ನನ್ನದು ಖಾಲಿ ಜೇಬು, ಯಾವ ವ್ಯವಹಾರವೂ ಇಲ್ಲ: ಶ್ರೀರಾಮುಲು ಸಂದರ್ಶನ
ನೂರಾರು ಕೋಟಿ ರುಪಾಯಿ ಮೌಲ್ಯದ ಮನೆ. ಅರಮನೆಯನ್ನೇ ಕಲ್ಪಿಸಿ, ಅನೇಕರನ್ನು ದಿಗ್ಮೂಢರನ್ನಾಗಿಸುವ ಐಷಾರಾಮಿ ಸೌಲಭ್ಯಗಳ ಮನೆ. ತಾಂತ್ರಿಕವಾಗಿ ಅತ್ಯಾಧುನಿಕ, ಐಷಾರಾಮಿ ಕುರ್ಚಿ, ಮೇಜು, ಅಲಂಕಾರಿಕ ವಸ್ತುಗಳು, ಕಣ್ಣು ಕೋರೈಸುವಂಥ ವಿದ್ಯುತ್ ದೀಪಗಳ ಬೆಳಕಿನ ಅಲಂಕಾರ- ಆ ಮನೆಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟಕರ.
ಸದಾ ಕಾಲ ಮನೆಯ ಒಳಗೆ - ಹೊರಗೆ ಹತ್ತಾರು ಜನರು ಹೆಜ್ಜೆ ಹಾಕುತ್ತಲೇ ಇರುತ್ತಾರೆ. ಆಳುಗಳಿಗೆ ಲೆಕ್ಕವೇ ಇಲ್ಲ. ಜನರ ಗುಂಪಂತೂ ತಮ್ಮ ನಾಯಕ ಬಿ. ಶ್ರೀರಾಮುಲುಗಾಗಿ ವರಾಂಡದಲ್ಲಿ, ಕಾಂಪೌಂಡಿನ ಹೊರಗಡೆ ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇರುತ್ತಾರೆ.
ಇನ್ನು ಹೇಳಿಕೇಳಿ ಇದು ಚುನಾವಣೆ ಸಮಯ. ಈಗ ಬಿ. ಶ್ರೀರಾಮುಲು ಒಂದು ಅರೆಕ್ಷಣ ಸಿಕ್ಕರೆ ಸಾಕು ಎನ್ನುವವರ ಸಾಲು ದೊಡ್ಡದೇ ಇದೆ. ಎಲ್ಲರನ್ನೂ ಮಾತನಾಡಿಸಿ, ಸಮಾಧಾನ ಹೇಳಿ, ಕೈ ಬೀಸುತ್ತಲೇ ಕಾರು ಹತ್ತಿ, ಕ್ಷೇತ್ರದ ಕಡೆ ಧಾವಿಸುವ ವಾಲ್ಮೀಕಿ ಸಮುದಾಯದ ನಾಯಕ, ಬಿಜೆಪಿಯಲ್ಲಿ ಗಲ್ಲಿಯಿಂದ ದಿಲ್ಲಿವರೆಗೆ ನೇತಾರ ಆಗಿ ಬೆಳೆಯುತ್ತಿರುವ ಬಳ್ಳಾರಿಯ ಬೋಯ (ವಾಲ್ಮೀಕಿ) ಶ್ರೀರಾಮುಲು ಅಚ್ಚರಿ ಮೂಡಿಸುವ ಮಾಧ್ಯಮದ ಸರಕು.
ಅಷ್ಟೇ ಅಲ್ಲ, ಇವರ ಆಪ್ತಗೆಳೆಯ- ಬಿ. ಶ್ರೀರಾಮುಲುನ ಯಶಸ್ಸಿನ ಬೆನ್ನೆಲುಬಾಗಿ ನಿಂತಿರುವ ಗಣಿ ಉದ್ಯಮಿ ಜಿ. ಜನಾರ್ದನ ರೆಡ್ಡಿ ಮಾತನಾಡಿದ್ದೆಲ್ಲಾ ಮಾಧ್ಯಮದ ಸುದ್ದಿ. ಜನರಿಗೆ ಹೇಳಿದ್ದೆಲ್ಲಾ ವೇದವಾಕ್ಯ ಎನ್ನುವ ಹಂತಕ್ಕೆ ಬಂದಿದೆ. ಬಿ. ಶ್ರೀರಾಮುಲು ಅವರನ್ನು ಬಾಲ್ಯದಿಂದಲೂ ಅತೀ ಹತ್ತಿರದಿಂದ ಕಂಡಿರುವ 'ಒನ್ಇಂಡಿಯಾ ಕನ್ನಡ'ದ ಪ್ರತಿನಿಧಿ, ಸ್ವಗತದ ಜೊತೆ ಜೊತೆಯಲ್ಲೇ ಸಂದರ್ಶನವನ್ನೂ ಮಾಡಿದ್ದು, ನಿಮಗಾಗಿ ಓದಲು ಮುಂದಿಡುತ್ತಿದ್ದಾರೆ.

ಉಪ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ
ಬಿ. ಶ್ರೀರಾಮುಲು ಬಳ್ಳಾರಿಯ ದೇವಿನಗರದ 2ನೇ ಕ್ರಾಸ್ ನಲ್ಲಿ ಹುಟ್ಟಿ, ಬೆಳೆದು, ಇಂದು ರಾಜ್ಯ - ರಾಷ್ಟ್ರಮಟ್ಟದ ನಾಯಕ ಆಗಿರುವುದು ನಮಗೆಲ್ಲ ಹೆಮ್ಮೆ. ಮುಂಡ್ಲೂರು ಗಂಗಪ್ಪ, ಮುಂಡ್ಲೂರು ಸೀನಪ್ಪ, ಮುಂಡ್ಲೂರು ದಿವಾಕರ ಬಾಬು, ಮುಂಡ್ಲೂರು ಕುಮಾರಸ್ವಾಮಿ, ಮುಂಡ್ಲೂರು ಗೋವರ್ಧನ ಹೀಗೇ 'ಮುಂಡ್ಲೂರು' ಮನೆತನದ ರಾಜಕೀಯ ಗರಡಿಯಲ್ಲಿ ಮೂಲೆಯಲ್ಲಿ ನಿಂತುಕೊಂಡೇ ಇರುತ್ತಿದ್ದ ಯುವಕ, ಅವರಿಗೇ ತಿರುಗೇಟು ನೀಡಿ, ಬೆಳೆದು ನಿಂತಿದ್ದಾರೆ. ಬಸವರಾಜೇಶ್ವರಿಯ ಆಶೀರ್ವಾದ ಪಡೆದಿದ್ದ ಶ್ರೀರಾಮುಲು, ಯೌವನದಲ್ಲೇ ರಾಜಕೀಯ ನಿಷ್ಠೆ ಬದಲಾವಣೆ, ಒಳಹೊಂದಾಣಿಕೆ ಇನ್ನಿತರ ತರಬೇತಿ ಪಡೆದರು. ಕೌಟುಂಬಿಕ ಸಂಕಷ್ಟದಲ್ಲಿದ್ದ 'ಗಾಲಿ' ಕುಟುಂಬಕ್ಕೆ ಆಪತ್ಬಾಂಧವ ಆದ ರಾಮುಲು, ಅದೇ ನಿಷ್ಠೆ, ಬದ್ಧತೆಯನ್ನು ತೋರಿದ ಕಾರಣ, ಉಪಮುಖ್ಯಮಂತ್ರಿ ಹುದ್ದೆಯ ರೇಸಿಗೆ ಬಂದು ನಿಂತಿದ್ದಾರೆ.

ಈ ಸ್ಥಿತ್ಯಂತರಕ್ಕೆ ಜನಾರ್ದನ ರೆಡ್ಡಿಯೇ ಕಾರಣ
ಇವತ್ತಿನ ಶ್ರೀರಾಮುಲುಗೆ ಜಿ. ಜನಾರ್ದನ ರೆಡ್ಡಿಯೇ ಕಾರಣ. ಜಿಲ್ಲೆಯ ರಾಜಕೀಯ ಸ್ಥಿತ್ಯಂತರಕ್ಕೂ ಜಿ. ಜನಾರ್ದನ ರೆಡ್ಡಿಯೇ ಸೂತ್ರಧಾರ. ಇವರಿಬ್ಬರ ಜೋಡಿಗೆ ಬೆಂಬಲವಾಗಿ ನಿಂತಿದ್ದು ಓಬಳಾಪುರಂ ಗಣಿ ಕಂಪೆನಿಯ ಉದ್ಯಮ. ಸೈಕಲ್, ಲಡಕಾಸು ಮೋಟಾರುಗಾಡಿಗೆ ಪೆಟ್ರೋಲ್ ತುಂಬಿಸಲು ಕಂಡವರ ಜೇಬುಗಳನ್ನೇ ನೋಡುತ್ತಿದ್ದ ಕಣ್ಣುಗಳ ಮಧ್ಯೆ ದಿನಗಳನ್ನು ಕಳೆಯುತ್ತಿದ್ದ ಬಿ. ಶ್ರೀರಾಮುಲು ಇಂದು ತಿರುಗಾಡುವ ಕಾರುಗಳ ಬೆಲೆ, ಹಾರಾಡುವ ಹೆಲಿಕಾಪ್ಟರ್, ಏರೋಪ್ಲೇನ್ ಗಳು ಲೆಕ್ಕ ಹಾಕುವವರುಂಟೆ! ಅವರು ಹಾಸಿ, ಒದ್ದು, ಮಲಗುವ ಮಂಚದ ಬೆಲೆ ಬಲ್ಲವರುಂಟೆ!

ಶ್ರೀರಾಮುಲು ಕಾರಿನಲ್ಲೇ ನೀಡಿದ ಸಂದರ್ಶನ
ಬೆಳಗ್ಗೆ ಎದ್ದು, ಶುಚೀರ್ಭೂತನಾಗಿ, ಶಿವಪೂಜೆ ನೆರವೇರಿಸಿ, ಗೋಮಾತೆಗೆ ಮಂಗಳಾರತಿ ಮಾಡಿ, ನಮಸ್ಕಾರ ಸಲ್ಲಿಸಿ, ಸೂರ್ಯನಿಗೆ ನಮಸ್ಕಾರ ಮಾಡಿ, ಮನೆ ಸೇರಿ, ಉಪಾಹಾರ ಸೇವನೆ ಮಾಡಿ, ದಿನಚರಿ ಮುಂದುವರಿಸುವ ಬಿ. ಶ್ರೀರಾಮುಲು ಚುನಾವಣೆ ಹಿನ್ನೆಲೆಯಲ್ಲಿ ಬಹಳ ಕೆಲಸಗಳನ್ನು ಮೈ ಮೇಲೆ ಎಳೆದುಕೊಂಡಿರುವ ನಾಯಕ. ಮೊಳಕಾಲ್ಮೂರು ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿ. ಶ್ರೀರಾಮುಲು ಕ್ಷೇತ್ರ ತಲುಪುವ ಆತುರದಲ್ಲೇ, ಅವರ ಜೊತೆಯಲ್ಲಿ ಕಾರಿನಲ್ಲಿ ಸಾಗುತ್ತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ.

ಪ್ರಶ್ನೆ: ನಿಮ್ಮ ಸ್ವಕ್ಷೇತ್ರ ಬಳ್ಳಾರಿ ಗ್ರಾಮೀಣ ಬಿಟ್ಟಿದ್ದು ಏಕೆ? ಬಾದಾಮಿಯಲ್ಲಿ ಸ್ಪರ್ಧಿಸುವ ಅಗತ್ಯವಿತ್ತೇ?
ಶ್ರೀರಾಮುಲು: ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಮೊಳಕಾಲ್ಮೂರುನಲ್ಲಿ ಸ್ಪರ್ಧಿಸಲು ಹೇಳಿತು, ಸ್ಪರ್ಧಿಸಿದೆ. ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರ ನನ್ನ ಮಾತೃಕ್ಷೇತ್ರ. ಮುಖ್ಯಮಂತ್ರಿ ಸಿದ್ಧರಾಮಯ್ಯ 'ಅಹಿಂದ' ನಾಯಕರಾಗಿ ಕಾಂಗ್ರೆಸ್ನಲ್ಲಿದ್ದಾರೆ. ಬಿಜೆಪಿಯಲ್ಲಿ ನಾನು ವಾಲ್ಮೀಕಿ ಶ್ರೀರಾಮುಲು 'ಅಹಿಂದ' ನಾಯಕ ಆಗಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು, ಅಲ್ಲಿಯೂ ನಾಮಪತ್ರ ಸಲ್ಲಿಸಿದ್ದೇನೆ. ತಪ್ಪೇನಿಲ್ಲ. ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧಿಸಿರುವಾಗ ನನ್ನ ಸ್ಪರ್ಧೆಯಲ್ಲಿ ತಪ್ಪೇನಿದೆ? ಪಕ್ಷವು ನನ್ನ ಅಗತ್ಯವನ್ನು ಗಮನಿಸಿ, ಬಾದಾಮಿಯಲ್ಲಿ ಸ್ಪರ್ಧಿಸಲು ಆದೇಶ ನೀಡಿದೆ. ನಾನು ಸ್ಪರ್ಧಿಸಿದ್ದೇನೆ.

ಪ್ರಶ್ನೆ: ಎರಡು ಕ್ಷೇತ್ರಗಳಲ್ಲಿ ಪ್ರಚಾರ ನಿರ್ವಹಣೆ ಹೇಗೆ ಮಾಡುತ್ತೀರಿ, ಗೆಲುವಿನ ಬಗ್ಗೆ ವಿಶ್ವಾಸ ಇದೆಯಾ?
ಶ್ರೀರಾಮುಲು: ಎರಡು ಕ್ಷೇತ್ರಗಳಲ್ಲಿ ಪ್ರಚಾರ ನಿರ್ವಹಣೆ ಅಲ್ಲ, ಒಟ್ಟು 80 ಕ್ಷೇತ್ರಗಳಲ್ಲಿ ಪ್ರಚಾರ ನಿರ್ವಹಿಸಲು ಪಕ್ಷ ನನಗೆ ಆದೇಶ ನೀಡಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಈ ಕುರಿತು ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ನಾನು ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ಗೆಲುವು ಖಚಿತ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಲಿದ್ದಾರೆ.

ಪ್ರಶ್ನೆ: ನೀವು ರಾಜ್ಯ - ರಾಷ್ಟ್ರಮಟ್ಟದ ನಾಯಕರಾಗಿ ಹೊರಹೊಮ್ಮಿದ್ದೀರಿ. ಪ್ರಚಾರದ ಒತ್ತಡ, ಆರೋಗ್ಯ ಹೇಗಿದೆ?
ಶ್ರೀರಾಮುಲು: ಪಕ್ಷಕ್ಕಾಗಿ, ಪಕ್ಷದ ಹಿತಕ್ಕಾಗಿ ದುಡಿಯುತ್ತಿದ್ದೇನೆ. ಒತ್ತಡ ಅನಿಸುತ್ತಿದೆ. ನಿಭಾಯಿಸುತ್ತಿದ್ದೇನೆ. ಪ್ರಚಾರ ಮಾಡುವುದು, ಭಾಷಣ ಮಾಡುವುದು ಅಭ್ಯಾಸವಾಗಿದೆ. ಒತ್ತಡದಲ್ಲೂ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೇನೆ. ಪಕ್ಷಕ್ಕಾಗಿ ಬಿಎಸ್ ವೈ ಸೇರಿದಂತೆ ಅನೇಕರು ತ್ಯಾಗ ಮಾಡಿದ್ದಾರೆ. ನನ್ನದ್ಯಾವ ಲೆಕ್ಕ? ನಿರಂತರವಾಗಿ ದುಡಿಯುತ್ತೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ.

ಪ್ರಶ್ನೆ: ಇಷ್ಟೆಲ್ಲಾ ಆಸ್ತಿ, ಐಷಾರಾಮಿ ಸೌಲಭ್ಯಗಳು, ಶ್ರೀಮಂತಿಕೆಯ ಮೂಲ ಯಾವುದು?
ಶ್ರೀರಾಮುಲು: ನಾನು ವ್ಯವಹಾರಸ್ಥ ಅಲ್ಲ. ನನ್ನ ಹೆಸರಲ್ಲಿ ಯಾವುದೇ ವ್ಯವಹಾರಗಳು ಇಲ್ಲ. ನಾನು ಯಾವುದೇ ವ್ಯವಹಾರಗಳನ್ನು ನಡೆಸುತ್ತಿಲ್ಲ. ನಾನು ಅಪ್ಪಟ ಜನಸೇವಕ. ಜನರಿಗಾಗಿ ಬದುಕು ನಡೆಸುತ್ತಿರುದ್ದೇನೆ. ನನ್ನ ಅಪ್ಪನ ಅಮ್ಮ (ಅಜ್ಜಿ) ಅವರ ಶ್ರೀಮಂತಿಕೆ, ಅನೇಕ ಮಿತ್ರರ ಕೊಡೆಗೆಯೇ ಇದಕ್ಕೆಲ್ಲಾ ಕಾರಣ. ಅನೇಕರು ನನ್ನನ್ನು ಬೆಳೆಸುತ್ತಿದ್ದಾರೆ. ನನ್ನದು ಏನಿದ್ದರೂ ಖಾಲಿ ಜೇಬು.

ಪ್ರಶ್ನೆ: ಆಪ್ತಮಿತ್ರ ಜಿ. ಜನಾರ್ದನರೆಡ್ಡಿ ಜೈಲಿಗೆ ಹೋಗಿದ್ದಾರೆ? ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ?
ಶ್ರೀರಾಮುಲು: ನನ್ನ ಫ್ರೆಂಡ್ ಜನಾರ್ದನ ರೆಡ್ಡಿ ಮಾತ್ರ ಜೈಲಿಗೆ ಹೋಗಿಬಂದಿಲ್ಲ, ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿಲ್ಲ. ಕಾಂಗ್ರೆಸ್ ಆಹ್ವಾನಿಸಿ, ಟಿಕೆಟ್ ನೀಡಿರುವ ಬಿ. ನಾಗೇಂದ್ರ, ಬಿ.ಎಸ್. ಆನಂದಸಿಂಗ್ ಇಬ್ಬರೂ ಜೈಲಿಗೆ ಹೋಗಿ ಬಂದವರು. ನಮ್ಮ ಜೊತೆಯಲ್ಲಿದ್ದು, ಕಾಂಗ್ರೆಸ್ ಸೇರಿ, ಅಲ್ಲಿಂದ ಸ್ಪರ್ಧಿಸಿದ್ದಾರೆ. ಬರೀ ರೆಡ್ಡಿ ಮಾತ್ರವಲ್ಲ. ನೀವು (ಮಾಧ್ಯಮಗಳು) ಬರೀ ರೆಡ್ಡಿಯನ್ನು ಕ್ರಿಮಿನಲ್, ಜೈಲಿಗೆ ಹೋಗಿ ಬಂದವರು ಎನ್ನುತ್ತೀರಿ. ಅವರಿಗಿಂತ ದೊಡ್ಡ ಕ್ರಿಮಿನಲ್ ಬಿ.ನಾಗೇಂದ್ರ. ಕ್ರಿಮಿನಲ್ ಆರೋಪಿ ಬಿ.ಎಸ್. ಆನಂದ್ ಸಿಂಗ್ ಬಗ್ಗೆ ಏನೂ ಹೇಳುತ್ತಿಲ್ಲ. ನೀವೆಲ್ಲಾ ಒನ್ ಸೈಡ್ ಆಗಬಾರದು.

ಪ್ರಶ್ನೆ: ಗಣಿ ವ್ಯವಹಾರದಲ್ಲಿ ನೀವಿದ್ದೀರಾ? ಜಿ. ಜನಾರ್ದನರೆಡ್ಡಿ ಪ್ರಚಾರ ನಿರ್ವಹಿಸುತ್ತಿರುವ ಬಗ್ಗೆ?
ಶ್ರೀರಾಮುಲು: ನಾನು ಈಗಾಗಲೇ ಹೇಳಿದ್ನಲ್ಲಾ? ನಾನು ವ್ಯವಹಾರಸ್ಥ ಅಲ್ಲ, ವ್ಯವಹಾರವನ್ನೂ ಮಾಡುತ್ತಿಲ್ಲ. ನಾನೊಬ್ಬ ಜನಸೇವಕ. ಒಬ್ಬ ಗೆಳೆಯನಾಗಿ ಜಿ. ಜನಾರ್ದನ ರೆಡ್ಡಿ ನನ್ನ ಪರವಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ನಿರ್ವಹಿಸುತ್ತಿದ್ದಾರೆ. ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತ. ಹಿರಿಯ ಕಾರ್ಯಕರ್ತ. ಮಂತ್ರಿ ಆಗಿದ್ದರು. ಬಿಜೆಪಿ ಪರವಾಗಿ ಪ್ರಚಾರ ಮಾಡುವುದರಲ್ಲಿ ತಪ್ಪಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ವಿವಾದ ಏಕೆ?

ಪ್ರಶ್ನೆ: ಬಾದಾಮಿಯಲ್ಲೂ ಜನಾರ್ದನ ರೆಡ್ಡಿ ಪ್ರಚಾರ ಮಾಡುತ್ತಾರಾ? ಎರಡೂ ಕ್ಷೇತ್ರದ ಫಲಿತಾಂಶ ಏನಾಗಬಹುದು?
ಶ್ರೀರಾಮುಲು: ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ. ಅಗತ್ಯವಿದ್ದಲ್ಲಿ ಖಂಡಿತವಾಗಿಯೂ ಬಾದಾಮಿಯಲ್ಲೂ ನನ್ನ ಪರವಾಗಿ, ಬಿಜೆಪಿ ಪರವಾಗಿ ಪ್ರಚಾರ ನಿರ್ವಹಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ. ನಾನು 80 ಕ್ಷೇತ್ರಗಳಲ್ಲಿ ಪ್ರಚಾರ ನಿರ್ವಹಿಸುತ್ತಿದ್ದೇನೆ. ಮೊಳಕಾಲ್ಮೂರು - ಬಾದಾಮಿ ಎರಡರಲ್ಲೂ ನನ್ನ ಗೆಲುವು ಖಚಿತ.












Click it and Unblock the Notifications