ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು
ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು
Recommended Video

ಉಪಚುನಾವಣೆಯ ಪ್ರಚಾರದ ವೇಳೆ ತಾರಕಕ್ಕೇರಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ವಾಕ್ಸಮರ, ರಾಮನಗರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿದ ನಂತರ ಇನ್ನೊಂದು ಮಜಲಿಗೆ ಸಾಗುತ್ತಿದೆ.
ಅಧಿಕಾರದ ವ್ಯಾಮೋಹ, ದುಡ್ಡಿನ ಮದ ಮತ್ತು ಸೋಲುವ ಭಯದಿಂದ ರಾಮನಗರದಲ್ಲಿ ನಮ್ಮ ಅಭ್ಯರ್ಥಿಯನ್ನು ಹಿಂದಕ್ಕೆ ಸರಿಯುವಂತೆ ಕಾಂಗ್ರೆಸ್ಸಿನವರು ಮಾಡಿದ್ದಾರೆ. ಮತದಾರ ಇದನ್ನೆಲ್ಲಾ ಗಮನಿಸುತ್ತಿದ್ದಾರೆಂದು ಬಿಜೆಪಿ ಮುಖಂಡ ಶ್ರೀರಾಮುಲು, ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ನನ್ನನ್ನು ಮಾನ್ಯ ಮಾಜಿ ಮುಖ್ಯಮಂತ್ರಿಗಳು ' ಮಿಸ್ಟರ್ ಚಾರ್ಸೋ ಬೀಸ್' ಎಂದು ಲೇವಡಿ ಮಾಡಿದ್ದಾರೆ. ಆದರೆ, ಈ ಭಾಗದ ಜನ ನನ್ನನ್ನು '108 ಅಂಬುಲೆನ್ಸ್ ಶ್ರೀರಾಮುಲು' ಎಂದು ಆಶೀರ್ವದಿಸುತ್ತಾರೆ ಎಂದು ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. (108 ಅಂಬುಲೆನ್ಸ್ ಸೇವೆ, ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ ಆರಂಭವಾಗಿತ್ತು. ಶ್ರೀರಾಮುಲು ಆಗ ಆರೋಗ್ಯ ಸಚಿವರಾಗಿದ್ದರು. ನವೆಂಬರ್ 1, 2008ರಂದು ಇದು ಆರಂಭವಾಗಿತ್ತು).
ಈ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತರಲ್ಲಿ ಡಿ ಕೆ ಶಿವಕುಮಾರ್ ಕೂಡಾ ಒಬ್ಬರು, ಆದರೆ ಅವರಲ್ಲಿರುವ ಹಣಬಲವನ್ನು ಅವರಲ್ಲೇ ಇಟ್ಟುಕೊಳ್ಳಲಿ. ಬಳ್ಳಾರಿಯ ಜನ ಹಣಕ್ಕೆ ಮಾರಿಕೊಳ್ಳುವವರಲ್ಲ ಎಂದು ಡಿಕೆಶಿಗೂ, ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡುವ ಮುನ್ನ ಶ್ರೀರಾಮುಲು ಮತದಾರರ ಅನುಮತಿಯನ್ನು ಪಡೆದಿದ್ರಾ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ನಮ್ಮನ್ನು ಪ್ರಶ್ನಿಸುವ ಮೊದಲು ಮಂಡ್ಯದಲ್ಲಿ ಪುಟ್ಟರಾಜು ಮತ್ತು ನಿಮ್ಮದೇ ಪಕ್ಷದ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿ, ಆಮೇಲೆ ನನ್ನ ಬಳಿ ಬನ್ನಿ ಎಂದು ಶ್ರೀರಾಮುಲು, ಸಿದ್ದರಾಮಯ್ಯನವರನ್ನು ಲೇವಡಿ ಮಾಡಿದ್ದಾರೆ. ಸಿದ್ದು Vs ರಾಮುಲು ಮತ್ತೆ ವಾಕ್ಸಮರ, ಕೆಲವೊಂದು ಹೈಲೆಟ್ಸ್, ಮುಂದೆ ಓದಿ..

ರೆಡ್ಡಿ ಸೋದರರಿಗೆ ತಮ್ಮ ಆಟವಾಡಲು ಒಂದು ಕೈಗೊಂಬೆ ಬೇಕು
ಶ್ರೀರಾಮುಲು ಎಂಬ ವ್ಯಕ್ತಿ ಹುಂಬ ಮನುಷ್ಯ. ರೆಡ್ಡಿ ಸಹೋದರರಿಗೆ ಆಟವಾಡಲು ಒಂದು ಕೈಗೊಂಬೆ ಬೇಕು. ರೆಡ್ಡಿ ಸಹೋದರರು ಶ್ರೀರಾಮುಲು ಆಡಿಸಿದಂತೆ ಆಡುತ್ತಿರುವ ಒಂದು ಗೊಂಬೆ. ಅವರು ಲೂಟಿ ಮಾಡಿದ ಹಣದಲ್ಲಿ ಒಂದಷ್ಟು ದುಡ್ಡು ಎಸೆಯುತ್ತಾರೆ, ಈ ಶ್ರೀರಾಮುಲು ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾರೆ. ಆತ ಮಿಸ್ಟರ್ 420 ವ್ಯಕ್ತಿ ಎಂದು ಬಳ್ಳಾರಿ ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ, ರಾಮುಲು ವಿರುದ್ದ ಕಿಡಿಕಾರಿದ್ದರು.

ಬಳ್ಳಾರಿಯಲ್ಲಿ ಹುಟ್ಟುವುದೊಂದೇ ಇಲ್ಲಿ ಪ್ರತಿನಿಧಿಸಲು ಬೇಕಿರುವ ಅರ್ಹತೆಯೋ?
ಉಗ್ರಪ್ಪನವರು ಬಳ್ಳಾರಿಯವರಲ್ಲ ಎಂಬುದು ಶ್ರೀರಾಮುಲು ಮತ್ತು ಶಾಂತರವರ ತಕರಾರು. ಶ್ರೀರಾಮುಲು ಮತ್ತು ಶಾಂತಾರವರೇ, ನೀವಿಬ್ಬರೂ ಬಳ್ಳಾರಿಯಲ್ಲೇ ಹುಟ್ಟಿದವರಲ್ಲವೇ ನಿಮ್ಮಿಂದ ಬಳ್ಳಾರಿಗೇನು ಉಪಯೋಗವಾಗಿದೆ? ನಿಮ್ಮ ಪ್ರಕಾರ ಬಳ್ಳಾರಿಯಲ್ಲಿ ಹುಟ್ಟುವುದೊಂದೇ ಇಲ್ಲಿ ಪ್ರತಿನಿಧಿಸಲು ಬೇಕಿರುವ ಅರ್ಹತೆಯೋ? ಮೊದಲು ಕನ್ನಡ ಮಾತನಾಡಲು ಸರಿಯಾಗಿ ಕಲಿಯಿರಿ - ಸಿದ್ದರಾಮಯ್ಯ

ಕನ್ನಡದ ಸ್ವರ ಉಚ್ಚಾರಣೆಯಲ್ಲಿ ಬದಲಾವಣೆಯಾಗುತ್ತದೆ
ಸಿದ್ದರಾಮಯ್ಯನವರ ಟೀಕೆಗೆ ಉತ್ತರಿಸುತ್ತಾ ಶ್ರೀರಾಮುಲು, ಒಂದೊಂದು ಭಾಗದಲ್ಲಿ ಕನ್ನಡದ ಸ್ವರ ಉಚ್ಚಾರಣೆಯಲ್ಲಿ ಬದಲಾವಣೆಯಾಗುತ್ತದೆ. ನಾನು ಮಾತನಾಡುವ ಕನ್ನಡವನ್ನು ಟೀಕಿಸಿ ಸಿದ್ದರಾಮಯ್ಯನವರು ಈ ಸೊಗಡಿಗೆ ಅವಮಾನ ಮಾಡುತ್ತಿದ್ದಾರೆ. ವಾಲ್ಮೀಕಿ ಜಯಂತಿಯಂದು ದೇವೇಗೌಡರು ಭಾಗವಹಿಸಲಿಲ್ಲ, ಕಾಂಗ್ರೆಸ್ಸಿನ ಯಾವ ಮುಖಂಡರೂ ಭಾಗವಹಿಸಲಿಲ್ಲ. ಆ ಮೂಲಕ, ಆ ಜನಾಂಗಕ್ಕೆ ಕಾಂಗ್ರೆಸ್ ಅವಮಾನ ಮಾಡಿದೆ - ಶ್ರೀರಾಮುಲು

ಅಧಿಕಾರಕ್ಕಾಗಿ ಹಾತೊರೆಯುವುದು ಕಾಂಗ್ರೆಸ್ಸಿನ ಜಾಯಮಾನ
ಅಧಿಕಾರಕ್ಕಾಗಿ ಹಾತೊರೆಯುವುದು ಕಾಂಗ್ರೆಸ್ಸಿನ ಜಾಯಮಾನ, ಹಾಗಾಗಿ ಅಪ್ಪಮಕ್ಕಳು ಎಷ್ಟೇ ಕಷ್ಟ ಕೊಟ್ಟರೂ ಅದನ್ನು ಸಹಿಸಿಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದರೂ, ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ರಾಮುಲು ವರ್ಸಸ್ ಡಿಕೆಶಿ ಯುದ್ದ ಅಂತಾರೆ. ಆದರೆ, ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಯುದ್ದ ಎಂದು ಶ್ರೀರಾಮುಲು ಹೇಳಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಅವಧಿಯಲ್ಲಿ ಜಾತಿಯನ್ನು ಒಡೆದರು
ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಅವಧಿಯಲ್ಲಿ ಜಾತಿಯನ್ನು ಒಡೆದರು, ಅವರದ್ದೇ ಪಕ್ಷದವರು ಅದಕ್ಕೆ ವಿಷಾದ ವ್ಯಕ್ತಪಡಿಸಿದರು. ಎಲ್ಲಾ ಜಾತಿ/ಧರ್ಮಗಳನ್ನು ಒಡೆದು ಸಿದ್ದರಾಮಯ್ಯ ನಡೆಸಿದ ರಾಜಕಾರಣ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಟೀಕಿಸುವ ಸಿದ್ದರಾಮಯ್ಯನವರು ಮೊದಲು ದೇವೇಗೌಡ ರಿಪಬ್ಲಿಕ್ ಫ್ಯಾಮಿಲಿ ಬಗ್ಗೆ ಮಾತನಾಡಲಿ - ಶ್ರೀರಾಮುಲು.












Click it and Unblock the Notifications