ಬಳ್ಳಾರಿ : ಭೀಕರ ಅಪಘಾತ ಬೈಕ್ ಸವಾರ ಸಾವು
ಬಳ್ಳಾರಿ, ಜೂ. 18 : ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬೈಕ್ ಮತ್ತು ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಮೃತ ಬೈಕ್ ಸವಾರನನ್ನು ಆಂಧ್ರಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಮೃತವ್ಯಕ್ತಿಯನ್ನು ಆಂಧ್ರಪ್ರದೇಶದ ಕಣೇಕಲ್ಲು ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ವೇಗವಾಗಿ ಬೈಕ್ ಓಡಿಸುತ್ತಿದ್ದ ವೆಂಕಟೇಶ್ ಓವರ್ ಟೇಕ್ ಮಾಡುವಾಗ ಹಿಂದಿನಿಂದ ಬಂದ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿ ಹೊಡೆದ ತಕ್ಷಣ ಬೈಕಿನ ಚಾಲಕ ವೆಂಕಟೇಶ್ ಬಸ್ಸಿನ ಚಕ್ರಕ್ಕೆ ಸಿಲುಕಿದ್ದು, ಅವರ ತಲೆಯ ಮೇಲೆ ಬಸ್ಸಿನ ಚಕ್ರ ಹತ್ತಿದೆ. ಇದರಿಂದಾಗ ತಲೆ ಒಡೆದು, ಮಾಂಸದ ಖಂಡಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆ ಚದುರಿ ಬಿದ್ದಿದ್ದವು. [ಬಳ್ಳಾರಿ : ಸಚಿವರ ಪ್ರತಿಷ್ಠೆಗೆ ಅಧಿಕಾರಿ ಅಮಾನತು?]
ದ್ವಿಚಕ್ರ ಚಕ್ರವಾಹನದಲ್ಲಿದ್ದ ಕಣೇಕಲ್ಲು ನಿವಾಸಿ ಮಂಜುನಾಥ್ ಗಾಯಗೊಂಡಿದ್ದು ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಳ್ಳಾರಿ ಸಂಚಾರಿ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓವರ್ ಟೇಕ್ ಮಾಡಿದ್ದೇ ಕಾರಣ : ಅಪಘಾತದ ಕುರಿತು ಮಾಹಿತಿ ನೀಡಿರುವ ಪೊಲೀಸರು ಬೈಕ್ ಓಡಿಸುತ್ತಿದ್ದ ವೆಂಕಟೇಶ್ ಓವರ್ ಟೇಕ್ ಮಾಡಲು ಹೋಗಿದ್ದೆ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ. ಓವರ್ ಟೇಕ್ ಮಾಡುವ ಭರದಲ್ಲಿ ಹಿಂದೆ ಬರುತ್ತಿದ್ದ ಬಸ್ಸನ್ನು ಅವರು ಗಮನಿಸಲಿಲ್ಲ. ವೇಗವಾಗಿ ಬರುತ್ತಿದ್ದ ಬಸ್ ಈ ಸಮಯದಲ್ಲಿ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ. ಬಸ್ಸಿನ ಚಾಲಕ ಪರಾರಿಯಾಗಿದ್ದು, ಅವನಿಗಾಗಿ ಹುಡುಕಾಟ ಮುಂದುವರೆದಿದೆ.