ಬಳ್ಳಾರಿ ರಾಜಕೀಯ ಆನಂದ್ ಸಿಂಗ್ v/s ಶ್ರೀ ರಾಮುಲು
ಬಳ್ಳಾರಿ, ಡಿಸೆಂಬರ್ 23: ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಲು ಒಪ್ಪಿಗೆ ಕೊಟ್ಟಿದೆ. ಈಗ ಬಳ್ಳಾರಿಯ ರಾಜಕೀಯದಲ್ಲಿ ಆನಂದ್ ಸಿಂಗ್ v/s ಶ್ರೀರಾಮುಲು ಎಂಬ ಪ್ರತಿಷ್ಠೆ ಆರಂಭವಾಗಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಆನಂದ್ ಸಿಂಗ್ ಅರಣ್ಯ ಸಚಿವರು. ಬಿ. ಶ್ರೀರಾಮುಲು ಸಮಾಜ ಕಲ್ಯಾಣ ಸಚಿವರು. ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದ ಆನಂದ್ ಸಿಂಗ್ ಗೆದ್ದಿದ್ದಾರೆ.
ಬಿ. ಶ್ರೀರಾಮುಲು ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಕೊನೆಗೆ ಆರೋಗ್ಯ ಖಾತೆ ಅವರ ಕೈ ಸೇರಿತ್ತು. ಈಗ ಆರೋಗ್ಯ ಖಾತೆಯೂ ಕೈ ಬಿಟ್ಟು ಹೋಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನು ನೀಡಲಾಗಿದೆ.

ಆನಂದ್ ಸಿಂಗ್ ಅಂದುಕೊಂಡ ಕೆಲಸ ಮಾಡಿಸುವಲ್ಲಿ ಎತ್ತಿದ ಕೈ ಎಂಬ ಸುದ್ದಿಗಳು ಹಬ್ಬುತ್ತಿವೆ. ಬಳ್ಳಾರಿ ಜಿಲ್ಲೆಯಲ್ಲಿನ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಬಿ. ಶ್ರೀರಾಮುಲು ಉತ್ಸುಕರಾಗಿದ್ದಾರೆ.
ಹೊಸಪೇಟೆಯಲ್ಲಿ ಐಎಸ್ಆರ್ ಕಾರ್ಖಾನೆ ಆರಂಭಿಸಲು ಆನಂದ್ ಸಿಂಗ್ ಯೋಜನೆ ರೂಪಿಸುತ್ತಿದ್ದಾರೆ.
ಆನಂದ್ ಸಿಂಗ್ ಹೊಸಪೇಟೆಯಲ್ಲಿ ಮಾತನಾಡಿ, "ನಾನು ಆಣೆ ಮಾಡಿ ಹೇಳುತ್ತೇನೆ ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ನನ್ನ ಶ್ರಮ ಇಲ್ಲ. ಹೋರಾಟಗಾರರ ಪಾತ್ರ ದೊಡ್ಡದಿದೆ, ನನ್ನದು ಅಳಿಲು ಸೇವೆ ಮಾತ್ರ.
ನಾನು ಬುದ್ಧಿವಂತಿಕೆ ಉಪಯೋಗಿಸಿ, ಯಡಿಯೂರಪ್ಪ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿ, ಘೋಷಣೆ ಮಾಡಿಸುವಲ್ಲಿ ಸಣ್ಣ ಪ್ರಯತ್ನ ಮಾಡಿದೆ" ಎಂದು ಹೇಳಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆ ಹೋರಾಟ ಸಮಿತಿಯವರ ಬಗ್ಗೆ ಪರೋಕ್ಷ ಅಸಮಾಧಾನ ಹೊರ ಹಾಕಿದ ಸಚಿವರು, "ಯಾರೋ ಕೆಲವು ಹೋರಾಟಗಾರರ ದಾರಿ ತಪ್ಪಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯದ ನೀರು ಹಂಚಿಕೆ, 371 ಜೆ ಸೌಲಭ್ಯ ತಪ್ಪುತ್ತದೆ ಅಂತ ಹೇಳುತ್ತಿದ್ದಾರೆ" ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.
"ಈಗ ಹೋರಾಟ ಮಾಡುತ್ತಾ ಇರುವವರೆಲ್ಲರು ನಮ್ಮ ಅಣ್ಣ-ತಮ್ಮಂದಿರು, ನಾವು ಹೋರಾಟ ಮಾಡುವಾಗ ಅವರ ವಿರುದ್ಧ ಮಾತನಾಡಬೇಕಾದರೆ ಎಚ್ಚರದಿಂದ ಮಾತನಾಡಬೇಕು. ಬೇಕಾ ಬಿಟ್ಟಿ ಭಾಷೆ ಬಳಸಬಾರದು" ಎಂದು ಆನಂದ್ ಸಿಂಗ್ ಕರೆ ನೀಡಿದರು.
"ನನ್ನ ವಿರುದ್ಧ ಮಂಗಳ ಮುಖಿಯರನ್ನು ಕರೆಸಿ ಪ್ರತಿಭಟನೆ ಮಾಡಿಸಿದ್ದಾರೆ. ನನಗೆ ಆ ಬಗ್ಗೆ ನೋವಿಲ್ಲ ಈ ಗುಡಿಯಲ್ಲಿರೋ ದುರ್ಗಮ್ಮ ದೇವಿಯ ಮೇಲೆ ಆಣೆ ನನಗೆ ನೋವಿಲ್ಲ. ನಾವು ಸಣ್ಣವರಿದ್ದಾಗ ಅವರನ್ನು ಚುಡಾಯಿಸುತ್ತಿದ್ದೆವು" ಎಂದು ಆನಂದ್ ಸಿಂಗ್ ಹೇಳಿದರು.












Click it and Unblock the Notifications