ಸಂಡೂರು : ತುಕಾರಾಂ ಹ್ಯಾಟ್ರಿಕ್ ತಪ್ಪಿಸಲು ಜೆಡಿಎಸ್- ಬಿಜೆಪಿ ಯತ್ನ
ಬಳ್ಳಾರಿ, ಏಪ್ರಿಲ್ 10: ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಹೆಸರುಗಳು ಘೋಷಣೆ ಆಗಿದ್ದು, ಮೇಲ್ನೋಟಕ್ಕೆ ತ್ರಿಕೋನಸ್ಪರ್ಧೆ ಇದೆ. ಆದರೆ, ಹಾಲಿ ಕಾಂಗ್ರೆಸ್ ಶಾಸಕ ಇ. ತುಕಾರಾಂ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಇ. ತುಕಾರಾಂ, ಬಿಜೆಪಿ ಡಿ. ರಾಘವೇಂದ್ರ ಮತ್ತು ಜೆಡಿಎಸ್ ವಸಂತಕುಮಾರ್ ಸ್ಪರ್ಧಿಸುತ್ತಿದ್ದಾರೆ. ಲಾಡ್ ಮತ್ತು ಘೋರ್ಪಡೆ ಮನೆತನದ ರಾಜಕೀಯ ಒಳಪಟ್ಟುಗಳನ್ನು ಅತೀ ಹತ್ತಿರದಿಂದ ಕಂಡಿರುವ ಇ. ತುಕಾರಾಂ ಈ ಎರಡು ಕುಟುಂಬಗಳ ಬೆಂಬಲದಿಂದಲೇ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.

ಘೋರ್ಪಡೆ ಕುಟುಂಬದ ಕಾರ್ತಿಕೇಯ ಅವರು ಬಿಜೆಪಿ ಸೇರಿದ್ದರೂ, ಸಮರ್ಥ ಎದುರಾಳಿ ಇಲ್ಲದ ಕಾರಣ ಧರ್ಮಾಪುರ ರಾಘವೇಂದ್ರ ಅವರಿಗೆ ಟಿಕೇಟ್ ಘೋಷಣೆ ಆಗಿದೆ. ಜೆಡಿಎಸ್, ವಸಂತ ಕುಮಾರ್ ಅವರನ್ನು ಕಣಕ್ಕಿಳಿಸಲಿದೆ. ಒಂದರ್ಥದಲ್ಲಿ ಕಾಂಗ್ರೆಸ್ - ಬಿಜೆಪಿ ಜಿದ್ದಾಜಿದ್ದಿ ಏರ್ಪಡಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಕ್ಷೇತ್ರದಲ್ಲಿ ಇ. ತುಕಾರಾಂ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳುತ್ತಿವೆ. ಆದರೆ, ಅನುಭವಿ, ಎದುರಾಳಿಗಳು ಇಲ್ಲದ ಕಾರಣ ಮತದಾರರು ಅನಿವಾರ್ಯವಾಗಿ ಇವರನ್ನೇ ಆಯ್ಕೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ನಿಂದ ಸಂಡೂರಿನ 2ನೇ ವಾರ್ಡ್ನಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ಧರ್ಮಾಪುರ ರಾಘವೇಂದ್ರ ರಾಜೀನಾಮೆ ನೀಡಿ, ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಡಿ. ರಾಘವೇಂದ್ರ ಅವರು ತಂದೆ ಡಿ. ಕೃಷ್ಣಪ್ಪ ಅವರ ರಾಜಕೀಯ ಸೇವೆ, ವಾಲ್ಮೀಕಿ ಸಮಾಜಕ್ಕೆ ದುಡಿದ ಅನುಭವ, ಪರಿಚಯದ ಆಧಾರದ ಮೇಲೆ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ನ ಇ. ತುಕಾರಾಂ ಅವರಿಗೆ ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳು ಪ್ರಭಲವಾದ ಪೈಪೋಟಿ ನೀಡಲಾರರು ಎನ್ನುವುದು ಮತದಾರರ ಲೆಕ್ಕಾಚಾರ. ಯಾವುದಕ್ಕೂ ಚುನಾವಣಾ ಬಿಸಿ ಜಿಲ್ಲೆಯಲ್ಲಿ ಇದೀಗ ಪ್ರಾರಂಭವಾಗಿದ್ದು, ಮುಂದಿನ ದಿನಗಳ ಬಗ್ಗೆ ಕಾದು ನೋಡಬೇಕಿದೆ.












Click it and Unblock the Notifications