವದಲ್ಲಿರುವ ಉತ್ತರಪ್ರದೇಶದ ಐದು ದಲಿತ ಸಂಸದರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ. ನಿಮ್ಮ ಟೇಬಲ್ ಮೇಲಿರುವ ಆ ಪತ್ರಗಳನ್ನು ನೋಡಿ 2019ರ ನಂತರ ನೀವು ನಿರುದ್ಯೋಗಿಯಾಗಲಿದ್ದೀರಿ. ಕರ್ನಾಟಕಕ್ಕೆ ಬಂದು ವಯಸ್ಕರ ಶಿಕ್ಷಣ ಪಡೆಯಿರಿ ಎಂದು ವ್ಯಂಗ್ಯವಾಡಿದರು.
ನಾನು ಈ ದೇಶದ ಪ್ರಜೆ. ಚುನಾವಣೆಯಲ್ಲಿ ನನ್ನ ಮತ ಕೇಳುತ್ತೀರಿ. ನಾನು ಯಾಕೆ ಪ್ರಶ್ನೆ ಕೇಳಬಾರದು? ನಾನು ಕೇವಲ ಕಲಾವಿದ ಮಾತ್ರವಲ್ಲ, ಬಿಜೆಪಿಯನ್ನು ಪ್ರಶ್ನೆ ಮಾಡುತ್ತಿದ್ದೇನೆ. ನಾಳೆ ಕಾಂಗ್ರೆಸ ಅನ್ನೂ ಪ್ರಶ್ನೆ ಮಾಡುತ್ತೇನೆ. ಈಗ ಮೊದಲು ಪ್ರಧಾನಿಯಾದ ನೀವು ಉತ್ತರ ಕೊಡಿ. ನಾನು ಯಾವುದೇ ರಾಜಕೀಯ ಪಕ್ಷದ ಪರ ಇಲ್ಲ, ಜನರ ಪರ ಇದ್ದೇನೆ. ಅವರ ಪರ ನಿಂತು ಪ್ರಶ್ನೆ ಕೇಳುವ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಕಾಶ್ ರೈ ತಿಳಿಸಿದರು.












Click it and Unblock the Notifications