ಕಾಂಗ್ರೆಸ್ ನಾಯಕರ ಆಶೀರ್ವಾದ ಪಡೆದ ಬಿ.ನಾಗೇಂದ್ರ
ಬಳ್ಳಾರಿ, ಫೆಬ್ರವರಿ 13 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿರುವ ಕೂಡ್ಲಿಗಿ ಮೀಸಲು ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರ ಮನೆಗಳಿಗೆ ತೆರಳಿ, ಆಶೀರ್ವಾದ ಪಡೆಯುತ್ತಿದ್ದಾರೆ.
ಬಿ. ನಾಗೇಂದ್ರ ಅವರು ಕುರುಗೋಡು ಕ್ಷೇತ್ರದ ಮಾಜಿ ಶಾಸಕ, ಬಳ್ಳಾರಿ ಗ್ರಾಮೀಣ ಕ್ಷೇತ್ರದದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಹಿರಿಯ ಕಾಂಗ್ರೆಸ್ ಮುಖಂಡ, ಗ್ರಾನೈಟ್ ಉದ್ಯಮಿ ಎನ್. ಸೂರ್ಯನಾರಾಯಣರೆಡ್ಡಿ ಅವರನ್ನು ಭೇಟಿ ಮಾಡಿದ್ದರು.
ಬಿ.ನಾಗೇಂದ್ರ ಕಾಂಗ್ರೆಸ್ಗೆ, ಶ್ರೀರಾಮುಲು ಹೇಳಿದ್ದೇನು?
ಈ ಸಂದರ್ಭದಲ್ಲಿ ಮಾತನಾಡಿದ ಎನ್. ಸೂರ್ಯನಾರಾಯಣ ರೆಡ್ಡಿ, 'ಬಿ. ನಾಗೇಂದ್ರ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ಉತ್ತಮವಾದ ನಿರ್ಧಾರ. ಉತ್ತಮವಾದ ಭವಿಷ್ಯ ಹೊಂದಿರುವ ನಾಗೇಂದ್ರ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸ್ತಿ ಆಗಲಿದ್ದಾರೆ' ಎಂದು ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಬಿ.ನಾಗೇಂದ್ರ ಅವರು, 'ಜಾತ್ಯಾತೀತ ನಿಲುಗಳ ಆಧಾರದ ಮೇಲೆ, ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ರಾಹುಲ್ಗಾಂಧಿ ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿದ್ದಾನೆ' ಎಂದರು.
ಬಿಜೆಪಿಗೆ ಆಘಾತ: ಕೈ ಹಿಡಿದ ಕೂಡ್ಲಿಗಿ ಶಾಸಕ ನಾಗೇಂದ್ರ
2013ರ ಚುನಾವಣೆಯಲ್ಲಿ ಬಿ.ನಾಗೇಂದ್ರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 71,477 ಮತಗಳನ್ನು ಪಡೆದಿದ್ದರು. ಶನಿವಾರ ರಾಹುಲ್ ಗಾಂಧಿ ಅವರು ಹೊಸಪೇಟೆಗೆ ಆಗಮಿಸಿದ್ದಾಗ ಕಾಂಗ್ರೆಸ್ ಸೇರಿದ್ದಾರೆ.