ರಾಮ ಮಂದಿರ ಸ್ವಾಭಿಮಾನದ ಸಂಕೇತ: ಸಚಿವ ಆನಂದ್ ಸಿಂಗ್
ಬಳ್ಳಾರಿ, ಜನವರಿ 16: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಸರ್ವರೂ ಸಮರ್ಪಣಾ ಭಾವದಿಂದ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.
ಶನಿವಾರ ಬೆಳಿಗ್ಗೆಯಿಂದಲೇ ಸಚಿವ ಆನಂದ್ ಸಿಂಗ್ ಸೇರಿದಂತೆ ಅವರ ಸಂಪೂರ್ಣ ಕುಟುಂಬ ಸದಸ್ಯರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಜಾಥಾದಲ್ಲಿ ಪಾಲ್ಗೊಂಡು, ನಿಧಿ ಸಂಗ್ರಹಣೆ ಮಾಡಿದರು. ಅಭಿಯಾನದಲ್ಲಿ ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್, ಮಗಳು ವೈಷ್ಣವಿ ಸಿಂಗ್ ಹಾಗೂ ಯಶಸ್ವಿನಿ ಸಿಂಗ್ ಕೂಡ ಭಾಗಿಯಾಗಿದ್ದರು.
ಬಳ್ಳಾರಿ ನಗರದ ವಿವಿಧ ಕಡೆ ತೆರಳಿ ಸ್ವತಃ ನಿಧಿ ಸಂಗ್ರಹಿಸಿದ ಸಚಿವರು, ದೇಣಿಗೆ ನೀಡಿದವರಿಗೆ ರಶೀದಿ ವಿತರಿಸಿ, ಕೃತಜ್ಞತೆ ಸಲ್ಲಿಸಿದರು. ನಗರದೆಲ್ಲೆಡೆ ದೇಣಿಗೆ ಸಂಗ್ರಹಿಸಿದ ಬಳಿಕ ಮಾತನಾಡಿದ ಅವರು, ಐತಿಹಾಸಿಕ ರಾಮ ಮಂದಿರ ನಿರ್ಮಾಣವಾಗುತ್ತಿರುವುದರ ಹಿಂದೆ, ನೂರಾರು ವರ್ಷಗಳ ಕನಸು, ಲಕ್ಷಾಂತರ ಜನರ ತ್ಯಾಗ, ಬಲಿದಾನದವಿದೆ ಎಂದರು.

ರಾಮಮಂದಿರ ನಿರ್ಮಾಣಕ್ಕಾಗಿ ಸರ್ವರೂ ತಮ್ಮ ಕೈಲಾದಷ್ಟು ದೇಣಿಗೆ ನೀಡುವ ಮೂಲಕ ಅವರ ಶ್ರಮಕ್ಕೆ ಗೌರವ ವಂದನೆ ಸಲ್ಲಿಸಬೇಕಾಗಿದೆ. ಈ ಐತಿಹಾಸಿಕ ಕ್ಷಣದಲ್ಲಿ ದೇಶದ ಪ್ರತಿಯೊಬ್ಬರೂ ಭಾಗವಹಿಸಬೇಕೆಂಬ ಆಶಾಭಾವನೆ ನಮ್ಮದು. ನಿಧಿ ಸಂಗ್ರಹ ಅಭಿಯಾನ ಸ್ವಾಭಿಮಾನದ ಸಂಕೇತವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಸರ್ವರ ಸಮರ್ಪಣಾ ಭಾವದಿಂದ ನೀಡಿದ ದೇಣಿಗೆಯಿಂದ ಭವ್ಯವಾದ ರಾಮಮಂದಿರ ಎದ್ದೇಳಬೇಕು ಎಂಬುದು ನಮ್ಮ ಆಶಯ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.












Click it and Unblock the Notifications