ಟಿಕ್ ಟಾಕ್ ನಲ್ಲಿ ತಾಯಿ ಚಿಕಿತ್ಸೆಗೆ ಗೋಗರೆದಿದ್ದ ಬಳ್ಳಾರಿ ಯುವತಿಗೆ ಸಿಕ್ಕಿತು ಸಹಾಯ
ಬಳ್ಳಾರಿ, ಏಪ್ರಿಲ್ 14: ಲಾಕ್ ಡೌನ್ ನಿಂದಾಗಿ ಬಹುತೇಕ ಬಡ ಕುಟುಂಬಗಳು ದಿಕ್ಕು ಕಾಣದಂತಾಗಿವೆ. ಯಾವುದಕ್ಕೂ ಹಣವಿಲ್ಲದೇ ಪರದಾಡುವಂತಾಗಿದೆ. ಹೀಗೆ ತನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗದೆ ದಯನೀಯ ಸ್ಥಿತಿಯಲ್ಲಿರುವ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾಳೆ.
ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಪಟ್ಟಣದ ಜೋತಿ ಕಟ್ಟಿಮನಿ ಎಂಬ ಯುವತಿಯ ತಾಯಿ ಪಾರ್ಶ್ವವಾಯುವಿನಿಂದಾಗಿ ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಅಲ್ಲದೇ 15 ದಿನಗಳ ಹಿಂದೆ ಈಕೆ ತಂದೆಯೂ ಅನಾರೋಗ್ಯದಿಂದ ಸಾವಿಗೀಡಾದ್ದರು.
ಯುವತಿಯ ಟಿಕ್ಟಾಕ್ ವಿಡಿಯೋ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ
ಇಂಥ ಪರಿಸ್ಥಿತಿಯಲ್ಲಿ ತನ್ನ ತಾಯಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಸಹಾಯಕತೆ ತೋಡಿಕೊಂಡಿದ್ದಳು. ಯುವತಿಯ ಅಸಹಾಯಕತೆಯ ವಿಡಿಯೋ ಗಮನಿಸಿದ ಸ್ಥಳೀಯ ಶಾಸಕ ಭೀಮಾ ನಾಯ್ಕ ಕೂಡಲೇ ತಹಶೀಲ್ದಾರ್ ಆಶಪ್ಪ ಪೂಜಾರಿಗೆ ಯುವತಿಯ ಮನೆಗೆ ಭೇಟಿ ನೀಡುವಂತೆ ಆದೇಶ ಮಾಡಿದ್ದಾರೆ.
ಶಾಸಕರ ಮಾತಿನಂತೆ ತಹಶೀಲ್ದಾರರು ಯುವತಿಯ ಸಹಾಯಕ್ಕೆ ಬಂದಿದ್ದು, ಆಕೆಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಒಂದು ತಿಂಗಳಿಗೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನೂ ಆಕೆಗೆ ನೀಡಲಾಗಿದೆ.