ಬಳ್ಳಾರಿ ಜಿಲ್ಲಾಧಿಕಾರಿ ನೇಮಕ ಆದೇಶಕ್ಕೆ ತಡೆ: ಕಾಂಗ್ರೆಸ್ ನಾಯಕರ ಶೀತಲ ಸಮರ ಬಹಿರಂಗ
ಬಳ್ಳಾರಿ, ಜುಲೈ 20: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿಜಯನಗರ ಜಿಲ್ಲೆಯ ಡಿಸಿಯಾಗಿ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ವೆಂಕಟೇಶ್ ಟಿ. ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದೇ ಆದೇಶವನ್ನು ರಾಜ್ಯ ಸರ್ಕಾರ ಮಂಗಳವಾರ ತಡೆ ಹಿಡಿದಿದೆ. ಜಿಲ್ಲಾ ಕಾಂಗ್ರೆಸ್ ಒಳಗಿನ ಶೀತಲ ಸಮರ ಈ ಪ್ರಕರಣದಿಂದ ಹೊರಬಿದ್ದಿದೆ.
ವಿಜಯನಗರದ ಜಿಲ್ಲಾಧಿಕಾರಿ ಆಗಿದ್ದ ವೆಂಕಟೇಶ್ ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿಯ ಸ್ಥಾನಕ್ಕೆ ನೇಮಿಸುವಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವಜನ ಸಬಲೀಕರಣ ಸಚಿವ ಬಿ. ನಾಗೇಂದ್ರ ಅವರು ಒಲವು ತೋರಿಸಿದ್ದರು ಎಂದು ಹೇಳಲಾಗುತ್ತಿದೆ.

ನೂತನ ಜಿಲ್ಲಾಧಿಕಾರಿಯ ನೇಮಿಸುವ ವಿಷಯದಲ್ಲಿ ತಮ್ಮ ಅಭಿಪ್ರಾಯ ಪಡೆಯದೇ, ಜಿಲ್ಲಾ ಉಸ್ತುವಾರಿ ಸಚಿವರು ಏಕಾಭಿಪ್ರಾಯದ ಮೇಲೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಸಂಡೂರಿನ ಶಾಸಕ ಈ. ತುಕಾರಾಂ, ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್ ಹಾಗೂ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತುಕಾರಾಂ ನೇತೃತ್ವದಲ್ಲಿ ಶಾಸಕರು ಖುದ್ದು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದಾರೆ. ಶಾಸಕರ ಅಸಮಾಧಾನ ಕೇಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ವೆಂಕಟೇಶ್ ಅವರ ವರ್ಗಾವಣೆ ಆದೇಶ ತಡೆ ಹಿಡಿಯುವಂತೆ ಮೌಖಿಕವಾಗಿ ಆದೇಶಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಆಗಿ ಅಧಿಕಾರ ವಹಿಸಿಕೊಳ್ಳಲು ಬಳ್ಳಾರಿಗೆ ಮಂಗಳವಾರ ಬೆಳಿಗ್ಗೆ ಬಂದಿದ್ದ ವೆಂಕಟೇಶ್ ಅವರು, ಅಧಿಕಾರ ವಹಿಸಿಕೊಳ್ಳದಂತೆ ಮುಖ್ಯ ಕಾರ್ಯದರ್ಶಿ ಅವರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ವೆಂಕಟೇಶ್ ಬೆಂಗಳೂರಿಗೆ ತೆರಳಿದ್ದಾರೆ. ಅತೃಪ್ತರಾಗಿರುವ ಜಿಲ್ಲೆಯ ಶಾಸಕರನ್ನು ವೆಂಕಟೇಶ್ ಭೇಟಿಯಾಗಿ ಮನವೊಲಿಸಬಹುದು ಎಂದು ಮೂಲಗಳಿಂದ ತಿಳಿದುಬಂದಿದ್ದು, ಈ ಪ್ರಕರಣ ಮುಂದೆ ಏನಾಗಬಹುದು ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ, ಬಳ್ಳಾರಿ ಜಿಲ್ಲಾಧಿಕಾರಿ ಹುದ್ದೆಗೆ ವೆಂಕಟೇಶ್ ಅವರನ್ನು ನೇಮಕ ಮಾಡುವುದೇ ಅಥವಾ ಶಾಸಕರು ಹಾಗೂ ಉಸ್ತುವಾರಿ ಸಚಿವರೆಲ್ಲರಿಗೂ ಒಪ್ಪಿತ ಅಧಿಕಾರಿಯನ್ನು ನೇಮಿಸುವುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಐದೂ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಸಚಿವರಾಗಲು ನಾಗೇಂದ್ರ ಮತ್ತು ತುಕಾರಾಂ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಈ ಬಾರಿ ಅದೃಷ್ಟ ನಾಗೇಂದ್ರ ಅವರ ಕೈಹಿಡಿಯಿತು. ಅಲ್ಲಿಂದಲೇ ಜಿಲ್ಲಾ ಕಾಂಗ್ರೆಸ್ನೊಳಗೆ ಶೀತಲ ಸಮರ ಆರಂಭವಾಗಿದೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಇತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಗೆ ಸಂಡೂರಿನ ಶಾಸಕ ತುಕಾರಾಂ ಬಂದಿರಲಿಲ್ಲ. ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ತಡವಾಗಿ ಸಭೆಗೆ ಆಗಮಿಸಿದರೇ, ಕಂಪ್ಲಿ ಶಾಸಕ ಗಣೇಶ್ ಬಂದಿದ್ದರಾದರೂ ಸಭೆ ಆರಂಭಕ್ಕೆ ಮೊದಲೇ ಹೊರಟು ಹೋದರು. ಜಿಲ್ಲಾ ಕಾಂಗ್ರೆಸ್ ಒಳಗೆ ನಾಯಕರ ನಡುವಿನ ಶೀತಲ ಸಮರ ಮುಂದೆ ಯಾವ ತಿರುವು ಪಡೆಯುತ್ತದೇ ಎನ್ನುವುದಕ್ಕೆ ಮುಂದೆ ಕಾಲವೇ ಉತ್ತರಿಸಬೇಕಿದೆ.












Click it and Unblock the Notifications