ಬಿಜೆಪಿ ಅಭ್ಯರ್ಥಿಗಳು ಪ್ರಕಟ : ಬಳ್ಳಾರಿಯಲ್ಲಿ ಗೆದ್ದ ಶ್ರೀರಾಮುಲು!
Recommended Video

ಬಳ್ಳಾರಿ, ಮಾರ್ಚ್ 21 : ಕರ್ನಾಟಕ ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 21 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಬಳ್ಳಾರಿ ಟಿಕೆಟ್ ಹಂಚಿಕೆಯಲ್ಲಿ ಬಿ.ಶ್ರೀರಾಮುಲು ಗೆಲುವು ಸಾಧಿಸಿದ್ದಾರೆ.
ಗುರುವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ದೇವೇಂದ್ರಪ್ಪ ಅವರು ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಚಿವ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ದೇವೇಂದ್ರಪ್ಪ ಅವರ ಪರವಾಗಿದ್ದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರು ಸಹೋದರ ಬಿ.ವೆಂಕಟೇಶ ಪ್ರಸಾದ್ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. ಉದ್ಯಮಿಯಾಗಿರುವ ಬಿ.ವೆಂಕಟೇಶ ಪ್ರಸಾದ್ ಎರಡು ದಿನಗಳ ಹಿಂದೆ ಬಿಜೆಪಿ ಸೇರಿದ್ದರು.
ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಿಂದ ದೇವೇಂದ್ರಪ್ಪ ಅವರು ಅಭ್ಯರ್ಥಿ. ಬಳ್ಳಾರಿಯ ಕದನ ಈ ಬಾರಿಯೂ ರಾಜ್ಯದ ಗಮನ ಸೆಳೆಯಲಿದೆಯೇ? ಕಾದು ನೋಡಬೇಕು......

ಉಪ ಚುನಾವಣೆಯ ಸೋಲು
2018ರ ನವೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿ.ಶ್ರೀರಾಮುಲು ಅವರ ಸಹೋದರಿ ಜೆ.ಶಾಂತ ಅವರು ಭಾರಿ ಮತಗಳ ಅಂತರದಿಂದ ಸೋತಿದ್ದರು. ಬಳಿಕ ಬಿ.ಶ್ರೀರಾಮುಲು ಅವರ ಪ್ರಾಬಲ್ಯ ಜಿಲ್ಲೆಯಲ್ಲಿ ಕಡಿಮೆಯಾಗಿತ್ತು. ಬಳ್ಳಾರಿ ಜಿಲ್ಲೆಗೆ ಚುನಾವಣಾ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ನೇಮಕ ಮಾಡಲಾಗಿತ್ತು.

ಬಿ.ಶ್ರೀರಾಮುಲು ಬ್ಯಾಟಿಂಗ್
ದೇವೇಂದ್ರಪ್ಪ ಅವರ ಪರವಾಗಿ ಬಿ.ಶ್ರೀರಾಮುಲು ಅವರು ಬ್ಯಾಟಿಂಗ್ ನಡೆಸಿದ್ದರು. ಬಿ.ನಾಗೇಂದ್ರ ಅವರು ಸಹೋದರ ಬಿ.ವೆಂಕಟೇಶ ಪ್ರಸಾದ್ ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ರಾಜ್ಯ ನಾಯಕರ ಮುಂದೆ ವಾದ ಮಂಡಿಸಿದ್ದರು.

ಜಾರಕಿಹೊಳಿ ಅವರ ಸಂಬಂಧಿ
ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ನಾಯಕರಾಗಿದ್ದ ದೇವೇಂದ್ರಪ್ಪ ಅವರು ಈಗ ಬಿಜೆಪಿಯಲ್ಲಿದ್ದಾರೆ. ದೇವೇಂದ್ರಪ್ಪ ಅವರು ಜಾರಕಿಹೊಳಿ ಸಹೋದರರ ಸಂಬಂಧಿಕರಾಗಿದ್ದಾರೆ. ಬಿ.ಶ್ರೀರಾಮುಲು, ಸೋಮಶೇಖರ ರೆಡ್ಡಿ ಅವರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಬಿಜೆಪಿ-ಕಾಂಗ್ರೆಸ್ ಹಣಾಹಣಿ
ಬಳ್ಳಾರಿ ಕ್ಷೇತ್ರದ ಚುನಾವಣೆ ಯಾವಾಗಲೂ ರಾಜ್ಯದ ಗಮನ ಸೆಳೆಯುತ್ತದೆ. ಈ ಬಾರಿ ವಿ.ಎಸ್.ಉಗ್ರಪ್ಪ ಮತ್ತು ದೇವೇಂದ್ರಪ್ಪ ಅವರು ಮುಖಾಮುಖಿಯಾಗಿದ್ದಾರೆ. ಯಾರಿಗೆ ಗೆಲುವು ಸಿಗಲಿದೆ? ಎಂದು ಕಾದು ನೋಡಬೇಕು.












Click it and Unblock the Notifications