ವೇದಾವತಿ ನದಿ ದಡದಲ್ಲಿ ಮಲಗಿದ ಶ್ರೀರಾಮುಲು: ಸೇತುವೆ ಕಾಮಗಾರಿ ಚುರುಕು
ಬಳ್ಳಾರಿ, ನವೆಂಬರ್ 2: ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ (ಮೇಲು ಸೇತುವೆಯ) ಎಲ್ಎಲ್ಸಿ ಕಾಲುವೆಯ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ನಿನ್ನೆ(ನವೆಂಬರ್1) ರಂದು ರಾತ್ರಿ ಕಾಮಗಾರಿ ಸ್ಥಳದಲ್ಲಿಯೇ ವಾಸ್ತವ್ಯ ಹೂಡಿದರು.
ಬಳ್ಳಾರಿ ತಾಲೂಕಿನ ಬಿ.ಡಿ.ಹಳ್ಳಿ ಬಳಿಯ ಎಲ್ಎಲ್ಸಿ ಕಾಲುವೆ ಇದಾಗಿದ್ದು, ನದಿಗೆ ಅಡ್ಡಲಾಗಿ ಮೇಲು ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆಯ ಪಿಲ್ಲರ್ ದುರಸ್ತಿ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಬಂದ್ ಮಾಡಲಾಗಿದೆ. ಇದರಿಂದ ಕಾಲುವೆ ಮೂಲಕ ತಮ್ಮ ಜಮೀನುಗಳಿಗೆ ನೀರು ಪಡೆಯುವ ರೈತರು ತಮ್ಮ ಲಕ್ಷಾಂತರ ಎಕರೆ ಬೆಳೆ ಹಾನಿಗೀಡಾಗುವ ಭೀತಿಯಲ್ಲಿದ್ದಾರೆ.
ಹೀಗಾಗಿ ಈ ಕಾಲುವೆ ರಿಪೇರಿ ಬಹುಬೇಗ ನಡೆಯಬೇಕು, ಕಾಮಗಾರಿ ಪೂರ್ಣಗೊಂಡ ನಂತರವೇ ಸ್ಥಳದಿಂದ ನಾನು ತೆರಳುವುದು ಅಲ್ಲಿವರೆಗೆ ಇಲ್ಲಿಯೇ ಇರುತ್ತೇನೆ ಎಂದು ನಿನ್ನೆ(ನವೆಂಬರ್ 1) ಬೆಳಗ್ಗೆಯಿಂದಲೂ ಸಚಿವ ಶ್ರೀರಾಮುಲು ಕಾಲುವೆಯ ದುರಸ್ತಿ ಕಾಮಗಾರಿ ನಡೆಯುತ್ತಿರುವ ಮೊಕ್ಕಾಂ ಹೂಡಿದ್ದಾರೆ.

ಸಚಿವರ ಬಳಿ ಸಂಕಷ್ಟ ತೋಡಿಕೊಂಡ ರೈತರು
ಕೆಲ ದಿನಗಳ ಹಿಂದೆ ಈ ಭಾಗದ 20 ಗ್ರಾಮಗಳಿಗೂ ಹೆಚ್ಚು ಕಡೆ ನೀರು ಸ್ಥಗಿತಗೊಂಡಿರುವ ಕಾರಣ ಆತಂಕಗೊಂಡಿದ್ದ ರೈತರು ಸಚಿವ ಶ್ರೀರಾಮುಲು ಅವರ ಬಳಿ ಸಮಸ್ಯೆ ತೋಡಿಕೊಂಡಿದ್ದರು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಕುಡಿಯುವ ಹಾಗೂ ಬೆಳೆಗಳಿಗೆ ನೀರು ಅಗತ್ಯವಾಗಿರುವುದರಿಂದ ಕಾಮಗಾರಿಯನ್ನು ಕಾಲಮಿತಿಯೊಳಗೆ ಮುಗಿಸಿ ರೈತರ ಬೆಳವಣಿಗೆಗೆ ತಕ್ಷಣವೇ ನೀರು ಹರಿಸಬೇಕು. ವಿವಿಧ ಕಾರಣಗಳನ್ನು ನೀಡಿ ಕಾಮಗಾರಿ ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ನೀರು ಹೋಗುವವರೆಗೂ ಸ್ಥಳ ಬಿಟ್ಟು ಕದಲಲ್ಲ
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಶ್ರೀರಾಮುಲು, "ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತವು ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರವಾಗಿದೆ. ಇಲ್ಲಿನ ಪ್ರತಿಯೊಬ್ಬರ ಜೊತೆ ನನಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಅವರ ಪ್ರತಿಯೊಂದು ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಈ ಭಾಗದ ರೈತರು ನೀರಿಗಾಗಿ ಪರಿತಪಿಸುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದು, ಕಾಲುವೆಯಿಂದ ರೈತರ ಜಮೀನುಗಳಿಗೆ ನೀರು ಹರಿದು ಹೋಗುವವರೆಗೂ ಸ್ಥಳವನ್ನು ಬಿಟ್ಟು ಕದಲುವುದಿಲ್ಲ. ಇದು ನನ್ನ ಪ್ರತಿಜ್ಞೆಯೂ ಹೌದು. ಅನ್ನದಾತನ ರಕ್ಷಣೆಗೆ ಯಾವುದೇ ತ್ಯಾಗಕ್ಕೂ ಸಿದ್ಧ. ನನ್ನ ರಾಜಕೀಯ ಜನ್ಮ ನೀಡಿದ ಈ ಕ್ಷೇತ್ರದ ಜನರು ಸಂಕಷ್ಟದಲ್ಲಿರುವಾಗ ಸುಮ್ಮನೆ ಕೂರುವುದು ನನ್ನ ಮನಸಿಗೆ ಸರಿ ಎನಿಸಲಿಲ್ಲ. ಇಲ್ಲಿನ ಸಮಸ್ಯೆಯನ್ನು ಇತ್ಯರ್ಥಪಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ," ಎಂದು ಸಚಿವರು ತಿಳಿಸಿದ್ದರು.

ಜಮೀನುಗಳಿಗೆ ನೀರು ಹರಿಸಿಯೇ ತೀರುತ್ತೇನೆ
ನನ್ನನ್ನು ರಾಜಕೀಯವಾಗಿ ಬೆಳೆಸಿದ ನನ್ನ ಕರ್ಮಭೂಮಿಯ ರೈತರು ಸಂಕಷ್ಟದಲ್ಲಿ ಇದ್ದಾಗ ಅವರ ಹೆಗಲಿಗೆ ಹೆಗಲು ಕೊಟ್ಟು, ಜನ, ಜಾನುವಾರು, ಬೆಳೆಗಳಿಗೆ ನೀರು ಹರಿಸಬೇಕಾದರೆ ಕಾಲುವೆಯ ದುರಸ್ತಿ ಕಾಮಗಾರಿ ಸಮರೋಪಾದಿಯಲ್ಲಿ ನಡೆಯಬೇಕು. ಸ್ಥಳದಲ್ಲೇ ನಾನು ಮೊಕ್ಕಾಂ ಹೂಡಿದರೆ ಅಧಿಕಾರಿಗಳು ಚುರುಕಾಗಿ ಕಾಮಗಾರಿಯನ್ನು ಮುಗಿಸಲಿದ್ದಾರೆ. ಬಹುತೇಕ ರೈತರ ಒತ್ತಾಯವು ಇದೇ ಆಗಿದೆ. ಎಷ್ಟೋ ಸಾಧ್ಯವೋ ಅಷ್ಟು ಬೇಗ ರೈತರ ಜಮೀನುಗಳಿಗೆ ನೀರು ಹರಿಸಿಯೇ ತೀರುತ್ತೇನೆ ಎಂದು ಸಚಿವರು ನಿನ್ನೆ ರಾತ್ರಿ ನದಿ ಪಕ್ಕದಲ್ಲೇ ಶ್ರೀರಾಮುಲು ಹಾಸಿಗೆ ಹಾಸಿಕೊಂಡು ಮಲಗಿದರು.

ನೀರಿ ಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ
ಇನ್ನು ಇಂದು(ನವೆಂಬರ್2) ವೇದಾವತಿ ನದಿಯಲ್ಲಿ ಸ್ನಾನ ಮುಗಿಸಿ ರೈತರಿಗಾಗಿ ಪ್ರಾರ್ಥಿಸಿದ ಸಚಿವರು, ಒಣಗಿ ಹೋಗುತ್ತಿರುವ ಗದ್ದೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವತೆಯನ್ನು ತಿಳಿದುಕೊಂಡರು. ಬಳಿಕ ರೈತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಿದರು. ಅಧಿಕಾರಿಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿರುವ ಕಾರಣ ಎಷ್ಟು ಬೇಗವೋ ಅಷ್ಟು ಬೇಗ ಕಾಲುವೆಯಿಂದ ರೈತರ ಜಮೀನುಗಳಿಗೆ ನೀರಿ ಹರಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಆದಷ್ಟು ಬೇಗ ನೀರು ಹರಿದು ಬರಲಿದ್ದು, ಯಾವುದೇ ಕಾರಣಕ್ಕೂ ನನ್ನ ರೈತ ಬಂಧುಗಳು ಆತಂಕ ಪಡಬಾರದು ಎಂದು ಸಚಿವರು ಭರವಸೆ ನೀಡಿದರು.












Click it and Unblock the Notifications