ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಸುರಿದ ಮಳೆಯಿಂದ ಉಂಟಾದ ಬೆಳೆ ನಷ್ಟವೆಷ್ಟು?
ಬಳ್ಳಾರಿ, ಸೆಪ್ಟೆಂಬರ್ 18: ಈಚೆಗೆ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಭಾರೀ ಮಳೆ ಸುರಿದಿದ್ದು, ಹಲವು ಮನೆಗಳು, ಹೊಲಗದ್ದೆಗಳು ಜಲಾವೃತವಾಗಿದ್ದವು. ಅಷ್ಟೇ ಅಲ್ಲ, ಮಳೆಯಿಂದ ಜಿಲ್ಲೆಯಲ್ಲಿ ಅಂದಾಜು 353.00 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಬಳ್ಳಾರಿ ಹಾಗೂ ಸಂಡೂರು ತಾಲೂಕಿನಲ್ಲಿ ಹೆಚ್ಚು ಪ್ರಮಾಣದ ಬೆಳೆನಷ್ಟ ಉಂಟಾಗಿದೆ ಎಂದು ಅಂದಾಜಿಸಿರುವುದಾಗಿ ಎಂದು ಕೃಷಿ ಇಲಾಖೆ ತಿಳಿಸಿದೆ.
ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಅಂದಾಜು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬಿತ್ತನೆಯ ಗುರಿಯನ್ನು ಹೊಂದಲಾಗಿತ್ತು. ಆ ಪೈಕಿ 29,792 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಕ್ತಾಯಗೊಂಡಿದೆ. ಇದಲ್ಲದೇ ಬಳ್ಳಾರಿ ತಾಲೂಕಿನಾದ್ಯಂತ ಅಂದಾಜು 58,549 ಹೆಕ್ಟರ್ ಪ್ರದೇಶದಲ್ಲಿ ಈ ಬಾರಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆ ಪೈಕಿ 52,143 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಕ್ತಾಯಗೊಂಡಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಸೆ 21ರಿಂದ ಅಸೆಂಬ್ಲಿ ಅಧಿವೇಶನ: ಈ ನಾಲ್ವರು ಸಚಿವರು ಗೈರು ಸಾಧ್ಯತೆ
ಬಳ್ಳಾರಿ ತಾಲೂಕು ಶೇ.89ರಷ್ಟು ಬಿತ್ತನೆ ಗುರಿಯಲ್ಲಿ, ಶೇ.72.86ರಷ್ಟು ಪ್ರದೇಶ ವ್ಯಾಪ್ತಿಯಲ್ಲಿ ಬೆಳೆನಷ್ಟ ಉಂಟಾಗಿರುವುದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಸಂಡೂರು ತಾಲೂಕಿನಲ್ಲಿ ಶೇ.99.3ರಷ್ಟು ಬಿತ್ತನೆ ಗುರಿಯಲ್ಲಿ ಶೇ.40.72 ರಷ್ಟು ಪ್ರದೇಶದಲ್ಲಿ ಬೆಳೆನಷ್ಟ ಉಂಟಾಗಿರಬಹುದೆಂದು ಕೃಷಿ ಇಲಾಖೆಯು ಅಂದಾಜಿಸಿದೆ.
ಬಳ್ಳಾರಿ ತಾಲೂಕಿನಲ್ಲಿ ಬೆಳೆದ ಜೋಳ, ಮೆಕ್ಕೆಜೋಳ, ಹತ್ತಿ ಹಾಗೂ ಶೇಂಗಾ ಬೆಳೆಗಳು ಸಂಪೂರ್ಣವಾಗಿ ನಷ್ಟ ಉಂಟಾಗಿವೆ. ಹೀಗಾಗಿ, ಬೆಳೆನಷ್ಟದ ಅಂದಾಜು ಪಟ್ಟಿ ಸಮೀಕ್ಷೆಯ ಮೂಲಕ ತಯಾರಿಸಲಾಗಿದ್ದು, ಸೆಪ್ಟೆಂಬರ್ 9ರಂದು ಸುರಿದ ಭಾರೀ ಮಳೆಗೆ ಇಷ್ಟೊಂದು ಪ್ರಮಾಣದ ಹಾನಿ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಜಿಲ್ಲೆಯ ಪಶ್ಚಿಮ ತಾಲೂಕುಗಳಲ್ಲೂ ಈ ಬೆಳೆ ನಷ್ಟದ ಸಮೀಕ್ಷೆ ಕಾರ್ಯ ಮುಂದುವರೆದಿದೆ. ಅತೀ ಶೀಘ್ರದಲ್ಲಿಯೇ ಬೆಳೆ ನಷ್ಟದ ಸಂಪೂರ್ಣ ಮಾಹಿತಿಯ ಅಂದಾಜು ಪಟ್ಟಿ ಸಿದ್ಧಪಡಿಸಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ತಿಳಿಸಿದ್ದಾರೆ.