ತೆರೆಮರೆಯ ಚಾಣಾಕ್ಷನಿಗೆ ಸಿಕ್ತು ಹೊಸ ನೆಲೆ
ಬಳ್ಳಾರಿ, ಫೆಬ್ರವರಿ 13: ಕಾಂಗ್ರೆಸ್ಸಿನ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆಯುತ್ತಲೇ ರಾಜ್ಯ ರಾಜಕೀಯದಲ್ಲಿ ತೆರೆಮರೆಯ ಚಾಣಾಕ್ಷ ಎಂದೇ ಗುರುತಿಸಿಕೊಂಡಿರುವ ಗಣಿ ಉದ್ಯಮಿ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನರೆಡ್ಡಿ ಅವರಿಗೆ ಹೊಸ ನೆಲೆ ಸಿಕ್ಕಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸಲು ಮಹತ್ತರ ನಿರ್ಧಾರ ಕೈಗೊಂಡು, ರಾಂಪುರದ ತೋಟದ ಮನೆಗೆ ಶೀಘ್ರದಲ್ಲೇ ಶಿಫ್ಟ್ ಆಗಲಿದ್ದಾರೆ. ಇನ್ನು ಮುಂದೆ ರೆಡ್ಡಿಗಳ ರಾಜಕೀಯ ಶಕ್ತಿ ಕೇಂದ್ರ ರಾಂಪುರದ ತೋಟದ ಮನೆ ಆಗಲಿದೆ.
ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಗಣಿಧಣಿ, ಜಿ. ಜನಾರ್ಧನರೆಡ್ಡಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮೇಲೆ ರಾಜಕೀಯ ಪ್ರಾಬಲ್ಯ ಸಾಧಿಸಲಿಕ್ಕಾಗಿ ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ವಾಸ್ತವ್ಯ ಹೂಡಲು ತೋಟದ ಮನೆಯನ್ನು ಖರೀದಿ ಮಾಡಿದ್ದಾರೆ.

ರೆಡ್ಡಿ ಆಪ್ತರ ಮೂಲದ ಪ್ರಕಾರ, ಬಳ್ಳಾರಿ ನಗರದ ಗಡಿ ಭಾಗಕ್ಕೆ ಕೇವಲ 20 ಕಿ. ಮೀ ದೂರದಲ್ಲಿ ಇರುವ ರಾಂಪುರದಲ್ಲಿ ನೆಲೆಸಲು ಬಳ್ಳಾರಿ ಗ್ರಾಮೀಣ ಶಾಸಕರ ಕುಟುಂಬದ ಸದಸ್ಯರು ಬೆಂಬಲ ನೀಡಿದ್ದಾರೆ.
ಅಲ್ಲದೇ, ತೋಟದ ಮನೆಯನ್ನು ಖರೀದಿ ಮಾಡಿ, ಅಲ್ಲಿಯೇ ಇದ್ದುಕೊಂಡು ಚುನಾವಣೆಯ ತಂತ್ರಗಳನ್ನ, ಪ್ರತಿತಂತ್ರಗಳನ್ನು ಹೆಣೆಯಲು ನೆರವಾಗಿದ್ದಾರೆ ಎಂದು ಹೇಳಲಾಗಿದೆ.
ತೋಟದ ಮನೆಯನ್ನು ವಾಸ್ತುಪ್ರಕಾರ ಸರಿ ಪಡಿಸಲಾಗುತ್ತಿದೆ. ರೆಡ್ಡಿಯ ಮನಸ್ಥಿತಿಗೆ ಹೊಂದಿಕೊಳ್ಳುವಂತೆ ಇಂಟರ್ನೆಟ್, ಡಿಜಿಟಲ್ ಟಿವಿ, ಸಿಸಿಟಿವಿ ವ್ಯವಸ್ಥೆ, ಆಧುನಿಕ ವ್ಯವಸ್ಥೆಯ ಮೂಲಭೂತ ಸೌಲಭ್ಯಗಳನ್ನು ಅಳವಡಿಸುವ ಕಾರ್ಯದ ಕುರಿತು ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ. ಶಿವರಾತ್ರಿ ಅಮಾವಾಸ್ಯೆಯ ನಂತರ ಕಾಮಗಾರಿಗಳು ಪ್ರಾರಂಭ ಆಗಲಿವೆ ಎನ್ನಲಾಗಿದೆ.












Click it and Unblock the Notifications