ಕುಡುಕರ ತಾಣವಾದ ಬಳ್ಳಾರಿ ಅಮರ ಜವಾನ್ ಸ್ಮಾರಕ
ಬಳ್ಳಾರಿಯ ಇತಿಹಾಸವೇ ಭಿನ್ನ. ಬಿಸಿಲು - ಬಿರು ಬಿಸಿಲಿಗೆ ಖ್ಯಾತಿ ಪಡೆದಿರುವ ಬಳ್ಳಾರಿ ಜಿಲ್ಲೆಯ ಇತಿಹಾಸದಲ್ಲಿ ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯದ ಹೋರಾಟ ಮತ್ತು ಸ್ವಾತಂತ್ರದ ನಂತರದ ಸಾಧಕರ, ಹೋರಾಟಗಾರರ ದೊಡ್ಡ ಸಾಲು ಇದೆ. ಈ ನಿಟ್ಟಿನಲ್ಲಿ ಇರುವ ಸ್ಮಾರಕಗಳು ಕೂಡ ಅಪರೂಪದ ಸ್ಮಾರಕಗಳೇ ಆಗಿವೆ.
ಬಳ್ಳಾರಿಯ ಕೊಳಗಲ್ಲು ರಸ್ತೆಯಲ್ಲಿ ಇರುವ 'ಟರ್ಕಿಷ್ ಪಾರ್ಕ್' - ದುರ್ಗಮ್ಮನ ಗುಡಿ ಸಮೀಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಹೊಂದಿಕೊಂಡೇ ನೂತನವಾಗಿ ನಿರ್ಮಾಣ ಆಗಿರುವ ಅಮರ್ ಜವಾನ್ ಸ್ಮಾರಕ ಮತ್ತು ಇನ್ನಿತರೆಗಳು ಸ್ಥಳೀಯರ ದೇಶಾಭಿಮಾನ, ಪ್ರೀತಿ - ಗೌರವಗಳನ್ನು ಸೂಚಿಸುತ್ತಿವೆ.
ಈ ನಿಟ್ಟಿನಲ್ಲಿ ಅಮರ್ ಜವಾನ್ ಸ್ಮಾರಕದ ಸ್ಥಿತಿ ಸಾವಿರಾರು ಜನರ ಮಧ್ಯೆಯೇ ಇದ್ದು, ನಿರ್ವಹಣೆ ಮತ್ತು ಸ್ವಚ್ಛತೆ ವಿಚಾರದಲ್ಲಿ ಎಲ್ಲರಿಂದಲೂ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ.

ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಲೇ ಹುತಾತ್ಮರಾಗಿ 'ಅಮರ'ರಾದ ವೀರ ಸೇನಾನಿಗಳ ಕೆಚ್ಚೆದೆಯ ಹೋರಾಟ, ತ್ಯಾಗ, ಸಮರ್ಪಣಾ ಮನೋಭಾವಗಳನ್ನು ಸ್ಮರಿಸಲಿಕ್ಕಾಗಿ 2012ರ ಜನವರಿ 26ರಂದು ಈ ಪಾರ್ಕ್ ನಿರ್ಮಾಣಗೊಂಡು, ಜನರಿಗೆ ಅರ್ಪಣೆ ಆಗಿದೆ. ವಾಸ್ತವದಲ್ಲಿ ಈ ಸ್ಥಳ ಸೂಕ್ತವಾದದ್ದು ಅಲ್ಲವಾದರೂ ಇರುವ ವ್ಯವಸ್ಥೆಯಲ್ಲಿಯೇ ಸೈನಿಕರ ಸೇವೆಯನ್ನು ಸ್ಮರಿಸಲು ಜಿಲ್ಲಾಡಳಿತ - ಮಹಾನಗರ ಪಾಲಿಕೆ ಪಾರ್ಕ್ ನಿರ್ಮಾಣ ಮಾಡಿದ್ದು ಸ್ವಾಗತಾರ್ಹ.
ದಕ್ಷಿಣ ಭಾರತದಲ್ಲೇ ಮೊತ್ತ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಈ ಮಾದರಿಯ ಸ್ಮಾರಕ ನಿರ್ಮಾಣವಾಗಿದೆ. ಶತ್ರುಗಳನ್ನು ವಿರೋಧಿಸುವ ಸಂದರ್ಭದಲ್ಲಿ 'ಅಮರ'ರಾಗುವ ಯೋಧರನ್ನು ಸ್ಮರಿಸುವಲ್ಲಿ ಈ ಪಾರ್ಕ್, ಮುಂದಿನ ಪೀಳಿಗೆ ಸೈನ್ಯ ಸೇರಲು ಪ್ರೋತ್ಸಾಹಿಸುತ್ತಿಲ್ಲ. ಬದಲಾಗಿ ನಿರಾಸೆ ಮೂಡಿಸುತ್ತಿದೆ.
ನಿರ್ಮಿತಿ ಕೇಂದ್ರ ಈ ಪಾರ್ಕ್ ನಿರ್ಮಿಸಿದೆ. ಜಿಲ್ಲಾ ಪೊಲೀಸ್ ಪ್ರಾರಂಭದಲ್ಲಿ ಪಾರ್ಕ್ ನಿರ್ವಹಿಸಿತು. ನಂತರ, ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಪಾರ್ಕ್ ನಿರ್ವಹಣೆಗಾಗಿ ಪ್ರತ್ಯೇಕ ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಯಲ್ಲೇ ಪಾರ್ಕ್ ನಿರ್ವಹಣೆ ಸಾಧ್ಯವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಅಮರ ಜವಾನ್ ಸ್ಮಾರಕ ಪುತ್ಥಳಿಗೆ ಅಳವಡಿಸಿರುವ ವಿದ್ಯುತ್ ದೀಪಗಳು ನೆಲಕಚ್ಚಿವೆ. ಗೇಟ್ಗಳಿಗೆ ಹಾಕಲಾಗಿದ್ದ ಬೀಗ ಕಾಣೆಯಾಗಿದೆ. ಕುಡುಕರು, ಬೀದಿ ಕಾಮಣ್ಣರು, ಬಯಲು ಮೂತ್ರಪ್ರಿಯರು, ಇಸ್ಪೇಟ್ ಆಟಗಾರರು, ಧೂಮಪಾನಿಗಳು, ಮಂದ ಬೆಳಕಿನಲ್ಲೇ ಏನೆಲ್ಲಾ ಖುಷಿ ಪಡುವವರ ತಾಣವಾಗಿ ಪಾರ್ಕ್ ರೂಪುಗೊಂಡಿದೆ.
ಬಳ್ಳಾರಿಯ ಭತ್ರಿ ಸಮೀಪ ಕಾಲುವೆಯ ಪಕ್ಕದಲ್ಲೇ ಇದ್ದಿದ್ದ ವಿಜಯನಗರ ಕಾಲದ ಬ್ರಿಟೀಷರ, ವಿದೇಶಿಯರ ಸಮಾಧಿಗಳು ಕಾಣೆಯಾಗಿವೆ. ಈ ಸ್ಮಾರಕಗಳತ್ತವೂ ಜಿಲ್ಲಾಡಳಿತ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಸ್ಥಳೀಯರು ಒತ್ತುವರಿ, ಮಣ್ಣು ಅಗೆತ ಮಾಡಿ ಈ ಸಮಾಧಿಗಳು ನೆಲದಲ್ಲಿ ಸಮಾಧಿಯಾಗಿವೆ.
ಇದೇ ರೀತಿಯಲ್ಲಿ ಅಮರಜವಾನ್ ಸ್ಮಾರಕ ಪಾರ್ಕ್ ಸಮಾಧಿ ಸ್ಥಿತಿ ತಲುಪಬಾರದು. ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ಪಾರ್ಕ್(ಮೋತಿ ಬ್ರಿಡ್ಜ್ ಪಕ್ಕದಲ್ಲಿ)ನ ರೀತಿಯಲ್ಲಿ ಈ ಪಾರ್ಕ್ನ ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸೂಕ್ತ ಯೋಜನೆ ರೂಪಿಸಬೇಕು. ಜಿಲ್ಲೆಗೆ ಕಾಲಿಡುತ್ತಿರುವ ಭಾರೀ ಕೈಗಾರಿಕೆಗಳಿಗೆ ನಿರ್ವಹಣೆಯ ಜವಾಬ್ದಾರಿ ನೀಡುವ ಚಿಂತನೆಯನ್ನಾದರೂ ರೂಪಿಸಬೇಕು ಎನ್ನುವುದು ಅನೇಕರ ಇಚ್ಛೆ.
ಇಲ್ಲವೇ, ನಾಡಿನ ಸೈನಿಕರ ಬಗ್ಗೆ ಅಪಾರವಾದ ಗೌರವ - ಪ್ರೀತಿ - ಹೆಮ್ಮೆ ಇರುವ ಸಂಘ - ಸಂಸ್ಥೆ ಸ್ವಯಂ ಈ ಪಾರ್ಕ್ನ ನಿರ್ವಹಣೆಗೆ ಮುಂದಾಗಿ ಸಂಬಂಧಿಸಿದವರನ್ನು ಸಂಪರ್ಕಿಸಬೇಕಿದೆ.












Click it and Unblock the Notifications