ಅಣ್ಣನ ಸಾಲಕ್ಕೆ ತಮ್ಮನ ಮನೆ ಬರೆಸಿಕೊಂಡು ಬಳ್ಳಾರಿ ಕಾಂಗ್ರೆಸ್ ನಾಯಕನ ದಾದಾಗಿರಿ
ಬೆಂಗಳೂರು, ಡಿ. 23: ಬಳ್ಳಾರಿಯ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಆಂಜನೇಯಲು ಬಡ್ಡಿ ವ್ಯವಹಾರ ಸಂಬಂಧ ತಮ್ಮ ಮಾಡಿದ ಸಾಲಕ್ಕೆ ಅಣ್ಣನ ಮೇಲೆ ಹಲ್ಲೆ ನಡೆಸಿ 2 ಕೋಟಿ ರೂ. ಮೊತ್ತದ ಮನೆ ಬರೆಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಗೆ ಸಾಲಗಾರನ ಸಹೋದರ ಪೂರ್ಣಚಂದ್ರ ಎಂಬಾತ ದೂರು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತರಾಗಿ ಗುರುತಿಸಿಕೊಂಡಿರುವ ಆಂಜನೇಯಲು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದರು. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಸದ್ಯ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಇವರಿಂದ ಡ್ಯಾನಿಯಲ್ ಎಂಬ ವ್ಯಕ್ತಿ 60 ಲಕ್ಷ ರೂ. ಸಾಲ ಪಡೆದಿದ್ದು ಎರಡು ವರ್ಷ ಶೇ. 5 ರೂ. ಮೊತ್ತದಲ್ಲಿ ಬಡ್ಡಿ ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ 40 ಲಕ್ಷ ರೂ. ಸಾಲ ತೀರಿಸಿದ್ದು, ಬಾಕಿ ಇಪ್ಪತ್ತು ಲಕ್ಷ ರೂ. ನೀಡಬೇಕಿತ್ತು ಎನ್ನಲಾಗಿದೆ. ಸಾಲಗಾರರ ಕಾಟ ತಾಳಲಾರದೇ ಡ್ಯಾನಿಯಲ್ ಪರಾರಿಯಾಗಿದ್ದಾನೆ.
ಇದರ ಬೆನ್ನಲ್ಲೇ ಡ್ಯಾನಿಯಲ್ ಸಹೋದರ ಪೂರ್ಣ ಚಂದ್ರ ಅವರನ್ನು ಅಪಹರಿಸಿ 20 ಲಕ್ಷ ರೂ. ಬಾಕಿಗೆ ಬದಲಿಗೆ ಸುಮಾರು 2 ಕೋಟಿ ರೂ. ಮೊತ್ತದ ಮನೆಯನ್ನು ಬಲವಂತವಾಗಿ ಬರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹಲ್ಲೆ ಮಾಡಿ ಮನೆ ಬರೆಸಿಕೊಂಡಿರುವ ಆಂಜನೇಯಲು ವಿರುದ್ಧ ಪೂರ್ಣಚಂದ್ರ ಬಳ್ಳಾರಿ ಕೌಲ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಆರೋಪಿಸಿದ್ದಾರೆ. ಆದರೆ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಡ್ಯಾನಿಯಲ್ ಸಾಲಗಾರಿಗೆ ವಾಯ್ಸ್ ಸಂದೇಶ ರವಾನಿಸಿದ್ದು, ಈ ಅಡಿಯೋ ವೈರಲ್ ಆಗಿದೆ.
ನಾನು ಡ್ಯಾನಿಯಲ್ ಮಾತನಾಡುತ್ತಿದ್ದೀನಿ ಕೆಲವರಿಗೆ ಬಡ್ಡಿ ಕಟ್ಟಿ ಸಾಲಗಾರನಾಗಿದ್ದೀನಿ. ಎಲ್ಲರೂ ನಂಬಿ ನನಗೆ ಆಧಾರ ರಹಿತ ಸಾಲ ಕೊಟ್ಟಿದ್ದೀರಿ. ಸಾಲ ಕೊಟ್ಟವರಿಗೆ ಮೋಸ ಮಾಡಬಾರದೆಂದು ನಾನು ಗಾಜುಲು ಶ್ರೀನಿವಾಸ್ ಅವರ ಬಳಿ ಮನವಿ ಮಾಡಿಕೊಂಡೆ.ಅವರು ನನ್ನ ಆಸ್ತಿ ಬರೆದುಕೊಡಲು ಹೇಳಿದರು. ನಾನು ನಿಮಗೆ ಮೋಸ ಮಾಡುವ ಉದ್ದೇಶವಿದ್ದರೆ ವಕೀಲರ ಮೂಲಕ ನೋಟಿಸ್ ಕೊಟ್ಟು ಬಚಾವ್ ಆಗಬಹುದು. ಆದರೆ ನನಗೆ ಆ ಉದ್ದೇಶವಿಲ್ಲ. ಎಲ್ಲರಿಗೂ ನನ್ನ ಆಸ್ತಿ ಮಾರಾಟ ಮಾಡಿ ಸಾಲ ತೀರಿಸಬೇಕು ಎಂದಿದ್ದೇನೆ. ಅದಕ್ಕೆ ಅವಕಾಶ ಕೊಡಿ. ಇದರ ಭಾಗವಾಗಿಯೇ ನಾನು ನೋಟಿಸ್ ಕೊಟ್ಟಿದ್ದೇನೆ. ಓಡಿ ಹೋಗಬೇಕು ಎಂಬ ಉದ್ದೇಶವಿದ್ದರೆ ನನ್ನ ಸಹೋದರನ ಸಮೇತ ಓಡಿ ಹೋಗುತ್ತಿದ್ದೆವು.
ಆಂಜನೇಯಲು ಬಳಿ 60 ಲಕ್ಷ ಸಾಲ ಮಾಡಿದ್ದೀನಿ ನಿಜ. ಆದರೆ, ಅವರಿಗೆ ಈಗಾಗಲೇ 40 ಲಕ್ಷ ಪಾವತಿಸಿದ್ದೇನೆ. ಒಂದು ಮಾಹೆ ತಪ್ಪದಂತೆ ಎರಡು ವರ್ಷ ಬಡ್ಡಿ ಕಟ್ಟಿದ್ದೇನೆ. ಬಾಕಿ ಇಪ್ಪತ್ತು ಲಕ್ಷ ಕೊಡಬೇಕು. ಇದಕ್ಕೆ ನನ್ನ ಸಹೋದರನ್ನು ಬಲವಂತವಾಗಿ ಅಪಹರಣ ಮಾಡಿಕೊಂಡು ಹೋಗಿ ಕೂಡಿ ಹಾಕಿ ಎರಡು ಕೋಟಿ ರೂ. ಮೊತ್ತದ ಮನೆ ಬರೆಸಿಕೊಂಡಿದ್ದಾರೆ. ಯಾರ ಸಾಲಕ್ಕೂ ಮೋಸ ಮಾಡಬೇಕೆಂಬ ಉದ್ದೇಶ ನನಗಿಲ್ಲ. ನನಗೆ ಜೀವ ಭಯವಿದೆ. ನೀವು ಅವಕಾಶ ಕೊಟ್ಟರೆ ನಿಮ್ಮ ಸಮಕ್ಷಮ ಬಂದು ಎಲ್ಲರ ಸಾಲ ತೀರಿಸುತ್ತೇನೆ. ನನ್ನ ಎಲ್ಲಾ ಆಸ್ತಿ ಮಾರಾಟ ಮಾಡಿ ಹಂಚುತ್ತೇನೆ. ಆದರೆ, ಬಡ ಆಂಜನೇಯಲು ಮಾಡಿರುವ ಕೃತ್ಯ ಕಾನೂನು ಸಮ್ಮತವಲ್ಲ. ನನಗೆ ಬಳ್ಳಾರಿಗೆ ಬರಲು ಅವಕಾಶ ಕೊಡಿ ಎಂದು ಡ್ಯಾನಿಯಲ್ ಮನವಿ ಮಾಡಿದ್ದಾನೆ.
Recommended Video