ಸರ್ಕಾರ ಹೇಳಿದ ಹಾಗೆ ಕುಣಿದಿದ್ದು ಆಗಿದೆ, ಇನ್ನಾಗಲ್ಲ; ಡಿಕೆಶಿ
ಬಳ್ಳಾರಿ, ಆಗಸ್ಟ್ 06: ಮಾರ್ಚ್ ತಿಂಗಳಿನಿಂದಲೂ ದೇಶ ಮತ್ತು ರಾಜ್ಯ ಬಹಳ ನೋವಿನಿಂದ ಬಳಲುತ್ತಿದೆ. ಕೇಂದ್ರ ಸರ್ಕಾರ ಗಂಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳಿದ ಹಾಗೆ ನಾವು ಕುಣಿದಿದ್ದು ಆಗಿದೆ. ಈಗ ಸರ್ಕಾರದ ಬ್ರೇಕ್ ಫೇಲ್ ಆಗಿದೆ ಎಂದು ವಾಗ್ದಾಳಿ ನಡೆಸಿದರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
ಬಳ್ಳಾರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಇದುವರೆಗೂ ಸರ್ಕಾರ ಹೇಳಿದ ಹಾಗೆ ನಾವು ಕುಣಿದಿದ್ದು ಆಗಿದೆ. ಆದರೆ ಇನ್ನು ಮುಂದೆ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಲ್ಲಿ ಲೂಟಿ ಹೊಡೆಯಲು ಬಿಡುವುದಿಲ್ಲ. ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಸೋಂಕಿತ ಗೋಳಿನ ಕಥೆಯನ್ನು ಸಾಕಷ್ಟು ಸಿನಿಮಾ ತೆಗೆಯಬಹುದು, ಅಷ್ಟು ಜನ ನರಳುತಿದ್ದಾರೆ" ಎಂದು ಆರೋಪಿಸಿದರು.
"ಒಬ್ಬ ಮಾಜಿ ಮಂತ್ರಿ ಕೊರೊನಾ ಆಸ್ಪತ್ರೆ ಬಿಲ್ 17 ಲಕ್ಷ ರೂಪಾಯಿ ಆಗಿದೆ. ಅವರ ಹೆಸರು ನಾ ಬಹಿರಂಗಪಡಿಸಲ್ಲ. ಹೀಗಿರುವಾಗ ಬಡವರ ಪರಿಸ್ಥಿತಿ ಹೇಗೆ? ಸರ್ಕಾರ ಕೊರೊನಾ ವಿಚಾರದಲ್ಲಿ ಸಾವಿರಾರು ಕೋಟಿ ರೂ. ಲೂಟಿ ಹೊಡೆದಿದೆ. ಕೊರೊನಾ ಇಲ್ಲದಿದ್ದವರನ್ನೂ ಕೋವಿಡ್ ಕೇರ್ ಗೆ ಕರೆತಂದು ಲಕ್ಷಾಂತರ ಹಣ ಲೂಟಿ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯ ಹತ್ತಿರ ರಾಜಿ ಮಾಡಿಕೊಂಡು ಅವರ ಬಳಿ ಪಾಲು ಪಡೆಯುತ್ತಿದ್ದಾರೆ. ಹೆಣದ ಮೇಲೂ ಹಣ ಲೂಟಿ ಹೊಡೆಯುತ್ತಿದ್ದಾರೆ" ಎಂದು ಕಿಡಿಕಾರಿದರು.

"ಈಶ್ವರಪ್ಪಾ ನಿನ್ನೆ ಕೋಮು ಸೌಹಾರ್ದ ಕದಡುವ ರೀತಿ ಮಾತನಾಡಿದ್ದಾರೆ. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು. ಪ್ರಧಾನ ಮಂತ್ರಿ ಅವರೇ ಕೂಡಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ಯಾರೋ ದಾರಿ ಹೋಕ ಮಾತನಾಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತಿರಿ . ಆದರೆ ಈಶ್ವರಪ್ಪ ಅವರ ಬಂಧನ ಯಾಕಿಲ್ಲಾ? ಸರ್ಕಾರ ತಾನಾಗಿಯೇ ಮುಂದಾಗಿ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಭೀಮಾ ನಾಯಕ್ , ಜೆ ಎಸ್ ಗಣೇಶ ಭಾಗಿಯಾಗಿದ್ದರು.












Click it and Unblock the Notifications